96 ವರ್ಷದ ಸ್ವಾತಂತ್ರ್ಯ ಹೋರಾಟಗಾರರೋರ್ವರಿಗೆ ಪಿಂಚಣಿ ನೀಡುವಲ್ಲಿ ಲೋಪದೋಷ ಮತ್ತು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ 20,000 ರೂ.ದಂಡ ವಿಧಿಸಿದೆ.
ಸ್ವಾತಂತ್ರ ಹೋರಾಟಗಾರ ಉತ್ತಿಮ್ ಲಾಲ್ ಸಿಂಗ್ ಅವರು ಪಿಂಚಣಿ ವಿಳಂಬವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು, 40 ವರ್ಷಗಳಿಗೂ ಹೆಚ್ಚು ಕಾಲ ಸರಿಯಾದ ಪಿಂಚಣಿ ಪಡೆಯಲು ಕಾಯುವಂತೆ ಮಾಡಿರುವುದು ಸಂಪೂರ್ಣ ದುಃಖದ ಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದೆ.
ಇದಲ್ಲದೆ ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿಯನ್ನು 12 ವಾರಗಳಲ್ಲಿ 1980ರ ಬಳಿಕದ ಬಡ್ಡಿಯೊಂದಿಗೆ ಸಿಂಗ್ ಅವರಿಗೆ ಪಾವತಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸ್ವಾತಂತ್ರ್ಯ ಹೋರಾಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಸರಕಾರ ತೋರುತ್ತಿರುವ ನಿರ್ಲಕ್ಷ್ಯ ನೋಡುವುದು ನೋವಿನ ಸಂಗತಿಯಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೆ ನ್ಯಾಯಾಲಯವು 20,000 ರೂಪಾಯಿಗಳ ದಂಡವನ್ನು ವಿಧಿಸುತ್ತದೆ ಮತ್ತು ಇಂದಿನಿಂದ 6 ವಾರಗಳಲ್ಲಿ ಅರ್ಜಿದಾರರಿಗೆ ಈ ವೆಚ್ಚವನ್ನು ಪಾವತಿಸಬೇಕು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ಬಿಹಾರ ಸರ್ಕಾರವು ಈ ಪ್ರಕರಣದಲ್ಲಿ 1985ರಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿದಾರರ ಮೂಲ ದಾಖಲೆಗಳನ್ನು ಕಳುಹಿಸಿದೆ. ಆದರೆ ಅದು ಕೇಂದ್ರ ಸರ್ಕಾರದ ಬಳಿ ಇರುವಾಗ ಕಳೆದುಹೋಗಿವೆ. ಬಿಹಾರ ಸರ್ಕಾರವು ಅರ್ಜಿದಾರರ ಹೆಸರನ್ನು ಮತ್ತೊಮ್ಮೆ ಪರಿಶೀಲಿಸಿ 2022ರ ಜುಲೈ 14ರಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಕಳುಹಿಸಿದೆ. ಆದರೆ ಪಿಂಚಣಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಉತ್ತಿಮ್ ಲಾಲ್ ಸಿಂಗ್ ನಾನು 1927ರಲ್ಲಿ ಜನಿಸಿದೆ ಮತ್ತು ಕ್ವಿಟ್ ಇಂಡಿಯಾ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತರ ಚಳುವಳಿಗಳಲ್ಲಿ ಭಾಗವಹಿಸಿದ್ದೇನೆ ಎಂದು 1982ರಲ್ಲಿ ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು ಮತ್ತು ಅವರ ಹೆಸರನ್ನು ಬಿಹಾರ ಸರ್ಕಾರವು ಫೆಬ್ರವರಿ 1983ರಲ್ಲಿ ಕೇಂದ್ರಕ್ಕೆ ಕಳುಹಿಸಿತ್ತು. ಆದರೆ ಪಿಂಚಣಿ ಬಿಡುಗಡೆಯಾಗಿರಲಿಲ್ಲ.
ಇದನ್ನು ಓದಿ: ವಂಚನೆ ಪ್ರಕರಣ: ಬಿಜೆಪಿ ಮುಖಂಡನ ವಿರುದ್ಧದ ಪ್ರಕರಣ ಕೈಬಿಡುವಂತೆ ಆಗ್ರಹಿಸಿದ ಸಿಬಿಐ ವರದಿ ತಿರಸ್ಕರಿಸಿದ ಕೋರ್ಟ್