ಸುಪ್ರೀಂಕೋರ್ಟ್ ನೀಡಿದ 2018ರ ಮಾರ್ಗಸೂಚಿಯಂತೆ ದ್ವೇಷ ಭಾಷಣ ಪ್ರಕರಣವನ್ನು ನಿಭಾಯಿಸುವ ಸಂಬಂಧ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೊಡೆಲ್ ಅಧಿಕಾರಗಳನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ತೆಹಸೀನ್ ಪೂನಾವಾಲಾ ಪ್ರಕರಣದ ಅರ್ಜಿ ವಿಚಾರಣೆ ವೇಳೆ, ಗುಂಪು ಹಿಂಸಾಚಾರ ಮತ್ತು ಥಳಿತವನ್ನು ತಡೆಯಲು ನ್ಯಾಯಾಲಯವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ 28 ರಾಜ್ಯಗಳು ನೋಡಲ್ ಅಧಿಕಾರಿಗಳನ್ನು ನೇಮಿಸಿವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ದ್ವೇಷದ ಭಾಷಣವನ್ನು ತಡೆಯಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿ ಕೇಂದ್ರವು ಸಲ್ಲಿಸಿದ ಸ್ಥಿತಿ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಲಾಗಿದೆ ಎಂದು ಲೈವ್ಲಾ ವರದಿ ಮಾಡಿದೆ.
ಆ.25ರಂದು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ನೋಡಲ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಗಳಿಂದ ಮಾಹಿತಿಯನ್ನು ಕ್ರೋಢೀಕರಿಸಿ ಮತ್ತು 3 ವಾರಗಳಲ್ಲಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಗೃಹ ಸಚಿವಾಲಯವನ್ನು ಕೇಳಿತ್ತು. ಯಾವುದೇ ರಾಜ್ಯ ಸರ್ಕಾರವು ಹೇಳಿದ ವಿವರಗಳನ್ನು ಒದಗಿಸದಿದ್ದರೆ, ಅದರ ಬಗ್ಗೆ ಉನ್ನತ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿತ್ತು.
2018ರಲ್ಲಿ ಸಂಸತ್ತಿಗೆ ಹಿಂಸಾಚಾರದ ವಿರುದ್ಧ ವಿಶೇಷ ಕಾನೂನನ್ನು ರಚಿಸುವಂತೆ ಶಿಫಾರಸು ಸುಪ್ರಿಂಕೋರ್ಟ್ ಮಾಡಿತ್ತು. ಕಾನೂನಿನ ಭಯ ಸುಸಂಸ್ಕೃತ ಸಮಾಜದ ಅಡಿಪಾಯವಾಗಿದೆ ಎಂದು ಹೇಳಿತ್ತು. ದೇಶಾದ್ಯಂತ ಗುಂಪು ಹತ್ಯೆಯನ್ನು ತಡೆಯಲು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ ಮತ್ತು ನೋಡಲ್ ಅಧಿಕಾರಿಗಳನ್ನು ನೇಮಿಸಲು ಆದೇಶವನ್ನು ನೀಡಿದೆ.
ಗುಂಪು ಹತ್ಯೆ ಮತ್ತು ಹಿಂಸಾಚಾರವನ್ನು ತಡೆಯಲು ನೀಡಿದ ನಿರ್ದೇಶನಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ಕೇಂದ್ರ ಸರಕಾರ ಮತ್ತು 10 ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್ 2019ರಲ್ಲಿ ತರಾಟೆಗೆ ತೆಗೆದುಕೊಂಡಿತ್ತು.
ಈ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸೂಚಿಸಿದೆ. ಈ ಸಮಿತಿಯು ದ್ವೇಷ ಭಾಷಣದ ದೂರುಗಳ ವಿಷಯ ಮತ್ತು ನಿಖರತೆ ಎರಡನ್ನೂ ಮೌಲ್ಯಮಾಪನ ಮಾಡಲಿದೆ. ಸಮಿತಿ ತನಿಖಾಧಿಕಾರಿಗೆ ನಿರ್ದಿಷ್ಠ ನಿರ್ದೇಶನಗಳನ್ನು ನೀಡಲಿದೆ ಎಂದು ಹೇಳಿದ್ದಾರೆ.
ಸಮಿತಿಯು ಒಂದು ಪ್ರಕರಣದ ಬಗ್ಗೆ ತಿಳಿಸಿದ ನಂತರ ನಿಗದಿತ ಅವಧಿಯೊಳಗೆ ಸಭೆ ಸೇರಬೇಕಾಗುತ್ತದೆ. ನಿಯಮಿತವಾಗಿ ಪ್ರಕರಣದಲ್ಲಿನ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಲೈವ್ ಲಾ ವರದಿ ಹೇಳಿದೆ.
ಇದನ್ನು ಓದಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ನೇಮಕಾತಿ ಪ್ರಶ್ನಿಸಿದ ಅರ್ಜಿ ವಜಾ