2019ರಲ್ಲಿ ಕೇಂದ್ರವು ರದ್ದುಪಡಿಸಿದ ಸಂವಿಧಾನದ 35ಎ ಪರಿಚ್ಛೇದವು ಜಮ್ಮು ಮತ್ತು ಕಾಶ್ಮೀರದ ಅನಿವಾಸಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸಂವಿಧಾನದ 35ಎ ಪರಿಚ್ಛೇದವು ಆ ರಾಜ್ಯ ಸರ್ಕಾರಕ್ಕೆ ತನ್ನ ಖಾಯಂ ನಿವಾಸಿಗಳನ್ನು ವ್ಯಾಖ್ಯಾನಿಸಲು ಅಧಿಕಾರ ನೀಡಿತ್ತು. ಆರ್ಟಿಕಲ್ 35 ಎ ಪ್ರಕಾರ, ಕಾನೂನು ಜಾರಿಗೆ ಬಂದಾಗ ಅಂದರೆ ಮೇ 14, 1954ರಿಂದ ರಾಜ್ಯದಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಮತ್ತು 10 ವರ್ಷಗಳ ಕಾಲ ರಾಜ್ಯದಲ್ಲಿ ವಾಸಿಸುತ್ತಿದ್ದವರನ್ನು ಜಮ್ಮು ಮತ್ತು ಕಾಶ್ಮೀರದ ಖಾಯಂ ನಿವಾಸಿಗಳೆಂದು ಪರಿಗಣಿಸಲಾಗುತ್ತದೆ. ಇದು ಭೂಮಿಯನ್ನು ಖರೀದಿಸಲು ಮತ್ತು ಸರ್ಕಾರಿ ಉದ್ಯೋಗವನ್ನು ಪಡೆಯುವ ವಿಶೇಷ ಹಕ್ಕು ಸೇರಿದಂತೆ ಖಾಯಂ ನಿವಾಸಿಗಳ ಸವಲತ್ತುಗಳನ್ನು ಸಹ ನೀಡುತ್ತದೆ.
”ಆದರೆ ಈಗೀನ ಕಾನೂನು ಜಮ್ಮು ಕಾಶ್ಮೀರದಲ್ಲಿ ಉದ್ಯೋಗದ ಸಮಾನ ಅವಕಾಶ, ಆಸ್ತಿ ಸಂಪಾದಿಸಲು ಮತ್ತು ಅಲ್ಲಿಯ ಅನಿವಾಸಿಗಳಿಗೆ ನೆಲೆಸುವ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ಸೋಮವಾರ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಹೇಳಿದೆ.
ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವುದನ್ನು ಮತ್ತು 2019ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವುದನ್ನು ಪ್ರಶ್ನಿಸಿ 20ಕ್ಕೂ ಹೆಚ್ಚು ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ.
ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂತಹ ಹಕ್ಕುಗಳ ವಿಭಜನೆಯ ಬಗ್ಗೆ ”ಚಿಂತನೆ ಮಾಡಲಾಗದು” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ಹೇಳಿದ್ದಾರೆ. 2019ರ ಆಗಸ್ಟ್ನಲ್ಲಿ ಹಿಂದಿನ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿ ಮತ್ತು ಆರ್ಟಿಕಲ್ 35A ಅನ್ನು ರದ್ದುಗೊಳಿಸಿದಾಗ ಸರ್ಕಾರವು ತನ್ನನ್ನು ತಾನು ಸರಿಪಡಿಸಿಕೊಂಡಿದೆ ಎಂದು ಮೆಹ್ತಾ ಹೇಳಿದರು.
”ಹಿಂದಿನ ತಪ್ಪುಗಳು ಮುಂದಿನ ಪೀಳಿಗೆಗೆ ಆಗಬಾರದು” ಎಂದು ಮೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ: ಜಾತಿಗಣತಿಗೆ ಕೇಂದ್ರ ಸರಕಾರಕ್ಕೆ ಮಾತ್ರ ಅಧಿಕಾರವಿದೆ: ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