ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತು ಮಾತು ಮರೆತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ ಜನಾಕ್ರೋಶ ಭುಗಿಲೆದ್ದಿದೆ.
ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡಬೇಕು. ಅಲ್ಲಿನ ಪರಿಸರವನ್ನು ಗಣಿ, ಕೈಗಾರಿಕೆ ಮಾಫಿಯಾಗಳಿಂದ ಕಾಪಾಡಬೇಕು, ಆರನೇ ಪರಿಚ್ಛೇದದ ಮಾನ್ಯತೆ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಡಿ ನಾಡಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮಾರ್ಚ್ 24 ರಂದು ಪರಿಸರ ಕಾರ್ಯಕರ್ತ ಮತ್ತು ರಾಮನ್ ಮ್ಯಾಗ್ಸಾಸೆ ಪ್ರಶಸ್ತಿ ವಿಜೇತ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದೆ.
ಚೀನಾ ಜೊತೆಗಿನ ಗಡಿ ಸಂಘರ್ಷ ಶಮನಕ್ಕೆ ಸಂಬಂಧಪಟ್ಟಂತೆ ಕಳೆದ ಒಂದು ವರ್ಷದಿಂದ ಮಾತುಕತೆ ನಡೆಯುತ್ತಿದೆ. ಈ ತಿಂಗಳ ಆರಂಭದಲ್ಲಿ ಮೂರನೇ ಸುತ್ತಿನ ಮಾತುಕತೆ ಕೂಡ ಮುರಿದು ಬಿದ್ದಿದೆ. ಆ ನಂತರ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಆಯಕಟ್ಟಿನ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಕೇಂದ್ರ ಗೃಹ ಸಚಿವಾಲಯವು 2019 ರಲ್ಲಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಬಳಿಕ ಲಡಾಖ್ಗೆ ಸಾಂವಿಧಾನಿಕ ಸುರಕ್ಷತೆಗಳನ್ನು ನೀಡಬೇಕು ಎಂಬ ಅಲ್ಲಿನ ಜನರ ಬೇಡಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.
‘ದಿ ವೈರ್’ನೊಂದಿಗೆ ಮಾತನಾಡಿರುವ ಲಡಾಖ್ನಿಂದ 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಡಿಎ ಸದಸ್ಯ ಸಜ್ಜದ್ ಹುಸೇನ್, ಲಡಾಖ್ಗೆ ಸಂವಿಧಾನ 6ನೇ ಶೆಡ್ಯೂಲ್ ಸ್ಥಾನಮಾನ ನೀಡುವುದು ಮತ್ತು ರಾಜ್ಯದ ಸ್ಥಾನಮಾನ ನೀಡುವ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕೇಂದ್ರದೊಂದಿಗಿನ ಮಾತುಕತೆಗಳು ವಿಫಲವಾದ ಕಾರಣ ಮಾರ್ಚ್ 24 ರಿಂದ ಮಾರ್ಚ್ 27 ರವರೆಗೆ ನಾವು ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಜೊತೆ ಸೇರಿಕೊಳ್ಳುತ್ತೇವೆ ಎಂದಿದ್ದಾರೆ.
“ರಾಜ್ಯದ ಸ್ಥಾನಮಾನ ಮತ್ತು 6ನೇ ಶೆಡ್ಯೂಲ್ ಲಡಾಖಿಗಳ ಹೃದಯಕ್ಕೆ ಸಾಮಿಪ್ಯ ಇರುವ ವಿಷಯಗಳು. ಇದು ಕೇವಲ ನಮ್ಮ ಬೇಡಿಕೆಯಲ್ಲ. ಇದು ಲಡಾಖ್ ಜನರ ಭಾವನೆ ಮತ್ತು ಆಕಾಂಕ್ಷೆಯಾಗಿದೆ. ನಾವು ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ” ಎಂದು ಪ್ರಮುಖ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಹುಸೇನ್ ಹೇಳಿದ್ದಾರೆ.
