ಛತ್ತೀಸ್ಗಢದ ಜಂಜ್ಗೀರ್-ಚಂಪಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಹಲ್ಲೆ ನಡೆಸಿ, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಇಂದು (ಮಾ.18) ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಹಿಂದುತ್ವವಾದಿ ಗುಂಪಿನಿ ವ್ಯಕ್ತಿಯೊಬ್ಬ, “ನಿಮಗೆ ಅರ್ಥವಾಗುತ್ತಿದೆಯಾ..? ಜೈ ಶ್ರೀ ರಾಮ್ ಎಂದು ಹೇಳಿ” ಎಂದು ಹೇಳುತ್ತಾ ಯುವಕನ ಕಾಲರ್ ಹಿಡಿದಿರುವುದು ಕಾಣಬಹುದು. ಹಿಂದುತ್ವವಾದಿ ವ್ಯಕ್ತಿ ಕ್ರಿಶ್ಚಿಯನ್ ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವಾಗ, ಆತನ ಸಹಚರರು ಜೈಶ್ರೀರಾಮ್ ಎಂದು ಕೂಗುತ್ತಿದ್ದಾರೆ.
“ಈ ಘಟನೆಯ ಬಗ್ಗೆ ತಮಗೆ ತಿಳಿದಿಲ್ಲ, ಈವರೆಗೆ ಯಾವುದೇ ದೂರು ಬಂದಿಲ್ಲ” ಎಂದು ಚಂಪಾ ಪೊಲೀಸರನ್ನು ಉಲ್ಲೇಖಿಸಿ ಸಿಯಾಸತ್.ಕಾಮ್ ವರದಿ ಮಾಡಿದೆ.
ಹಿಂದುತ್ವ ಗುಂಪುಗಳು, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ‘ಅಕ್ರಮ ಮತಾಂತರ’ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಭಾರತದಾದ್ಯಂತ ಕ್ರೈಸ್ತರ ವಿರುದ್ಧ ದಾಳಿಗಳನ್ನು ನಡೆಸುತ್ತಿದ್ದಾರೆ.


