ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (ಜೆಪಿಎಸ್ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್ಸಿ) ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಗುರುವಾರ 13 ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ಹಲವಾರು ವಿದ್ಯಾರ್ಥಿ ಸಂಘಟನೆಗಳಿಂದ ಆಂದೋಲನಕ್ಕೆ ವ್ಯಾಪಕ ಬೆಂಬಲ ಸಿಗುತ್ತಿದೆ.
ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನೂರಾರು ವಿದ್ಯಾರ್ಥಿಗಳು ಪ್ರತಿಭಟನಾಕಾರರೊಂದಿಗೆ ತಮ್ಮ ಒಗ್ಗಟ್ಟು ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳ ಬೇಡಿಕೆಗಳನ್ನು ಬೆಂಬಲಿಸಲು ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ತಲುಪಿದ್ದರಿಂದ ಪ್ರತಿಭಟನೆ ಮತ್ತಷ್ಟು ಬಲ ಬಂದಿದೆ.
ಜೆಪಿಎಸ್ಸಿ ಆಕಾಂಕ್ಷಿಗಳ ನೇತೃತ್ವದಲ್ಲಿ ನಡೆದ ಚಳುವಳಿ ಕಳೆದ ಎರಡು ವಾರಗಳಿಂದ ತೀವ್ರಗೊಂಡಿದೆ. ರಾತ್ರಿಯಿಡೀ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹೊರತಾಗಿಯೂ, ಪ್ರತಿಭಟನಾಕಾರರು ಸ್ಥಳದಲ್ಲಿಯೇ ಇದ್ದರು. ಹೋರಾಟ ಹಿಂತೆಗೆದುಕೊಳ್ಳಲು ನಿರಾಕರಿಸಿದರು. ಸರ್ಕಾರವು ತಮ್ಮ ಬೇಡಿಕೆಗಳನ್ನು ಪರಿಹರಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದರು.
ವಿದ್ಯಾರ್ಥಿ ನಾಯಕ ದೇವೇಂದ್ರ ಮಹ್ತೊ ಕೂಡ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದರು. ಪ್ರತಿಕೂಲ ಹವಾಮಾನದ ಹೊರತಾಗಿಯೂ ಪ್ರತಿಭಟನಾಕಾರರು ರಾತ್ರಿಯಿಡೀ ಹೋರಾಟದ ಸ್ಥಳದಲ್ಲಿಯೇ ಇದ್ದರು.
ಮಳೆಯು ತಮ್ಮ ದೃಢಸಂಕಲ್ಪವನ್ನು ದುರ್ಬಲಗೊಳಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಸಮರ್ಥಿಸಿಕೊಂಡರು. ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಅರ್ಥಪೂರ್ಣ ಕ್ರಮ ಕೈಗೊಳ್ಳುವವರೆಗೆ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ವರದಿಗಾರರ ಜೊತೆಗೆ ಜೊತೆ ಮಾತನಾಡಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳಲ್ಲಿ ಒಬ್ಬರು, ರಾಜ್ಯದ ಶಿಕ್ಷಣ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ ಎಂದು ಆರೋಪಿಸಿದರು.
“ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟಾಚಾರ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ ಎಂದು ಅವರೆಲ್ಲರಿಗೂ ತಿಳಿದಿದೆ. ಇದು ಇಂದು ಪ್ರಾರಂಭವಾದದ್ದಲ್ಲ; ಇದು ಬಹಳ ದಿನಗಳಿಂದ ನಡೆಯುತ್ತಿದೆ. ಇದು ಭಗವಾನ್ ಬಿರ್ಸಾ ಮುಂಡಾ ಅವರ ಭೂಮಿ, ಅವರನ್ನು ನಾವು ಪೂಜಿಸುತ್ತೇವೆ ಮತ್ತು ಗೌರವಿಸುತ್ತೇವೆ. ದುರದೃಷ್ಟವಶಾತ್, ಈ ಪವಿತ್ರ ಮಣ್ಣಿನಲ್ಲಿ ಇಂತಹ ಭ್ರಷ್ಟಾಚಾರ ನಡೆಯುತ್ತಿದೆ. ಇದರಲ್ಲಿ ಭಾಗಿಯಾಗಿರುವವರು ಜಾರ್ಖಂಡ್ನವರೇ ಆಗಿದ್ದಾರೆ. ಅನೇಕರು ಮನೆಗಳನ್ನು ನಿರ್ಮಿಸಲು, ಕಾರುಗಳನ್ನು ಖರೀದಿಸಲು ಮತ್ತು ಸಂಪತ್ತನ್ನು ಸಂಗ್ರಹಿಸಲು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ವಿದ್ಯಾರ್ಥಿ ಹೇಳಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಲಂಚವು ಸಾಮಾನ್ಯವಾಗಿದೆ ಎಂದು ಅವರು ಆರೋಪಿಸಿದರು.
