ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕಾಗಿ ಮೈಕ್ರೋ ಅಬ್ಸರ್ವರ್ಸ್ ಬದಲಿಗೆ ತನ್ನ ಅಧೀನದ ಸುಮಾರು 8,505 ಗ್ರೂಪ್ ಬಿ ಅಧಿಕಾರಿಗಳನ್ನು ನಿಯೋಜಿಸಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಫೆಬ್ರವರಿ 4ರಂದು ಸುಪ್ರೀಂ ಕೋರ್ಟ್ನಲ್ಲಿ ಎಸ್ಐಆರ್ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆಯೂ ಮಮತಾ ಬ್ಯಾನರ್ಜಿ ಮೈಕ್ರೋ ಅಬ್ಸರ್ವರ್ಸ್ ಕುರಿತು ಪ್ರಮುಖವಾಗಿ ಉಲ್ಲೇಖಿಸಿದ್ದರು. ಕೇಂದ್ರ ಸರ್ಕಾರದ ಉದ್ಯೋಗಿಗಳನ್ನೇ ಮೈಕ್ರೋ ಅಬ್ಸರ್ವರ್ಸ್ಗಳಾಗಿ ಚುನಾವಣಾ ಆಯೋಗ ನೇಮಿಸಿಕೊಂಡಿದೆ. ಇವರು ಬೇಕಾಬಿಟ್ಟು ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ತೆಗೆದು ಹಾಕುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.
ಚುನಾವಣಾ ಆಯೋಗದ ಪರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಎಸ್ಐಆರ್ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಕೇವಲ 80 ಗ್ರೇಡ್ 2 ಅಧಿಕಾರಿಗಳನ್ನು (ಉದಾಹರಣೆಗೆ ಎಸ್ಡಿಎಂಗಳು) ಮಾತ್ರ ಒದಗಿಸಿದೆ ಎಂದಿದ್ದರು.
ಅಂಗನವಾಡಿ, ಆಶಾ ಸೇರಿದಂತೆ ಕೆಲ ಹಂತದ ಸಿಬ್ಬಂದಿಯನ್ನು ಮಮತಾ ಸರ್ಕಾರ ಒದಗಿಸಿದೆ ಎಂದು ದೂರಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಮಮತಾ ಬ್ಯಾನರ್ಜಿ, “ಚುನಾವಣಾ ಆಯೋಗ ಏನು ಕೇಳಿದೆಯೋ, ಅದನ್ನು ನಾವು ಒದಗಿಸಿದ್ದೇವೆ” ಎಂದಿದ್ದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಎನ್. ವಿ ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರ (ಫೆ.9) ಮಮತಾ ಬ್ಯಾನರ್ಜಿ ಮತ್ತು ಇತರರು ಎಸ್ಐಆರ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದುವರಿಸಲಿದೆ.
ಫೆ.4ರಂದು ತನ್ನ ಅರ್ಜಿಯ ಪರ ಸುಪ್ರೀಂ ಕೋರ್ಟ್ನಲ್ಲಿ ಮಮತಾ ಬ್ಯಾನರ್ಜಿ ಖುದ್ದು ವಾದ ಮಂಡಿಸಿದ್ದರು. ಈ ಮೂಲಕ ಭಾರತ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಖ್ಯಾತಿಗೆ ಮಮತಾ ಬ್ಯಾನರ್ಜಿ ಪಾತ್ರರಾಗಿದ್ದಾರೆ. ಸೋಮವಾರ ಅವರು ಮತ್ತೆ ವಾದ ಮಂಡಿಸುವ ಸಾಧ್ಯತೆ ಇದೆ.
ಅದಕ್ಕು ಮುನ್ನ 8 ಸಾವಿರಕ್ಕೂ ಹೆಚ್ಚು ರಾಜ್ಯ ಸರ್ಕಾರದ ಸಿಬ್ಬಂದಿಯನ್ನು ಎಸ್ಐಆರ್ ಪ್ರಕ್ರಿಯೆಗೆ ಒದಗಿಸುವುದಾಗಿ ಮಮತಾ ಸರ್ಕಾರ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಈ ಮೂಲಕ ಕೇಂದ್ರದ ಅನತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಹೊತ್ತಿರುವ ಮೈಕ್ರೋ ಅಬ್ಸರ್ವರ್ಸ್ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಉಳಿಸಲು ಮಧ್ಯ ಪ್ರವೇಶಿಸುವಂತೆ ಫೆ.4ರಂದು ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ಗೆ ಕೋರಿಕೊಂಡಿದ್ದಾರೆ. ರಾಜ್ಯವನ್ನು ಗುರಿಯಾಗಿಸಲಾಗುತ್ತಿದೆ. ನಮ್ಮ ಜನರ ಮೇಲೆ ಚುನಾವಣಾ ಆಯೋಗ ‘ಬುಲ್ಡೋಝರ್’ ಪ್ರಹಾರ ನಡೆಸುತ್ತಿದೆ ಎಂದಿದ್ದಾರೆ. ಚುನಾವಣೆಯ ಹೊಸ್ತಿಲ್ಲಲ್ಲಿ ಇದ್ದರೂ ಬಿಜೆಪಿ ಆಡಳಿತ ಅಸ್ಸಾಂನಲ್ಲಿ ಏಕೆ ಎಸ್ಐಆರ್ ನಡೆಸುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ಹಂತದಲ್ಲಿ ಮಮತಾ ಬ್ಯಾನರ್ಜಿಯ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ನೈಜ ಮತದಾರರ ಹೆಸರು ಕೈಬಿಟ್ಟು ಹೋಗಬಾರದು ಎಂದಿದೆ.
ಕೇಂದ್ರ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಆಧಿಕಾರಿಗೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್, ಫೆ.9ರ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಹೆಸರುಗಳ ಹೊಂದಾಣಿಕೆಯಾಗದ ಕಾಗುಣಿತ ಮುಂತಾದ ಸಣ್ಣಪುಟ್ಟ ವ್ಯತ್ಯಾಸಗಳ ಆಧಾರದ ಮೇಲೆ ನೋಟಿಸ್ಗಳನ್ನು ನೀಡುವಾಗ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮತದಾರರ ಪಟ್ಟಿ ಅಧಿಕಾರಿಗಳು ಹೆಚ್ಚು ಸೂಕ್ಷ್ಮವಾಗಿರಲು ಸೂಚಿಸುವಂತೆಯೂ ಪೀಠವು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.


