“ಒಳಮೀಸಲಾತಿ ಜಾರಿಯಾಗಿದೆ ಎಂದು ಸುಳ್ಳು ಜಾಹೀರಾತು ನೀಡದಿರಿ” ಎಂದು ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ಯ ಪ್ರಧಾನ ಸಂಚಾಲಕ ಎಸ್.ಮಾರಪ್ಪ ಮನವಿ ಒತ್ತಾಯಿಸಿದ್ದಾರೆ.
ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿಯನ್ವಯ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಮಿತಿಯು ಕಳೆದ 111 ದಿನಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಶನಿವಾರ ತಾತ್ಕಾಲಿಕವಾಗಿ ಕೈಬಿಡಲಾಯಿತು. ಸಮಾರೋಪ ಸಮಾರಂಭದ ವೇಳೆ ಮಾಧ್ಯಮಗಳೊಂದಿಗೆ ಮಾರಪ್ಪನವರು ಮಾತನಾಡಿದರು.
“ಒಳಮೀಸಲಾತಿ ಜಾರಿಗೊಳಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ, ಆದರೆ ಸರ್ಕಾರದ ನಿರ್ಣಯ ಗೊಂದಲದ ಗೂಡಾಗಿದೆ. ಇದನ್ನು ಬಗೆಹರಿಸಬೇಕಿದೆ. ಆದರೆ ಒಳ ಮೀಸಲಾತಿ ಈಗಾಗಲೇ ಜಾರಿಯಾಗಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವುದು ತಪ್ಪು” ಎಂದು ತಿಳಿಸಿದರು.
“ಒಳಮೀಸಲಾತಿ ಜಾರಿ ಮಾಡಿ ಸಾಮಾಜಿಕ ನ್ಯಾಯ ನೀಡಿದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಹಾಗೂ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಜೀ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಹಾಗೂ ಸಮುದಾಯದ ಮುಖಂಡರಿಗೂ ಹೃದಯಪೂರ್ವಕ ಧನ್ಯವಾದಗಳು” ಎಂಬ ಒಕ್ಕಣೆಯೊಂದಿಗೆ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಲಾಗುತ್ತಿದೆ. ‘ಮಾದಿಗ ಮಹಾಸಭಾ, ಬೆಂಗಳೂರು’ ಎಂಬ ಹೆಸರಲ್ಲಿ ಜಾಹೀರಾತು ಪ್ರಕಟವಾಗುತ್ತಿದೆ. ಜಾರಿಯೇ ಆಗದಿರುವ ಮೀಸಲಾತಿ ಹೆಚ್ಚಳದಲ್ಲಿ ಮೀಸಲಾತಿ ಹಂಚಿಕೆ ಮಾಡಿರುವುದು ಗೊಂದಲ ಸೃಷ್ಟಿಸಿದೆ. ಹೀಗಿರುವಾಗ ಬಿಜೆಪಿ ನಾಯಕರ ಫೋಟೋಗಳೊಂದಿಗೆ ಜಾಹೀರಾತನ್ನು ನೀಡುತ್ತಿರುವ ಕುರಿತು ವೇದಿಕೆ ಕಳವಳ ವ್ಯಕ್ತಪಡಿಸಿದೆ.
“ಈ ನಡೆ ತಪ್ಪು. ವಿಜಯೋತ್ಸವ ಆಚರಿಸಿಕೊಳ್ಳುವುದಕ್ಕೆ ತಕರಾರು ಇಲ್ಲ. ಆದರೆ ಒಳಮೀಸಲಾತಿ ಇನ್ನೂ ಜಾರಿಯಾಗಿಲ್ಲ. ವಿಜಯೋತ್ಸವ ಮಾಡಿಕೊಳ್ಳುವ ಸಮಯ ಇದಲ್ಲ. ನಮ್ಮ ಕೆಲಸ ಇನ್ನೂ ಇದೆ. ಏನೇ ಹೇಳಿದರೂ ಜನಾಂಗಕ್ಕೆ ಸತ್ಯವನ್ನೇ ಹೇಳಬೇಕು. ರಾಜಕೀಯ ಮೈಲೇಜ್ಗಾಗಿ ಸುಳ್ಳುಗಳನ್ನು ಹೇಳಬಾರದು. ಈಗ ಆಗಿರುವ ಬೆಳವಣಿಗೆಗಳಲ್ಲಿ ವಿಜಯೋತ್ಸವ ಆಚರಿಸಿಕೊಳ್ಳುವಂತಹದ್ದು ಏನೂ ಇಲ್ಲ” ಎಂದು ಮಾರಪ್ಪ ಎಚ್ಚರಿಸಿದರು.