“ಪ್ರತಿಯೊಂದು ಹುದ್ದೆಗೂ ಒಬ್ಬರು ಲಂಚ ನೀಡಬೇಕಾಗುತ್ತದೆ, ಆಗ ಮಾತ್ರ ಅವರು ಹುದ್ದೆಯನ್ನು ಪಡೆದುಕೊಳ್ಳುತ್ತಾರೆ. ಸಿಜಿಎಲ್ ಸೀಟನ್ನು 25 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ” ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, “ಶಿಕ್ಷಣ ವ್ಯವಸ್ಥೆಯು ಭಯಾನಕ ಸ್ಥಿತಿಯಲ್ಲಿರುವುದರಿಂದ ನಾವು ಈ ಪ್ರತಿಭಟನೆಗೆ ಸೇರಿಕೊಂಡಿದ್ದೇವೆ. ಸಾಧ್ಯವಾದಷ್ಟು ಬೇಗ ಸುಧಾರಣೆಗಳನ್ನು ಪರಿಚಯಿಸಬೇಕು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ನಮ್ಮ ಕಾಳಜಿಗಳು ಜಾರ್ಖಂಡ್ ಸರ್ಕಾರವನ್ನು ತಲುಪಬೇಕು ಎಂದು ನಾವು ಬಯಸುತ್ತೇವೆ. ಜಾರ್ಖಂಡ್ನಲ್ಲಿ ನಡೆಸುವ ಎಲ್ಲಾ ಪರೀಕ್ಷೆಗಳು ಪತ್ರಿಕೆ ಸೋರಿಕೆಯಿಂದ ಮುಕ್ತವಾಗಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದರು.
ಅನೇಕ ಆಕಾಂಕ್ಷಿಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳ ಕುರಿತು ಮಾತನಾಡಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಲಭ್ಯವಿರುವ ಕೆಲವೇ ಅವಕಾಶಗಳಲ್ಲಿ ಸರ್ಕಾರಿ ಉದ್ಯೋಗವು ಒಂದಾಗಿದೆ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಹೇಳಿದರು.
“ನಾವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಂದ ಬಂದವರು; ಸರ್ಕಾರಿ ಉದ್ಯೋಗವು ಒಂದು ಆಯ್ಕೆಯಾಗಿ ಉಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿಯೂ ಅಕ್ರಮಗಳಿದ್ದರೆ, ಯಾವುದೇ ಅರ್ಥವಿಲ್ಲ” ಎಂದು ವಿದ್ಯಾರ್ಥಿ ಹೇಳಿದರು.
ನೇಮಕಾತಿ ಪರೀಕ್ಷೆಗಳ ಸುತ್ತಲಿನ ಅನಿಶ್ಚಿತತೆಯು ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸಲು ವರ್ಷಗಳನ್ನು ಮೀಸಲಿಟ್ಟ ಸಾವಿರಾರು ಯುವಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಂದೋಲನದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ವಿದ್ಯಾರ್ಥಿ ಹೇಳಿದರು.
“ಜಾರ್ಖಂಡ್ ಪೊಲೀಸ್, ವಾರ್ಡರ್ ಮತ್ತು ಇತರ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ನಾವೆಲ್ಲರೂ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವ ಭರವಸೆಯೊಂದಿಗೆ ಅಪಾರ ಶ್ರಮವಹಿಸುತ್ತೇವೆ ಎಂದು ನಾವು ಹೇಳಲು ಬಯಸುತ್ತೇವೆ. ನಮ್ಮಲ್ಲಿ ಅನೇಕರು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಂದ ಬಂದವರು, ನಮ್ಮ ಪೋಷಕರು ನಮ್ಮ ಶಿಕ್ಷಣ ಮತ್ತು ತಯಾರಿಗಾಗಿ ದೊಡ್ಡ ತ್ಯಾಗಗಳನ್ನು ಮಾಡುತ್ತಾರೆ” ಎಂದು ಅವರು ತಿಳಿಸಿದರು.


