ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ನಲ್ಲಿರುವ ಕ್ಲಿನಿಕ್ವೊಂದರಲ್ಲಿ ನಕಲಿ ವೈದ್ಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಮೂವರು ರೋಗಿಗಳು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ನಕಲಿ ವೈದ್ಯ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮಹೇಂದ್ರ ಎಂಬಾತ ನಕಲಿ ಎಂಬಿಬಿಎಸ್ ಪದವಿ ಪಡೆದು ಗ್ರೇಟರ್ ಕೈಲಾಶ್-1ರ ಕ್ಲಿನಿಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದ.
ಸಣ್ಣ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಆರೋಪಿಗಳು ಶಸ್ತ್ರಚಿಕಿತ್ಸೆ ನಡೆಸಿದ್ದರು ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದಿರುವ ಬಗ್ಗೆ 10ಕ್ಕೂ ಹೆಚ್ಚು ದೂರುಗಳು ಈ ಮೊದಲು ದಾಖಲಾಗಿತ್ತು.
ಕಳೆದ ತಿಂಗಳು ಅಗರ್ವಾಲ್ ಮೆಡಿಕಲ್ ಸೆಂಟರ್ನಲ್ಲಿ ಜೈ ನಾರಾಯಣ್ ಎಂಬವರಿಗೆ ಪಿತ್ತಕೋಶದ ಕಲ್ಲುಗಳು ಇದೆ ಎಂದು ಹೇಳಲಾಗಿದೆ. ಶಸ್ತ್ರಚಿಕಿತ್ಸೆಗೆ ಅವರನ್ನು ಒಳಪಡಿಸಲಾಗಿದೆ. ಶಸ್ತ್ರಚಿಕಿತ್ಸೆಯ ಮೊದಲು ಅವರಿಗೆ ಎಕ್ಸ್-ರೇ, ಅಲ್ಟ್ರಾಸೌಂಡ್, ಇಸಿಜಿ ಮತ್ತು ರಕ್ತ ಪರೀಕ್ಷೆಗಳನ್ನು ನಡೆಸಿರಲಿಲ್ಲ.
ಶಸ್ತ್ರಚಿಕಿತ್ಸೆ ನಡೆಸಿದ ಕೆಲ ನಿಮಿಷಗಳ ಬಳಿಕ ಆಸ್ಪತ್ರೆಯ ಮಾಲಕ ಡಾ.ನೀರಜ್ ಅಗರ್ವಾಲ್, ರೋಗಿ ಮೃತಪಟ್ಟಿರುವುದಾಗಿ ಆತನ ಸಹೋದರ ಮೇಜರ್ ಬಸೋಯಾಗೆ ಹೇಳಿದ್ದಾರೆ.
ನಾನು ಆಪರೇಷನ್ ಥಿಯೇಟರ್ಗೆ ಹೋದಾಗ, ನನ್ನ ಸಹೋದರ ಸ್ಟ್ರೆಚರ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ ಮನೆಯಲ್ಲಿ ಧರಿಸಿದ್ದ ಬಟ್ಟೆಯಲ್ಲೇ ಇದ್ದ. ವೈದ್ಯರು ಕೂಡ ಶಸ್ತ್ರಚಿಕಿತ್ಸೆ ವೇಳೆ ಧರಿಸುವ ಬಟ್ಟೆಯಲ್ಲಿರಲಿಲ್ಲ. ಆಪರೇಷನ್ ಥಿಯೇಟರ್ ಚಿಕ್ಕದಾಗಿದ್ದು, ಕೊಳಕಾಗಿತ್ತು. ಆಪರೇಷನ್ ಥಿಯೇಟರ್ನಲ್ಲಿ ವೆಂಟಿಲೇಟರ್ ಇರಲಿಲ್ಲ ಎಂದು ಮೃತನ ಸಹೋದರ ಬಸೋಯಾ ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2022ರ ಸೆಪ್ಟಂಬರ್ನಲ್ಲಿ ಇದೇ ರೀತಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಆದರೆ ಒಂದು ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304, 196 , 197 198 ಮತ್ತು 120B ಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತನ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ಓದಿ:ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಆರೋಪಿ ಅರೆಸ್ಟ್