“ಒಳಮೀಸಲಾತಿ ಜಾರಿಗೊಳಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ, ಆದರೆ ಮೀಸಲಾತಿ ವರ್ಗೀಕರಣವನ್ನು ಗೊಂದಲದ ಗೂಡಾಗಿಸಲಾಗಿದೆ. ಮೂಲ ಸಮುದಾಯಗಳನ್ನು ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಗುಂಪುಗಳಾಗಿ ವರ್ಗೀಕರಿಸಬೇಕೇ ಹೊರತು, ತಮಗೆ ಬೇಕಾದಂತೆ ಪಲ್ಲಟ ಮಾಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
“ಸರ್ಕಾರ ಮಾಡಿರುವ ಆದೇಶದಲ್ಲಿ ಆದಿಕರ್ನಾಟಕ (ಎ.ಕೆ.) ಮತ್ತು ಆದಿದ್ರಾವಿಡ (ಎ.ಡಿ.) ವರ್ಗೀಕರಣ ಅವೈಜ್ಞಾನಿಕವಾಗಿದೆ. ನಿರ್ದಿಷ್ಟ ಸಮುದಾಯವೇ ಎ.ಕೆ. ಅಥವಾ ಎ.ಡಿ. ಎಂದು ತಿಳಿಸುವುದಕ್ಕೆ ಇವರೇನು ತಜ್ಞರಾ? ಸರ್ಕಾರ ನೇಮಿಸಿದ ಸಚಿವ ಸಂಪುಟ ಉಪಸಮಿತಿಯಲ್ಲಿ ಯಾರಾದರೂ ತಜ್ಞರು ಇದ್ದರಾ?” ಎಂದು ಪ್ರಶ್ನಿಸಿದರು.
“ಮೈಸೂರು ಭಾಗದಲ್ಲಿ ಹೊಲೆಯ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಎ.ಕೆ.ಯಲ್ಲಿದೆ, ಬೆಂಗಳೂರಿನಿಂದ ಕೊಪ್ಪಳದವರೆಗೂ ಮಾದಿಗರು ಎ.ಕೆ.ಯಲ್ಲಿದ್ದಾರೆ. ಒಂದಿಷ್ಟು ಭಾಗದಲ್ಲಿ ಎ.ಡಿ.ಯಲ್ಲಿ ಹೊಲೆಯರಿದ್ದರೆ, ಮತ್ತೊಂದಿಷ್ಟು ಭಾಗದಲ್ಲಿ ಮಾದಿಗರಿದ್ದಾರೆ. ಆದರೆ ಆದಿಕರ್ನಾಟಕದವರೆಲ್ಲ ಹೊಲೆಯರು, ಆದಿ ದ್ರಾವಿಡರೆಲ್ಲ ಮಾದಿಗರು ಎಂದು ಸರ್ಕಾರ ಅವೈಜ್ಞಾನಿಕವಾಗಿ ನಿಲುವು ತಾಳಿದೆ” ಎಂದು ಟೀಕಿಸಿದರು.
