“ವ್ಯವಸ್ಥೆಯ ಮೇಲೆ ದಾಳಿ ಮಾಡುವವರ” ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ವಿವಾದವನ್ನು ಅಷ್ಟೊಂದು “ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ವಕೀಲರೊಬ್ಬರಿಗೆ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಸಹ, ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರಲು ದುರುದ್ದೇಶಪೂರಿತ ಅಪಪ್ರಚಾರವನ್ನು ಮುಂದುವರಿಸಲಾಗಿದೆ ಎಂದು ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ನ್ಯಾಯಾಲಯದ ಒಳಗೆ ನಡೆಯುವ ವಾದ-ಪ್ರತಿವಾದಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಾರದು ಎಂದು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಿದ್ದರು. ಇದರೊಂದಿಗೆ, ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಮತ್ತೊಂದು ಪ್ರತ್ಯೇಕ ಪಿಐಎಲ್ ಕೂಡ ಸಲ್ಲಿಕೆಯಾಗಿತ್ತು.
“ಗೌರವಾನ್ವಿತ ಸಿಜೆಐ ಅವರು ಸ್ಪಷ್ಟನೆ ನೀಡಿದ ನಂತರವೂ, ವಿಷಯವನ್ನು ತಿರುಚಿ ದುರುದ್ದೇಶಪೂರಿತವಾಗಿ ಹರಡಲಾಗುತ್ತಿದೆ” ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಾಗ, ಮುಖ್ಯ ನ್ಯಾಯಮೂರ್ತಿಗಳು, “ಇದನ್ನು ಅಷ್ಟೊಂದು ಸೆಂಟಿಮೆಂಟಲ್ ಆಗಿ ತಗೋಬೇಡಿ,” ಎಂದು ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲದೆ, ಈ ಅರ್ಜಿಗಳ ತುರ್ತು ವಿಚಾರಣೆಯ ಮನವಿಯನ್ನು ತಿರಸ್ಕರಿಸಿದ ಸಿಜೆಐ, ಸೂಕ್ತ ಸಮಯದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ವಿವಾದಕ್ಕೆ ಕಾರಣವೇನು?
ಕಳೆದ ಮೇ 15 ರಂದು ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆಡಿದ್ದ ಕೆಲವು ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಇದೇ ವಿಷಯವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಆನ್ಲೈನ್ ಅಭಿಯಾನವೊಂದು ಶುರುವಾಗಿತ್ತು.
ಹಿರಿಯ ವಕೀಲರ ಹುದ್ದೆಯ ಆಕಾಂಕ್ಷಿಯಾಗಿದ್ದ ವಕೀಲರೊಬ್ಬರು, ದೆಹಲಿ ಹೈಕೋರ್ಟ್ಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಆ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದ ಸಿಜೆಐ, ಈ ಹುದ್ದೆಗಾಗಿ ಹೀಗೆ “ಬೆನ್ನುಬೀಳುವುದು” ಸರಿಯೇ ಎಂದು ಪ್ರಶ್ನಿಸಿದ್ದರು.
ಆ ಸಂದರ್ಭದಲ್ಲಿ ಅವರು, “ಸಮಾಜದಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಕೆಲವು ಪರಾವಲಂಬಿಗಳು ಈಗಾಗಲೇ ಇದ್ದಾರೆ, ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ? ಸಮಾಜದಲ್ಲಿ ಯಾವುದೇ ಉದ್ಯೋಗ ಅಥವಾ ವೃತ್ತಿ ಬದುಕಿಲ್ಲದ ಕೆಲವು ಯುವಕರು ಜಿರಳೆಗಳ ತರಹ ಇದ್ದಾರೆ. ಅಂಥವರು ಮಾಧ್ಯಮ, ಸಾಮಾಜಿಕ ಜಾಲತಾಣ, ಆರ್ಟಿಐ ಕಾರ್ಯಕರ್ತರು ಮತ್ತು ಇತರೆ ಹೋರಾಟಗಾರರ ಸೋಗಿನಲ್ಲಿ ಎಲ್ಲರ ಮೇಲೆಯೂ ದಾಳಿ ಮಾಡಲು ಆರಂಭಿಸುತ್ತಾರೆ,” ಎಂದು ಹೇಳಿದ್ದರು.
ಸಿಜೆಐ ನೀಡಿದ ಸ್ಪಷ್ಟನೆ
ಈ ಹೇಳಿಕೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ತಾವು ದೇಶದ ಯುವಕರನ್ನು ಟೀಕಿಸಿಲ್ಲ, ಅದು ಸಂಪೂರ್ಣ ಆಧಾರರಹಿತವಾದದ್ದು ಎಂದು ಅವರು ಸ್ಪಷ್ಟಪಡಿಸಿದ್ದರು.
“ನಕಲಿ ಮತ್ತು ಬೋಗಸ್ ಪದವಿಗಳನ್ನು ಇಟ್ಟುಕೊಂಡು ವಕೀಲಿಕೆ ಸೇರಿದಂತೆ ಇತರೆ ಉದಾತ್ತ ವೃತ್ತಿಗಳಿಗೆ ನುಗ್ಗಿರುವವರನ್ನು ಮಾತ್ರ ನಾನು ನಿರ್ದಿಷ್ಟವಾಗಿ ಟೀಕಿಸಿದ್ದೇನೆ. ಇಂತಹವರೇ ಮಾಧ್ಯಮ, ಸೋಶಿಯಲ್ ಮೀಡಿಯಾಗಳಲ್ಲೂ ನುಸುಳಿದ್ದಾರೆ. ಇವರು ಸಮಾಜದ ಪರಾವಲಂಬಿಗಳಿದ್ದಂತೆ. ನಾನು ದೇಶದ ಯುವ ಜನತೆಯನ್ನು ಟೀಕಿಸಿದ್ದೇನೆ ಎನ್ನುವುದು ತಪ್ಪು. ನಮ್ಮ ದೇಶದ ಯುವ ಸಂಪತ್ತಿನ ಬಗ್ಗೆ ನನಗೆ ಹೆಮ್ಮೆಯಿದೆ, ಭಾರತದ ಪ್ರತಿಯೊಬ್ಬ ಯುವಕನೂ ನನಗೆ ಸ್ಫೂರ್ತಿ,” ಎಂದು ಸಿಜೆಐ ಹೇಳಿದ್ದರು.
ಮಹಾರಾಷ್ಟ್ರ ಮೂಲದ, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ 30 ವರ್ಷದ ಅಭಿಜೀತ್ ದಿಪ್ಕೆ ಎಂಬುವವರು ಸಿಜೆಐ ಅವರ “ಜಿರಳೆ” ಹೇಳಿಕೆಗೆ ಕೌಂಟರ್ ಆಗಿ ಯುವಕರಿಗಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವೇದಿಕೆಯನ್ನು ಘೋಷಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು.
ಆದರೆ, “ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ” ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಮೇರೆಗೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದಂತೆ ಗುರುವಾರ ಈ ‘ಕಾಕ್ರೋಚ್ ಜನತಾ ಪಾರ್ಟಿ’ಯ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ . ಇದರ ಬೆನ್ನಲ್ಲೇ ಅಭಿಜೀತ್ ದಿಪ್ಕೆ ಅವರು ‘ಕಾಕ್ರಾಚ್ ಈಸ್ ಬ್ಯಾಕ್’ ಎಂಬ ಹೊಸ ಖಾತೆಯನ್ನು ತೆರೆದು, ಜನರನ್ನು ಅದಕ್ಕೆ ಸೇರುವಂತೆ ಮನವಿ ಮಾಡಿದ್ದಾರೆ.