ಕಳೆದ 15 ದಿನಗಳಿಂದ ಲೇಹ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ಗೆ ಬೆಂಬಲವಾಗಿ ಕೆಡಿಎ ಅರ್ಧ ದಿನದ ಬಂದ್ ಕರೆ ನೀಡಿದ ನಂತರ ಮಾರ್ಚ್ 20 ರಂದು ಬುಧವಾರ ಕಾರ್ಗಿಲ್ನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಲಡಾಖ್ನ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾರ್ಗಿಲ್ನ ಮುಖ್ಯ ಮಾರುಕಟ್ಟೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸ್ಥಾನಮಾನ ಮತ್ತು 6ನೇ ಶೆಡ್ಯೂಲ್ ಅವರ ಪ್ರಮುಖ ಬೇಡಿಕೆಯಾಗಿತ್ತು. ಈ ಪ್ರತಿಭಟನೆಯನ್ನು ಪ್ರಜಾಪ್ರಭುತ್ವದ ಮರುಸ್ಥಾಪನೆ ಎಂದು ಅಲ್ಲಿನ ಜನರು ಹೇಳಿದ್ದಾರೆ.
ಕೆಡಿಎಯ ಸಹ ಸಂಚಾಲಕ ಮತ್ತು ಜಮ್ಮು ಕಾಶ್ಮೀರದ ಮಾಜಿ ಶಾಸಕ ಅಸ್ಗರ್ ಅಲಿ ಕರ್ಬಲೈ ಅವರು ಫಾತಿಮಾ ಚೌಕ್ನಿಂದ ಕಾರ್ಗಿಲ್ನ ಹುಸೇನಿ ಪಾರ್ಕ್ವರೆಗೆ ರ್ಯಾಲಿಯನ್ನು ಮುನ್ನಡೆಸಿದ್ದಾರೆ. ಕೇಂದ್ರ ಸರ್ಕಾರದೊಂದಿಗಿನ ಮಾತುಕತೆ ವಿಫಲಗೊಂಡ ಬಳಿಕ ಕರ್ಬಲೈ ಅವರು ಹೋರಾಟವನ್ನು ತೀವ್ರಗೊಳಿಸಿದ್ದಾರೆ.
“ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿದೆ. ಲಡಾಖ್ ಜನರ ಧ್ವನಿಯನ್ನು ಬಲ ಪ್ರಯೋಗ ಮಾಡಿ ಹತ್ತಿಕ್ಕಬಹುದು ಎಂದು ಕೇಂದ್ರ ಸರ್ಕಾರ ಅಂದುಕೊಂಡಿದೆ. ಆದರೆ, ಲಡಾಖ್ನ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಟದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಿದ್ದಾರೆ” ಎಂದು ಕರ್ಬಲೈ ಹೇಳಿದ್ದಾರೆ.
ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಯಾಕೆ?
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ, ಅಲ್ಲಿ ಹೊರಗಿನವರಿಗೆ ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಸಂಭವಿಸಬಹುದಾದ ಪರಿಸರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಪರಿಸರ ಹೋರಾಟಗಾರ ವಾಂಗ್ಚುಕ್ ಅವರು ಮಾರ್ಚ್ 6ರಿಂದ ಕೇವಲ ನೀರು ಮತ್ತು ಉಪ್ಪು ಸೇವಿಸುತ್ತಾ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮುಂದೆ ಲಡಾಖ್ನಲ್ಲಿ ಗಣಿಗಾರಿಕೆ, ಕೈಗಾರಿಕೆ ಸ್ಥಾಪನೆಯಾದೆ ಪರಿಸರಕ್ಕೆ ಉಂಟಾಗಲಿರುವ ಅತೀವ ಹಾನಿಯ ಕುರಿತು ವಾಂಗ್ಚುಕ್ ಕಳವಳ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರು ವಾಂಗ್ಚುಕ್ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
2019ರ ಸಂಸತ್ತಿನ ಚುನಾವಣೆ ಮತ್ತು 2020ರ ಜಮ್ಮು ಕಾಶ್ಮೀರದ ಹಿಲ್ ಕೌನ್ಸಿಲ್ ಚುನಾವಣೆಗಳಿಗೆ ಮುಂಚಿತವಾಗಿ ತನ್ನ ಚುನಾವಣಾ ಪ್ರಣಾಳಿಕೆಗಳಲ್ಲಿ ಲಡಾಖ್ ಜನರಿಗೆ ನೀಡಿದ್ದ ಭರವಸೆಗಳನ್ನು ವಾಂಗ್ಚುಕ್ ಅವರು ವಿಡಿಯೋ ಸಂದೇಶ ಮೂಲಕ ಬಿಜೆಪಿ ನಾಯಕರಿಗೆ ನೆನಪಿಸುವ ಕೆಲಸ ಮಾಡಿದ್ದಾರೆ.