“ಅಭಿವೃದ್ಧಿ ಹೊಂದಿದ ಕೆಲವು ಸಮುದಾಯಗಳನ್ನು ಗ್ರೂಪ್ 4ರಲ್ಲಿ ಸೇರಿಸಲಾಗಿದೆ. ಅಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳಿವೆ. ಬಲಾಢ್ಯರೊಂದಿಗೆ ಈ ಅಲೆಮಾರಿಗಳು ಸ್ಪರ್ಧೆ ಮಾಡಲು ಸಾಧ್ಯವೇ? ಈ ರೀತಿಯ ತೊಡಕುಗಳಿವೆ. ಇವು ಆಡಳಿತಾತ್ಮಕವಾಗಿ ಸರಿಪಡಿಸುವುದು ಕಷ್ಟವೇನಲ್ಲ” ಎಂದು ಅಭಿಪ್ರಾಯಪಟ್ಟರು.
“ಸಂವಿಧಾನದ ವಿಧಿ 341ಕ್ಕೆ ತಿದ್ದುಪಡಿಯಾಗುವವರೆಗೂ, ಲೋಕಸಭಾ ಚುನಾವಣೆಯವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಈಗ ನಿರಂತರವಾಗಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನಮ್ಮ ಬೇಡಿಕೆಗಳನ್ನು ಇಡುತ್ತೇವೆ. ಸದ್ಯಕ್ಕೆ ಚುನಾವಣೆಯ ಹಿನ್ನೆಲೆಯಲ್ಲಿ ಹೋರಾಟವನ್ನು ಮೊಟಕುಗೊಳಿಸುತ್ತಿದ್ದೇವೆ, ಆದರೆ ಚುನಾವಣೆ ಮಧ್ಯದಲ್ಲಿ ನಮ್ಮ ಹೋರಾಟ ಆರಂಭಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಶಿವರಾಯ ಅಕ್ಕರಕಿ ಮಾತನಾಡಿ, “ನಮ್ಮ ವೇದಿಕೆಯ ವತಿಯಿಂದ ಯಾವುದೇ ರಾಜಕೀಯ ನಿಲುವುಗಳನ್ನು ತೆಗೆದುಕೊಂಡಿಲ್ಲ. ತಟಸ್ಥ ನೀತಿ ನಮ್ಮದಾಗಿದೆ. ಸಮುದಾಯದ ಜನತೆ ತಮಗೆ ಇಷ್ಟವಾದವರಿಗೆ ಬೆಂಬಲ ನೀಡಲಿದ್ದಾರೆ” ಎಂದು ಹೇಳಿದರು.
“ಒಂದು ಕಾಲದಲ್ಲಿ ಮಾದಿಗ ಸಮುದಾಯದ 24 ಶಾಸಕರು ಇದ್ದರು. ಇಂದು ನಮ್ಮ ಸಂಖ್ಯೆ ಕೇವಲ 5ಕ್ಕೆ ಬಂದು ನಿಂತಿದೆ. ರಾಜಕೀಯ ಪ್ರಾತಿನಿಧ್ಯದ ಕೊರತೆ ಆಗಿದೆ. ನಮ್ಮ ಸಮುದಾಯ ಹೆಚ್ಚಿನ ಸಂಖ್ಯೆ ಇರುವಲ್ಲಿ ನಮ್ಮವರನ್ನು ಗೆಲ್ಲಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ. ಜೊತೆಗೆ ಅಸ್ಪೃಶ್ಯ ಜನಾಂಗದ ಹೊಲೆಯ, ತ್ರಿಮಸ್ಥ ಚರ್ಮಕಾರ, ಮಾದಿಗ ಸಂಬಂಧಿತ ಯಾವುದೇ ಅಭ್ಯರ್ಥಿಯನ್ನು ಗೆಲ್ಲಿಸಲು ತೀರ್ಮಾನ ಮಾಡಿದ್ದೇವೆ” ಎಂದು ವಿವರಿಸಿದರು.
ಮುಖಂಡರಾದ ಕರಿಯಪ್ಪ ಗುಡಿಮನಿ, ನಂದಕುಮಾರ್, ಜೆ.ಡಿ.ರಾಜು, ಹನುಮೇಶ್ ಗುಂಡೂರು, ಪ್ರೊ.ಸಿ.ಕೆ.ಮಹೇಶ್, ವೆಂಕಟೇಶ್ ದೀಪಾಂಜಲಿನಗರ ಮೊದಲಾದವರು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದರು.