ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮ ಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮಾನ್ಯ ಮಾಡಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ.
“ಶಾಹಿ ಈದ್ಗಾ ಮಸೀದಿಯನ್ನು ಸಮೀಕ್ಷೆ ಮಾಡಲು ಆಯೋಗ ರಚಿಸುವಂತೆ ಕೋರಿದ್ದ ನಮ್ಮ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಆದೇಶ ಪ್ರತಿ ದೊರೆತ ಬಳಿಕ ತಿಳಿಸಲಾಗುವುದು” ಎಂದು ಅರ್ಜಿದಾರರ ಪರ ವಕೀಲ ರಂಜನಾ ಅಗ್ನಿಹೋತ್ರಿ ಹೇಳಿದ್ದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿದ್ದ ದೇವಸ್ಥಾನವನ್ನು ಕೆಡವಿ ಮೊಗಲ್ ದೊರೆ ಔರಂಗಜೇಬ್ ನಿರ್ದೇಶನದಂತೆ ಅಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸುಮಾರು 12ರಷ್ಟು ಅರ್ಜಿಗಳು ಈಗಾಗಲೇ ಅಲಹಾಬಾದ್ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದು, ಎಲ್ಲಾ ಅರ್ಜಿಗಳು ಕತ್ರಾ ಕೇಶವ್ ದೇವಸ್ಥಾನಕ್ಕೆ ಹೊಂದಿಕೊಂಡಿರುವ 13.17 ಎಕರೆ ಜಾಗದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿವೆ.
ಗುರುವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, “ಅಡ್ವೊಕೇಟ್ ಕಮಿಷನರ್ ನೇಮಕ ಮಾಡಬೇಕು ಎಂಬ ನಮ್ಮ ಬೇಡಿಕೆಗೆ ನ್ಯಾಯಾಲಯ ಒಪ್ಪಿದೆ. ಅಡ್ವೊಕೇಟ್ ಕಮಿಷನರ್ ಯಾರಾಗುತ್ತಾರೆ, ವಿಧಾನಗಳೇನು ಮತ್ತು ಅದು ತ್ರಿಸದಸ್ಯ ಸಮಿತಿಯಾಗಬಹುದೇ? ಈ ಎಲ್ಲಾ ವಿಷಯಗಳು ಡಿಸೆಂಬರ್ 18 ರಂದು ನಿರ್ಧಾರವಾಗಲಿದೆ ಎಂದಿದ್ದಾರೆ.
#WATCH | On Krishna Janmabhoomi case, Vishnu Shankar Jain, the lawyer for the Hindu side says, "Allahabad HC has allowed our application where we had demanded survey of (Shahi Idgah Masjid) by advocate commissioner. The modalities will be decided on Dec 18. The court has rejected… pic.twitter.com/OLSeYYSe50
— ANI (@ANI) December 14, 2023
“ಶಾಹಿ ಈದ್ಗಾ ಮಸೀದಿಯಲ್ಲಿ ಸಾಕಷ್ಟು ಚಿಹ್ನೆಗಳಿವೆ. ಇವುಗಳ ವಾಸ್ತವಿಕ ಸ್ಥಿತಿಯನ್ನು ತಿಳಿಯಲು, ನಿಜವಾದ ಅಡ್ವೋಕೇಟ್ ಕಮಿಷನರ್ ಅಗತ್ಯವಿದೆ ಎಂದು ನಾವು ಒತ್ತಾಯಿಸಿದ್ದೇವೆ. ನ್ಯಾಯಾಲಯವು ನಮ್ಮ ಅರ್ಜಿಯನ್ನು ಅಂಗೀಕರಿಸಿದೆ” ಎಂದು ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ : ಧ್ವನಿವರ್ಧಕ ಬಳಕೆ, ಮಾಂಸ ಮಾರಾಟ ನಿಯಂತ್ರಣ ಕುರಿತು ಆದೇಶ ಹೊರಡಿಸಿದ ಮಧ್ಯಪ್ರದೇಶದ ನೂತನ ಸಿಎಂ