ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಐವರು ಕಾಂಗ್ರೆಸ್ ಸಂಸದರು ಹಾಗೂ ಒಂಬತ್ತು ಜನ ಡಿಎಂಕೆ ಸಂಸದರನ್ನು ಚಳಿಗಾಲ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆ ಇಂದು ಅಂಗೀಕರಿಸಿದೆ.
ಸಭಾಧ್ಯಕ್ಷರ ನಿರ್ದೇಶನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಕ್ಕಾಗಿ ಡಿಎಂಕೆ ಪಕ್ಷದ ಕನಿಮೋಳಿ ಸೇರಿದಂತೆ ಒಟ್ಟು 14 ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಆದರೆ, ಲೋಕಸಭಾ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡುವಂತೆ ಪ್ರತಿಪಕ್ಷಗಳು ಸಿಡಿದೆದ್ದಿವೆ. ಭದ್ರತಾ ಉಲ್ಲಂಘನೆಯ ಹಿನ್ನೆಲೆಯಲ್ಲಿ ಶಾ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ ಲೋಕಸಭೆಯನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಲಾಯಿತು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ನಿಯಮ ಉಲ್ಲಂಘಿಸಿದಕ್ಕಾಗಿ ಲೋಕಸಭೆಯಿಂದ ಚಳಿಗಾಲದ ಅಧಿವೇಶನ ಮುಗಿಯೋವರೆಗೆ ಕಾಂಗ್ರೆಸ್ ಸಂಸದರಾದ ಟಿ.ಎನ್. ಪ್ರತಾಪನ್, ಹಿಬಿ ಈಡನ್, ಡೀನ್ ಕುರಿಯಕೋಸ್, ಜ್ಯೋತಿ ಮಣಿ ಮತ್ತು ರಮ್ಯಾ ಹರಿದಾಸ್ ಅಮಾನತುಗೊಂಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಕಾಂಗ್ರೆಸ್ನ ಐವರನ್ನು ಅಮಾನತುಗೊಳಿಸುವ ಗದ್ದಲದ ನಡುವೆಯೇ ನಿರ್ಣಯವನ್ನು ಮಂಡಿಸಿದರು.
‘ಈ ಸದನದ ಮತ್ತು ಈ ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿದ ಟಿ.ಎನ್. ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್ ಅವರ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಧಿವೇಶನದ ಉಳಿದ ದಿನಗಳಿಗೆ ಸದನದಿಂದ ಇವರನ್ನು ಅಮಾನತುಗೊಳಿಸಲಾಗಿದೆ’ ಎಂದು ನಿರ್ಣಯವನ್ನು ಓದಲಾಯಿತು.
ಇದನ್ನೂ ಓದಿ; ಮಧ್ಯಪ್ರದೇಶ: ಕುಡಿದ ಮತ್ತಿನಲ್ಲಿ ವೃದ್ದ ಪೋಷಕರನ್ನು ಅಮಾನವೀಯವಾಗಿ ಥಳಿಸಿದ ಯೋಧ!