ಪ್ರಧಾನಿ ನರೇಂದ್ರ ಮೋದಿ ರಾಂಚಿ ಭೇಟಿ ವೇಳೆ ಭದ್ರತಾ ಲೋಪವೆಸಗಿದ ಆರೋಪದ ಮೇಲೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಗೌರವ ನಮನ ಸಲ್ಲಿಸಲು ಮೋದಿ ಬಿರ್ಸಾ ಮುಂಡಾ ಮೆಮೊರಿಯಲ್ ಪಾರ್ಕ್ಗೆ ಬುಧವಾರ ತೆರಳಿದ್ದರು. ಈ ವೇಳೆ ಮಹಿಳೆಯೊಬ್ಬರು ಅನಿರೀಕ್ಷಿತವಾಗಿ ಪ್ರಧಾನಿಯವರ ಬೆಂಗಾವಲು ಪಡೆಯತ್ತ ನುಗ್ಗಿದ್ದರು. ಮಹಿಳೆಯನ್ನು ತಕ್ಷಣವೇ ಪ್ರಧಾನಿಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಭೇಟಿ ವೇಳೆ ಕರ್ತವ್ಯಲೋಪ ಎಸಗಿದ ಎಎಸ್ಐ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳನ್ನು ಅಮಾನತುಗೊಳಿಸಲಾಗಿದೆ. ಎಎಸ್ಐ ಅಬು ಜಾಫರ್, ಕಾನ್ಸ್ಟೆಬಲ್ಗಳಾದ ಚೋಟೇಲಾಲ್ ತುಡು ಮತ್ತು ರಂಜನ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಪ್ರಧಾನಿಯ ಭದ್ರತೆಯನ್ನು ಉಲ್ಲಂಘಿಸಿ ಬೆಂಗಾವಲು ಪಡೆಯತ್ತ ನುಗ್ಗಿದ ಮಹಿಳೆಯನ್ನು ಸಂಗೀತಾ ಝಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಪತಿಯೊಂದಿಗೆ ಅಸಮಾಧಾನಗೊಂಡು ಆತನ ವಿರುದ್ಧ ದೂರು ನೀಡಲು ಮೋದಿ ಬಳಿಗೆ ಓಡಿ ಬಂದಿರುವುದಾಗಿ ಹೇಳಲಾಗಿದೆ.
ರಾಂಚಿಯ ಪೊಲೀಸ್ ಅಧೀಕ್ಷಕರಾದ ಚಂದನ್ ಕುಮಾರ್ ಸಿನ್ಹಾ ಈ ಕುರಿತು ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿ ಮಹಿಳೆಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಮಹಿಳೆ ಜಾರ್ಖಂಡ್ನ ದಿಯೋಘರ್ ಜಿಲ್ಲೆಯ ಜಮುನಿ ಗ್ರಾಮದವರು ಎಂದು ತಿಳಿದು ಬಂದಿದೆ. ಇವರು 2012ರಲ್ಲಿ ವಿವಾಹವಾಗಿರುವುದಾಗಿ ಹೇಳಿದ್ದಾರೆ. ಈಕೆ 2016ರಿಂದ ತನ್ನ ಪತಿಯ ಜೊತೆ ಮನಸ್ತಾಪ ಹೊಂದಿರುವುದಾಗಿ ಹೇಳಿದ್ದಾರೆ. ದಂಪತಿಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಮಹಿಳೆ ಪತಿಯ ಸಂಬಳ ತನ್ನ ಬ್ಯಾಂಕ್ ಖಾತೆಗೆ ಜಮೆ ಆಗಬೇಕು ಎಂದು ಆಗ್ರಹಿಸಿದ್ದಳು. ಇದಕ್ಕೆ ಮೊದಲು ದೆಹಲಿಗೆ ತೆರಳಿ ಪ್ರಧಾನಿಗೆ ಮತ್ತು ರಾಷ್ಟ್ರಪತಿಗೆ ಬೇಟಿಗೆ ಯತ್ನಿಸಿದ್ದರು. 10 ದಿನ ದೆಹಲಿಯಲ್ಲಿದ್ದ ಈಕೆ ಮತ್ತೆ ವಾಪಾಸ್ಸಾಗಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಬರುವ ಸುದ್ದಿ ತಿಳಿದು ನಾನು ರಾಂಚಿಗೆ ಬಂದಿದ್ದೇನೆ. ಮಹಿಳೆ ಮಂಗಳವಾರ ರಾತ್ರಿ ರೋಡ್ಶೋ ಸಮಯದಲ್ಲಿ ಪ್ರಧಾನಿಯನ್ನು ಭೇಟಿಯಾಗಲು ಪ್ರಯತ್ನಿಸಿದರು ಆದರೆ ವಿಫಲರಾದರು ಮತ್ತು ಬುಧವಾರ ರಾಜಭವನಕ್ಕೆ ಭೇಟಿ ನೀಡಲು ಪ್ರಯತ್ನಿಸಿದ್ದಾರೆ. ಆದರೆ ನಿರಾಶೆಯಿಂದ ಇದ್ದ ಮಹಿಳೆಗೆ ಪ್ರಧಾನಿಯವರ ಬೆಂಗಾವಲು ಪಡೆಯ ಸೈರನ್ ಕೇಳಿ ಬೆಂಗಾವಲು ಪಡೆಯ ಮುಂದೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ದೆಹಲಿ: ಸರ್ಜರಿ ವೇಳೆ ರೋಗಿಗಳು ಸಾವು: ನಕಲಿ ವೈದ್ಯ ಸೇರಿ ನಾಲ್ವರ ಬಂಧನ