“ಈ ಸರ್ಕಾರವು ಭಾರತವನ್ನು ‘ಪ್ರಜಾಪ್ರಭುತ್ವದ ತಾಯಿ’ ಎಂದು ಕರೆಯುತ್ತದೆ. ಆದರೆ, ಭಾರತವು ಲಡಾಖ್ನ ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರಾಕರಿಸಿದೆ. ಅದನ್ನು ನವದೆಹಲಿಯಿಂದ ನಿಯಂತ್ರಿಸಲ್ಪಡುವ ಅಧಿಕಾರಶಾಹಿಗಳ ಅಧೀನದಲ್ಲಿ ಇರಿಸಿದೆ. ಹಾಗಾಗಿ, ಲಡಾಖ್ನ ವಿಷಯದಲ್ಲಿ ಭಾರತವನ್ನು ಪ್ರಜಾಪ್ರಭುತ್ವದ ‘ಮಲತಾಯಿ’ ಎಂದು ಕರೆಯಬಹುದು” ಎಂದು ವಾಂಗ್ಚುಕ್ ಇತ್ತೀಚಿನ ಎಕ್ಸ್ ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
BEGINNING OF DAY 13 OF MY #CLIMATEFAST
250 people slept hungy in – 12 °C to remind the Indian Government of their promises to safegurad Ladakh's environment and tribal indigenous culture.
First of all many heartfelt thanks to all who participated in yesterday's protests in… pic.twitter.com/jU1vZmbCWP— Sonam Wangchuk (@Wangchuk66) March 18, 2024
ಲಡಾಖ್ಗೆ 6ರನೇ ಶೆಡ್ಯೂಲ್ಗಾಗಿ ಜನಾಂದೋಲನ (People’s Movement for Sixth Schedule for Ladakh) ಎಂಬ ಬ್ಯಾನರ್ನಡಿಯಲ್ಲಿ ಲೇಹ್ನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವ ವಾಂಗ್ಚುಕ್ ಅವರು, ಇಡೀ ದೇಶಕ್ಕೆ ಲಡಾಖ್ನ ವಾಸ್ತವತೆಯನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲಡಾಖ್ನ ಕುರುಬರು, ರೈತರು ಸೇರಿದಂತೆ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಜನರು ವಾಂಗ್ಚುಕ್ ಅವರ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ದಕ್ಷಿಣ ಭಾರತದ ಕೈಗಾರಿಗಳು ಮತ್ತು ಚೀನಾದ ಆಕ್ರಮಣದಿಂದ ಲಡಾಖ್ ಅನ್ನು ರಕ್ಷಿಸಿ ಎಂಬುವುದು ಈ ಜನರ ಕೂಗಾಗಿದೆ.
ಸಂವಿಧಾನದ 244ನೇ ವಿಧಿಯಡಿ ಬರುವ 6ನೇ ಪರಿಚ್ಛೇದವು, ಲಡಾಖ್ನ ಬುಡಕಟ್ಟು ಜನರಿಗೆ ಸಾಂವಿಧಾನಿಕ ಸುರಕ್ಷತೆಗಳನ್ನು ಒದಗಿಸುತ್ತದೆ. ಭೂಮಿ, ಸಾರ್ವಜನಿಕ ಆರೋಗ್ಯ ಮತ್ತು ಕೃಷಿ ಸಂಬಂಧ ಕಾನೂನುಗಳನ್ನು ರೂಪಿಸಲು ಸ್ವಾಯತ್ತ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ.
ಇದನ್ನೂ ಓದಿ : ಜಾಗತಿಕ ಸಂತೋಷ ಸೂಚ್ಯಂಕದಲ್ಲಿ 126ನೇ ಸ್ಥಾನಕ್ಕಿಳಿದ ಭಾರತ