“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿಗಳ ವಸತಿ ಯೋಜನೆಗೆ ಕಾಯ್ದಿರಿಸಿದ್ದ 300 ಕೋಟಿ ರೂಪಾಯಿಗಳನ್ನು ಹಿಂಪಡೆಯಲಾಗಿದ್ದು, ವಸತಿಯ ಕನಸು ಕಾಣುತಿದ್ದ ಅಲೆಮಾರಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಕೂಡಲೇ ಹಣವನ್ನು ಯೋಜನೆಗೆ ಸರ್ಕಾರ ಮರಳಿ ನೀಡಬೇಕು” ಎಂದು ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ, ಅಖಿಲ ಭಾರತ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಸಂಘಟನೆಗಳು ಮನವಿ ಮಾಡಿವೆ.
ಅಲೆಮಾರಿ ಮುಖಂಡರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
“ಅನುದಾನವನ್ನು ವಾಪಾಸ್ ನೀಡದಿದ್ದಲ್ಲಿ ಆಗುವ ಸಮಸ್ಯೆಗಳನ್ನೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಿಸಿದರು. ಈ ಕೂಡಲೇ ಈ ಅನುದಾನವನ್ನು ವಾಪಸ್ ತರಿಸಿ ಮನೆ ನಿರ್ಮಾಣ ಮಾಡಿಸಿಕೊಡುತ್ತೇನೆ. ನೀವು ಯಾವುದೇ ಆತಂಕ ಪಡಬೇಡಿ ಎಂದು ಭರವಸೆ ನೀಡಿದರು” ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮಂಜುನಾಥ್, ಕಾನೂನು ಸಲಹೆಗಾರರಾದ ಕೆ.ವೀರೇಶ್, ಅಖಿಲ ಭಾರತ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಲೋಹಿತಾಕ್ಷ, ಪ್ರಧಾನ ಕಾರ್ಯದರ್ಶಿ ಸುನಿಲ್ ಎಳವಾರ್, ಸುಡುಗಾಡುಸಿದ್ದ ಮಹಾಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತ ಪರಿಯವರು, ಕಮಲಪ್ಪ ಬಂಡಾರಿ ಇತರರು ಹಾಜರಿದ್ದರು.