ವಿವಾದಿತ ಭೂಮಿಯಲ್ಲಿ ಗೋವುಗಳನ್ನು ಸಾಕಿದ್ದಕ್ಕೆ 70 ವರ್ಷದ ವ್ಯಕ್ತಿಯೊಬ್ಬರನ್ನು ಜನರ ಗುಂಪು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್ಪುರ ಕುರೇಭಾರ್ ಪ್ರದೇಶದ ಸಾಧೋಭಾರಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜನರ ಗುಂಪು 70 ವರ್ಷದ ವ್ಯಕ್ತಿಯೊಬ್ಬರನ್ನು ಹೊಡೆದು ಕೊಂದಿದ್ದಾರೆ ಮತ್ತು ಅವರ ಮಗನಿಗೆ ಗಾಯಗಳಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಗ್ಗು ರಾಮ್ ಅವರು ವಿವಾದಿತ ಜಾಗದಲ್ಲಿ ಹಸುವನ್ನು ಸಾಕುವ ವಿಚಾರಕ್ಕೆ ಕೆಲವು ಜನರ ಗುಂಪಿನ ನಡುವೆ ತಕರಾರು ಇತ್ತು. ಇದೇ ವಿಚಾರಕ್ಕೆ ಜಗಳವಾಡಿದ್ದು, ಬಳಿಕ ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗ್ಗು ರಾಮ್ ಅವರನ್ನು ರಕ್ಷಿಸಲು ಪುತ್ರ ವಿಜಯ್ ಈ ವೇಳೆ ಮಧ್ಯೆ ಪ್ರವೇಶಿಸಿದ್ದು, ಅವರ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಪೊಲೀಸರು ಇಬ್ಬರನ್ನು ಕೂಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗ್ಗು ರಾಮ್ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ವಿಜಯ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮ್ ಅವರ ಸೋದರಳಿಯ ಮಾಣಿಕ್ಲಾಲ್ ಅವರು ಈ ಕುರಿತು ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅಮರನಾಥ್, ಜವಾಹರಲಾಲ್, ರಾಜವಟಿ ಮತ್ತು ವಿಶ್ವನಾಥ್ ಅವರನ್ನು ಬಂಧಿಸಲಾಗಿದೆ ಎಂದು ಕುರೇಭಾರ್ ಎಸ್ಎಚ್ಒ ಪ್ರವೀಣ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?