ಕೊಚ್ಚಿಯ ಕಲಮಸ್ಸೆರಿ ಬಳಿ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಯೊಂದರಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ನಂತರ ಸಾಮಾಜಿಕ ಮಾದ್ಯಮಗಳ ಮೂಲಕ ಕೋಮು ಪ್ರಚೋದನಕಾರಿ ವಿಷಯಗಳನ್ನು ಪ್ರಚಾರ ಮಾಡಿದ್ದಕ್ಕಾಗಿ 54 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಲಪ್ಪುರಂ ಜಿಲ್ಲೆಯೊಂದರಲ್ಲಿ 26 ಪ್ರಕರಣಗಳು ದಾಖಲಾಗಿದ್ದರೆ, ಎರ್ನಾಕುಲಂನಲ್ಲಿ 15 ಮತ್ತು ತಿರುವನಂತಪುರಂನಲ್ಲಿ 5 ಪ್ರಕರಣಗಳು ದಾಖಲಾಗಿವೆ. ತ್ರಿಶೂರ್ ನಗರ ಮತ್ತು ಕೊಟ್ಟಾಯಂನಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿದ್ದು, ಪತ್ತನಂತಿಟ್ಟ, ಅಲಪ್ಪುಝ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಗ್ರಾಮಾಂತರ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.
ಕೋಮು ದ್ವೇಷವನ್ನು ಪ್ರಚೋದಿಸುವ ಪೋಸ್ಟ್ಗಳನ್ನು ಹಂಚಿಕೊಳ್ಳಲು ನಕಲಿ ಪ್ರೊಫೈಲ್ಗಳನ್ನು ಬಳಸಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಮು ದ್ವೇಷಕ್ಕೆ ಪ್ರಚೋದಿಸಿರುವ ನಕಲಿ ಪ್ರೊಫೈಲ್ಗಳ ಐಪಿ ವಿಳಾಸಗಳನ್ನು ಪತ್ತೆ ಹಚ್ಚಲು ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾದ್ಯಮ ಸಂಸ್ಥೆಗಳಿಗೆ ವಿನಂತಿಗಳನ್ನು ಮಾಡಲಾಗಿದೆ. ಇಂತಹ ಖಾತೆಗಳನ್ನು ಗುರುತಿಸಲು ರಾಜ್ಯದಲ್ಲಿ ಸೈಬರ್ ಸೆಲ್ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಕೊಚ್ಚಿಯ ಕನ್ವೆನ್ಷನ್ ಸೆಂಟರ್ನಲ್ಲಿ ಯೆಹೋವನ ಸಾಕ್ಷಿಗಳ ಸಮಾವೇಷದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ಗೆ ಸಂಬಂಧಿಸಿ ಈ ಮೊದಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಎರಡು ಪ್ರಕರಣ ದಾಖಲಾಗಿತ್ತು.
ಐಪಿಸಿ 153 ಮತ್ತು 153 ಎ ಮತ್ತು ಸೆಕ್ಷನ್ 120 (ಒ) ಅಡಿಯಲ್ಲಿ ರಾಜೀವ್ ಚಂದ್ರಶೇಖರ್ ವಿರುದ್ಧ ಎರಡು ಪ್ರಕರಣವನ್ನು ದಾಖಲಿಸಲಾಗಿದೆ. ಒಂದು ಕೇಸ್ನ್ನು ಕೆಪಿಸಿಸಿ ಡಿಜಿಟಲ್ ಮೀಡಿಯಾ ಕನ್ವೀನರ್ ಪಿ ಸರಿನ್ ನೀಡಿದ ದೂರಿನ ಆಧಾರದ ಕೇರಳ ಪೊಲೀಸರು ದಾಖಲಿಸಿಕೊಂಡಿದ್ದರು. ಇದಕ್ಕೆ ಮೊದಲು ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಸ್ವಯಂಪ್ರೇರಿತವಾಗಿ ಒಂದು ಪ್ರಕರಣವನ್ನು ಕೇರಳ ಪೊಲೀಸರು ದಾಖಲಿಸಿದ್ದರು.
ಕಳೆದ ವಾರ ಕೇರಳದ ಯೆಹೋವನ ಸಾಕ್ಷಿಗಳ ಸಮಾವೇಷದಲ್ಲಿ ಬಾಂಬ್ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ 3 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು.
ಪ್ರಕರಣದ ಬಗ್ಗೆ ಪೋಸ್ಟ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಭ್ರಷ್ಟಾಚಾರದ ಆರೋಪದ ಮೂಲಕ ಅಪಖ್ಯಾತಿ ಪಡೆದ ಸಿಎಂ ಪಿಣರಾಯಿ ವಿಜಯನ್ ನಾಚಿಕೆಯಿಲ್ಲದೆ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ಕೇರಳದಲ್ಲಿ ಜಿಹಾದ್ಗಾಗಿ ಹಮಾಸ್ನ ಮುಕ್ತ ಕರೆಗಳು ಅಮಾಯಕ ಕ್ರಿಶ್ಚಿಯನ್ನರ ಮೇಲೆ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿವೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ರಾಜ್ಯದಲ್ಲಿ ದ್ವೇಷ ಮತ್ತು ಜಿಹಾದ್ನ್ನು ಮುಕ್ತವಾಗಿ ಬೋಧಿಸಲು INDIA ಮೈತ್ರಿಕೂಟದ ಎರಡು ರಾಜಕೀಯ ಪಕ್ಷಗಳು ಭಯೋತ್ಪಾದಕ ಸಂಘಟನೆ ಹಮಾಸ್ನ ಮುಖ್ಯಸ್ಥರಿಗೆ ಅವಕಾಶ ನೀಡಿರುವುದು ಮಾತ್ರ ಕಷ್ಟ ಎಂದು ಹೇಳಿದ್ದರು.
ಚಂದ್ರಶೇಖರ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸಚಿವರ ಹೇಳಿಕೆ ಕೋಮುವಾದದಿಂದ ಕೂಡಿದೆ. ವಿಷವುಳ್ಳವರು ವಿಷವನ್ನು ಉಗುಳುತ್ತಲೇ ಇರುತ್ತಾರೆ. ಜವಾಬ್ದಾರಿಯುತ ಸಚಿವರಾಗಿ ಅವರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಗೆ ಕನಿಷ್ಠ ಗೌರವವನ್ನು ತೋರಿಸಬೇಕಾಗಿತ್ತು. ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡು ತನಿಖೆಯ ಆರಂಭಿಕ ದಿನಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದರು.
ಇದನ್ನು ಓದಿ: ವಂಚನೆ ಪ್ರಕರಣ: ಬಿಜೆಪಿ ಮುಖಂಡನ ವಿರುದ್ಧದ ಪ್ರಕರಣ ಕೈಬಿಡುವಂತೆ ಆಗ್ರಹಿಸಿದ ಸಿಬಿಐ ವರದಿ ತಿರಸ್ಕರಿಸಿದ ಕೋರ್ಟ್