ಜಾರಿ ನಿರ್ದೇಶನಾಲಯ (ಇಡಿ) ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್ಪಿಯು) ಸಂಸ್ಥಾಪಕ-ಚಾನ್ಸಲರ್ ಅಶೋಕ್ ಮಿತ್ತಲ್ ಅವರಿಗೆ ಸೇರಿದ ವಿವಿಧ ಆಸ್ತಿಗಳ ಮೇಲೆ ಬುಧವಾರ (ಏ.15) ದಾಳಿ ನಡೆಸಿದೆ ಎಂದು ವರದಿಯಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್ಇಎಂಎ-ಫೆಮಾ) ಉಲ್ಲಂಘನೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ.
ಪಂಜಾಬ್ನ ಜಲಂಧರ್, ಫಗ್ವಾರಾ ಮತ್ತು ಹರಿಯಾಣದ ಗುರುಗ್ರಾಮ್ನ ಸುಮಾರು 8 ರಿಂದ 10 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆದಿದೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕ್ಯಾಂಪಸ್ ಮಾತ್ರವಲ್ಲದೆ, ಈ ಸಮೂಹಕ್ಕೆ ಸೇರಿದ ಲವ್ಲಿ ಆಟೋಸ್, ಲವ್ಲಿ ಸ್ವೀಟ್ಸ್, ಮತ್ತು ಗುರುಗ್ರಾಮ್ನಲ್ಲಿರುವ ಟೆಟರ್ ಕಾಲೇಜ್ ಆಫ್ ಬಿಸಿನೆಸ್ ಹಾಗೂ ಮಾಸ್ಟರ್ಸ್ ಯೂನಿಯನ್ ಕಾಲೇಜ್ ಆಫ್ ಬಿಸಿನೆಸ್ ಸಂಸ್ಥೆಗಳ ಮೇಲೆಯೂ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಂಸದ ಅಶೋಕ್ ಮಿತ್ತಲ್ ಅವರ ಮನೆ ಮತ್ತು ಅವರ ಸಹೋದರರಾದ ರಮೇಶ್ ಹಾಗೂ ನರೇಶ್ ಮಿತ್ತಲ್ ಅವರ ಮನೆಗಳ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಪ್ರಸ್ತುತ ಹಣಕಾಸಿನ ದಾಖಲೆಗಳು ಮತ್ತು ವಿದೇಶಿ ವಹಿವಾಟುಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ವಿವರಿಸಿವೆ.
ಈ ಬೆಳವಣಿಗೆಯು ಅಶೋಕ್ ಮಿತ್ತಲ್ ಅವರು ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರ ಬದಲಿಗೆ ಎಎಪಿ ಉಪನಾಯಕರಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ನಡೆದಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಈ ಕ್ರಮವನ್ನು ಖಂಡಿಸಿದ್ದು, ಇದು ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಮಾಡುತ್ತಿರುವ ‘ರಾಜಕೀಯ ದ್ವೇಷದ ದಾಳಿ’ ಎಂದು ಟೀಕಿಸಿದ್ದಾರೆ.
“ಮೋದಿ ಜಿ ಪಂಜಾಬ್ನಲ್ಲಿ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಪಂಜಾಬ್ನ ಜನರು ಇದನ್ನು ಸಹಿಸುವುದಿಲ್ಲ. ಅವರು ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ” ಎಂದಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಇಡಿ ಕ್ರಮಕ್ಕೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.


