ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಅರುಣಾಚಲ ಪ್ರದೇಶದ ವಲಸೆ ಕಾರ್ಮಿಕನೋರ್ವನನ್ನು ಥಳಿಸಿ ಹತ್ಯೆ ಮಾಡಲಾಗಿದೆ.
ಜಿಲ್ಲೆಯ ಮುವಾಟ್ಟುಪುಳ ಬಳಿಯ ವಳಕೋಮ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಅಶೋಕದಾಸ್ (24) ಗುರುವಾರ ಸಂಜೆ ಮಹಿಳಾ ಸಹೋದ್ಯೋಗಿಯನ್ನು ಭೇಟಿ ಮಾಡಲು ಹೋದಾಗ ತಂಡವೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡ ಅವರು ಮರುದಿನ ಸಾವನ್ನಪ್ಪಿದರು. ಘಟನೆಗೆ ಸಂಬಂಧಿಸಿದಂತೆ 10 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಅಡುಗೆ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕ ಗುರುವಾರ ಸಂಜೆ ತನ್ನ ಸಹೋದ್ಯೋಗಿಯ ಬಾಡಿಗೆ ಕೋಣೆಗೆ ಹೋಗಿದ್ದ. ಅಲ್ಲಿಂದ ಅವರು ಹಿಂತಿರುಗುತ್ತಿದ್ದಾಗ, ಗುಂಪೊಂದು ಅಶೋಕದಾಸ್ ಅವರನ್ನು ಅಡ್ಡಗಟ್ಟಿ ಪ್ರಶ್ನಿಸಲು ಪ್ರಾರಂಭಿಸಿದೆ. ಈ ವೇಳೆ ಅಶೋಕ್ದಾಸ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಗುಂಪು ಅಶೋಕದಾಸ್ ಅವರನ್ನು ರಸ್ತೆಬದಿಯಲ್ಲಿ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದೆ.
ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಶೋಕದಾಸ್ ತೀವ್ರ ರಕ್ತಸ್ರಾವವಾಗಿ ಬಿದ್ದಿರುವುದು ಕಂಡು ಬಂದಿದೆ. ಆತನ ಎದೆ ಮತ್ತು ತಲೆಗೆ ಗಾಯಗಳಾಗಿತ್ತು, ಅವರು ಅವರನ್ನು ಹತ್ತಿರದ ಆಸ್ಪತ್ರೆಗೆ ಮತ್ತು ನಂತರ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದರು, ಅಲ್ಲಿ ಅವರು ಶುಕ್ರವಾರ ನಿಧನರಾಗಿದ್ದರು.
ದಾಳಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕದಾಸ್ ಭೇಟಿಯಾಗಲು ಹೋಗಿದ್ದ ಮಹಿಳೆ ಆತನ ವಿರುದ್ಧ ಯಾವುದೇ ದೂರು ನೀಡಿಲ್ಲ ಎನ್ನುವುದು ತಿಳಿದು ಬಂದಿದೆ.
ಹತ್ಯೆಗೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ವೈಕ್ಕಂ ಮೂಲದ ವಿಜೀಶ್, ಸತ್ಯನ್, ಅನೀಶ್, ಸೂರಜ್, ಕೇಶವ್, ಇಲಿಯಾಸ್ ಕೆ ಪಾಲ್, ಅಮಲ್, ಅತುಲ್ ಕೃಷ್ಣ, ಸನಲ್ ಮತ್ತು ಎಮಿಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಮೊದಲು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಾಥಮಿಕ ತನಿಖೆಯ ಬಳಿಕ ಪ್ರಕರಣದಲ್ಲಿ ಹೆಚ್ಚುವರಿ ಸೆಕ್ಷನ್ಗಳನ್ನು ಸೇರಿಸಲಾಗಿದೆ, IPC ಸೆಕ್ಷನ್ 302ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತೇನೆ’: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್