ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್ ಮಾರಾಟದಿಂದ ಸಂಗ್ರಹವಾಗಿದ್ದ 5.24 ಕೋಟಿ ರುಪಾಯಿ ಮೊತ್ತವನ್ನು ಠೇವಣಿ ಇಡದೆ ಬ್ಯಾಂಕ್ಗೆ ಮೋಸ ಮಾಡಿದ ಆರೋಪದ ಮೇಲೆ ಗುಜರಾತ್ನ ನಗದು ಸಂಗ್ರಹ ಏಜೆನ್ಸಿಯ ಕೆಲವು ನೌಕರರ ವಿರುದ್ಧ ಕೇವಡಿಯಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2018 ರ ನವೆಂಬರ್ನಿಂದ 2020 ರ ಮಾರ್ಚ್ ವರೆಗಿನ ಅವಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು, ಟಿಕೆಟ್ ಮಾರಾಟ ಮತ್ತು ಹಣ ಸಂಗ್ರಹಿಸುವ ಹೊಣೆ ಹೊತ್ತ ಏಜೆನ್ಸಿಯು ವಡೋದರಾದಲ್ಲಿನ ಖಾಸಗಿ ಬ್ಯಾಂಕ್ನಲ್ಲಿ ಏಕತಾ ಪ್ರತಿಮೆ ಆಡಳಿತ ಮಂಡಳಿ ಹೊಂದಿರುವ ಖಾತೆಗೆ ಸಂದಾಯ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಏಕತಾ ಪ್ರತಿಮೆ: ಬುಡಕಟ್ಟು ಜನರ ಭೂಮಿ ಕಿತ್ತುಕೊಳ್ಳುತ್ತಿರುವ ಗುಜರಾತ್ ಸರ್ಕಾರ
“ಏಜೆನ್ಸಿಯು ಆಡಳಿತ ಮಂಡಳಿಯ ಖಾತೆಗೆ ಹಣವನ್ನು ಸಂಗ್ರಹವಾದ ಮರುದಿನ ಠೇವಣಿ ಇಡಬೇಕಾಗಿತ್ತು, ಆದರೆ ಒಂದುವರೆ ವರ್ಷದಿಂದ 5,24,77,375 ಮೊತ್ತವನ್ನು ಜಮೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ನ ವ್ಯವಸ್ಥಾಪಕರು ನೀಡಿರುವ ದೂರಿನ ಅನ್ವಯ ಏಜೆನ್ಸಿಯ ನೌಕರರ ವಿರುದ್ಧ FIR ದಾಖಲಿಸಲಾಗಿದೆ” ಎಂದು ಡಿಎಸ್ಪಿ ವಾಣಿ ದುಧಾತ್ ತಿಳಿಸಿದ್ದಾರೆ.
“ಟಿಕೆಟ್ ಮಾರಾಟ ಮತ್ತು ಸಂಗ್ರಹವಾದ ಹಣವನ್ನು ಬ್ಯಾಂಕ್ಗೆ ತಲುಪಿಸುವ ಸಲುವಾಗಿ ಬ್ಯಾಂಕ್ ಈ ಏಜೆನ್ಸಿಯನ್ನು ನೇಮಿಸಿಕೊಂಡಿದೆ. ಈ ಹಣ ನಾಪತ್ತೆಯಾದ ಪ್ರಕರಣಕ್ಕೂ ಏಕತಾ ಪ್ರತಿಮೆಯ ಮಂಡಳಿಗೂ ಸಂಬಂಧವಿಲ್ಲ. ಇದು ಬ್ಯಾಂಕ್ ಹಾಗೂ ಟಿಕೆಟ್ ಮಾರಾಟ ಮಾಡುವ ಏಜೆನ್ಸಿ ನಡುವಿನ ಸಮಸ್ಯೆ” ಏಕತಾ ಪ್ರತಿಮೆ ಮಂಡಳಿಯ ಅಧಿಕಾರಿ ಹೇಳಿದ್ದಾರೆ.
ಏಕತಾ ಪ್ರತಿಮೆ ಎಂದು ಕರೆಯಲ್ಪಡುವ ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭವ್ಯವಾದ ಮೂರ್ತಿಯು ಗುಜರತ್ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿದ್ದು, ಈ ಪ್ರತಿಮೆಯನ್ನು ಅಕ್ಟೋಬರ್ 2018 ರಲ್ಲಿ ಉದ್ಘಾಟಿಸಲಾಗಿತ್ತು.