ಇತ್ತೀಚೆಗೆ ಹಿಂಸಾಚಾರ ನಡೆದಿದ್ದ ಹರ್ಯಾಣದ ನುಹ್ನಲ್ಲಿ ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.
ಘಟನೆಯಲ್ಲಿ 8 ಮಹಿಳೆಯರು ಗಾಯಗೊಂಡಿದ್ದಾರೆ. ಬಂಧಿತ ಮೂವರು ಮಕ್ಕಳಲ್ಲಿ ಓರ್ವ ಬಾಲಕ 9 ವರ್ಷದವನಾಗಿದ್ದು, ಆತನಿಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ ನಂತರ ಬಿಡುಗಡೆ ಮಾಡಲಾಗಿದೆ ಮತ್ತು 12 ವರ್ಷ ವಯಸ್ಸಿನ ಇತರ ಇಬ್ಬರನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.
ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿದ್ದರಿಂದ ಕನಿಷ್ಠ 8 ಮಹಿಳೆಯರು ಗಾಯಗೊಂಡಿದ್ದಾರೆ. ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮೂವರು ಅಪ್ರಾಪ್ತರನ್ನು ಅವರ ಪೋಷಕರ ಸಮ್ಮುಖದಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮೂವರು ಮಕ್ಕಳನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಘಟನೆಯಲ್ಲಿ ಶಾಮೀಲಾಗಿರುವುದು ಕಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನುಹ್ನ ಪೊಲೀಸ್ ಅಧಿಕಾರಿ ಕ್ರಿಶನ್ ಕುಮಾರ್ ಹೇಳಿದ್ದಾರೆ.
ನುಹ್ 11ನೇ ವಾರ್ಡ್ನ ನಿವಾಸಿ ರಾಮೋತರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಇಂದು ನಮ್ಮ ಮನೆಯಲ್ಲಿ ಪೂಜೆ ಇತ್ತು. ನಮ್ಮ ಕುಟುಂಬದ ಮಹಿಳೆಯರು ಮಸೀದಿ ಮತ್ತು ಮದರಸಾದ ಬಳಿ ಹೋಗುವಾಗ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
9 ರಿಂದ 12 ವರ್ಷದೊಳಗಿನ ಮೂವರು ಅಪ್ರಾಪ್ತರನ್ನು ವಿಚಾರಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ನುಹ್ ಪೊಲೀಸ್ ವಕ್ತಾರ ಕ್ರಿಶನ್ ಕುಮಾರ್ ದಿ ಪ್ರಿಂಟ್ಗೆ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿ ವಿಹೆಚ್ಪಿ ಪತ್ರಿಕಾಗೋಷ್ಟಿಯನ್ನು ನಡೆಸಿದೆ. ಕೋಮು-ಸೂಕ್ಷ್ಮ ಜಿಲ್ಲೆ ನುಹ್ನಲ್ಲಿ ಈ ಹಿಂದೆ ಆಗಸ್ಟ್ನಲ್ಲಿ ಗಲಭೆ ನಡೆದಿತ್ತು. ಹಿಂಸಾಚಾರವು ನಂತರ ನೆರೆಯ ಗುರುಗ್ರಾಮ್ಗೆ ಹರಡಿತ್ತು. ಈ ವೇಳೆ 6 ಮಂದಿ ಮೃತಪಟ್ಟಿದ್ದರು.
ಇದನ್ನು ಓದಿ: ಇಸ್ರೇಲ್ ಪ್ರಧಾನಿಯನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಬೇಕು: ರಾಜಮೋಹನ್ ಉನ್ನಿಥಾನ್