ಕುತೂಹಲ ಕೆರಳಿಸಿದ್ದ ಪಂಜಾಬ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಆರಂಭಿಕ ಎಣಿಕೆಯಂತೆ ಒಟ್ಟು 117 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷವು 88 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದತ್ತ ದಾಪುಗಾಲು ಇಟ್ಟಿದೆ. ಇನ್ನು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು ಕೇವಲ 13 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಅಕಾಲಿ ದಳ ಮೈತ್ರಿ 10 ಕ್ಷೇತ್ರಗಳಲ್ಲಿ, ಬಿಜೆಪಿ ಮೈತ್ರಿ 05 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಒಂದು ಕಡೆ ಕಾಂಗ್ರೆಸ್ ಸೋಲಿನ ಸುಳಿಯಲ್ಲಿದ್ದರೆ ಅದರ ಇಬ್ಬರು ಉನ್ನತ ನಾಯಕರಾದ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಹಿನ್ನಡೆ ಅನುಭವಿಸುತ್ತಿದ್ದಾರೆ. ಚನ್ನಿ ಚಮ್ಕೂರ್ ಸಾಹಿಬ್ ಮತ್ತು ಬಹದ್ದೂರ್ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಚಮ್ಕೂರ್ ಸಾಹಿಬ್ ಕ್ಷೇತ್ರದಲ್ಲಿ ಆಪ್ನ ಚರಣ್ಜಿತ್ ಸಿಂಗ್ ಎಂಬುವವರು ಮುನ್ನಡೆ ಸಾಧಿಸಿದರೆ ಬಹದ್ದೂರ್ನಲ್ಲಿ ಆಪ್ನ ಲಭ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪೂರ್ವ ಅಮೃತಸರ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಅಲ್ಲಿ ಆಪ್ನ ಜೀವನ್ ಜೋತ್ ಕೌರ್ ಮುನ್ನಡೆ ಸಾಧಿಸಿದ್ದಾರೆ.
ಎಲ್ಲಾ ಎಕ್ಸಿಟ್ ಪೋಲ್ಗಳು ಸಹ ಆಪ್ ಅಧಿಕಾರಕ್ಕೆ ಬರುತ್ತವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಅದನ್ನು ಮೀರಿಸಿ ಆಪ್ ಭರ್ಜರಿ ಜಯದತ್ತ ಮುನ್ನುಗಿದೆ. ಆ ಮೂಲಕ ದೆಹಲಿ ನಂತರ ಪೂರ್ಣ ಪ್ರಮಾಣದ ರಾಜ್ಯವೊಂದರಲ್ಲಿ ಅಧಿಕಾರ ಹಿಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ.