ಬಿಜೆಪಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿರುವ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ತಮ್ಮ ರಾಜಕೀಯ ವಿರೋಧಿಯಾದ ಬಿಜೆಪಿಯನ್ನು “ದೇಶ ಮತ್ತು ಮಾನವಕುಲದ ಶತ್ರು” ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಪಕ್ಷದ ಪ್ರಣಾಳಿಕೆಯ ಬಗ್ಗೆ ಇಂದು ಮಾಧ್ಯಮಗಳಿಗೆ ವಿವರಣೆ ನೀಡಿ, 21 ಡಿಎಂಕೆ ಅಭ್ಯರ್ಥಿಗಳಿಗೆ ಬೆಂಬಲ ಕೋರಿ ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಎದುರಿಸಲಿರುವ ಶತ್ರುಗಳು ನಮ್ಮ ರಾಜಕೀಯ ಶತ್ರುಗಳು ಮಾತ್ರವಲ್ಲ, ಅವರು ಭಾರತದ ಶತ್ರುಗಳು, ಭಾರತೀಯ ಸಂವಿಧಾನದ ಶತ್ರುಗಳು’ ಎಂದು ಆಕ್ರೋಶ ಹೊರಹಾಕಿದ್ದಾರೆ.
“ಭಾರತದ ಏಕತೆ ಮತ್ತು ಸಮಗ್ರತೆಯ ಶತ್ರುಗಳು; ಭಾರತದ ಬಹುತ್ವ ಮತ್ತು ಜಾತ್ಯತೀತತೆಯ ಶತ್ರುಗಳು. ಒಕ್ಕೂಟದ ಶತ್ರುಗಳು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅವರು ಮನುಕುಲದ ಶತ್ರುಗಳು” ಎಂದು ಮುಖ್ಯಮಂತ್ರಿ ಹೇಳಿದರು.
“ತಮಿಳುನಾಡಿನ ಜನತೆ ಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗಿದ್ದಾರೆ ಎಂಬುದು ಸ್ಪಷ್ಟವಾಗಿರುವುದರಿಂದ ಬಿಜೆಪಿ ಈಗ ತಮಿಳು ಜನರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿದೆ. ಪ್ರಧಾನಿಯಿಂದ ಹಿಡಿದು ಕೇಂದ್ರ ಸಚಿವರು, ಪಕ್ಷದ ನಾಯಕರವರೆಗೂ ಎಲ್ಲರೂ ಭಾಗಿಯಾಗಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ತಮಿಳುನಾಡಿಗೆ ಮಾಡಿರುವ ಕೆಲಸಗಳ ಬಗ್ಗೆ ಹೇಳಲು ಏನೂ ಇಲ್ಲದ ಕಾರಣ ಅವರು ಡಿಎಂಕೆಯನ್ನು ಟೀಕಿಸುತ್ತಿದ್ದಾರೆ” ಎಂದು ಅವರು ಹೇಳಿದರು.
ಎಂಕೆ ಸ್ಟಾಲಿನ್ ಅವರು ಬುಧವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು, ಪುದುಚೇರಿಗೆ ರಾಜ್ಯ ಸ್ಥಾನಮಾನ, ನೀಟ್ ಪರೀಕ್ಷೆಗಳ ನಿಷೇಧ, ಮುಖ್ಯಮಂತ್ರಿಗೆ ರಾಜ್ಯಪಾಲರನ್ನು ನೇಮಿಸುವ ಅಧಿಕಾರವನ್ನು ನೀಡುವುದು ಸೇರಿದಂತೆ ಇತರ ಭರವಸೆಗಳನ್ನು ನೀಡಿದರು. ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದಕ್ಕಾಗಿ ಸ್ಟಾಲಿನ್ ತಮ್ಮ ಸಹೋದರಿ ಕನಿಮೊಳಿ ಅವರನ್ನು ಶ್ಲಾಘಿಸಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನೂ ಪಕ್ಷ ಪ್ರಕಟಿಸಿದೆ.
ಇದನ್ನೂ ಓದಿ; ಪೊನ್ಮುಡಿ ಸಂಪುಟ ಮರು ಸೇರ್ಪಡೆಗೆ ನಿರಾಕರಣೆ; ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಕಿಡಿ