‘ಎಕ್ಸ್ ಅಂಡ್ ವೈ ಲರ್ನಿಂಗ್’ ಎಂಬ ಶಿಕ್ಷಣ ಸ್ಟಾರ್ಟ್ಅಪ್ ಅನ್ನು ಭಯೋತ್ಪಾದನೆಗೆ ಲಿಂಕ್ ಮಾಡಿದ, ಸಾಮಾಜಿಕ ಜಾಲತಾಣಗಳ ಮೂಲಕ ಸಂಸ್ಥೆಯ ವಿರುದ್ಧ ದ್ವೇಷ ಅಭಿಯಾನ ನಡೆಸಿದ ಆರೋಪ ಹೊತ್ತಿರುವ ಸ್ವಘೋಷಿತ ಎಕ್ಸ್ ಮುಸ್ಲಿಂ ಹಾಗೂ ಝಿಯೋನಿಸ್ಟ್ ಆರಿಫ್ ಹುಸೇನ್ ತೆರುವತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ನ್ಯಾಯಾಲಯವೊಂದು ಪಂದೀರಂಕಾವು ಪೊಲೀಸರಿಗೆ ಸೂಚಿಸಿದೆ.
ಎಕ್ಸ್ ಅಂಡ್ ವೈ ಲರ್ನಿಂಗ್ ದಾಖಲಿಸಿದ ದೂರಿನ ಪ್ರಕಾರ, ಆರಿಫ್ ಹುಸೇನ್ ಫೇಸ್ಬುಕ್ನಲ್ಲಿ ಹಂಚಿಕೊಂಡ ಪೋಸ್ಟ್ಗಳಲ್ಲಿ ಎಕ್ಸ್ ಅಂಡ್ ವೈ ಲರ್ನಿಂಗ್ ಸಂಸ್ಥೆಯು ಅಲ್-ಫಲಾಹ್ ವಿಶ್ವವಿದ್ಯಾನಿಲಯದೊಂದಿಗೆ ನಂಟು ಹೊಂದಿದೆ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಸಂಸ್ಥೆಯನ್ನು ತೀವ್ರವಾದಿ ಅಥವಾ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದು ಪರೋಕ್ಷವಾಗಿ ಬಿಂಬಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಂಸ್ಥೆಯ ವಿದ್ಯಾರ್ಥಿ-ಪೋಷಕರ ಸಭೆಯೊಂದಕ್ಕೆ ಅತಿಥಿ ಭಾಷಣಕಾರರಾಗಿ ಆಗಮಿಸಿದ್ದ ಪ್ರಮುಖ ವೈದ್ಯರೊಬ್ಬರನ್ನು ಆರಿಫ್ ಗುರಿಯಾಗಿಸಿಕೊಂಡು ನಿಂದಿಸಿದ್ದಾನೆ, ಅವರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದ್ದಾನೆ ಮತ್ತು ಈ ಆರೋಪಗಳನ್ನು ಮುಂದಿಟ್ಟು ವೈದ್ಯರನ್ನು ಹಾಗೂ ಸ್ಟಾರ್ಟ್ಅಪ್ ಸಂಸ್ಥೆ ಎರಡನ್ನೂ ಅಪಖ್ಯಾತಿಗೊಳಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ದೂರಿನಲ್ಲಿ ಉಲ್ಲೇಖಿಸಲಾದ 2025ರ ಡಿಸೆಂಬರ್ ತಿಂಗಳ ಪೋಸ್ಟ್ನಲ್ಲಿ, ಆರಿಫ್ ಹುಸೇನ್ ತೆರುವತ್ ಎಕ್ಸ್ ಅಂಡ್ ವೈ ಲರ್ನಿಂಗ್ ಸಂಸ್ಥೆಯನ್ನು “ಜಿಹಾದಿ” ಸಂಸ್ಥೆ ಎಂದು ಬಣ್ಣಿಸಿದ್ದಾನೆ. ಅಲ್ಲದೆ, ಇದು ‘ವೈಟ್ ಕಾಲರ್ ಜಿಹಾದ್’ ಚಟುವಟಿಕೆಗಳಲ್ಲಿ ನಿರತವಾಗಿದೆ ಎಂದು ಆರೋಪಿಸಿ, ಇದನ್ನು ಕೇರಳದ “ಅಲ್-ಫಲಾಹ್ ವಿಶ್ವವಿದ್ಯಾನಿಲಯ” ಎಂದು ಕರೆದಿದ್ದಾನೆ. ಜೊತೆಗೆ, ಈ ಸಂಸ್ಥೆಯ ಬಗ್ಗೆ ತನಿಖೆ ನಡೆಸುವಂತೆ ಕೇರಳ ಪೊಲೀಸ್, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾನೆ.
ದೂರಿನ ಪ್ರಕಾರ, ಸದರಿ ಕಾರ್ಯಕ್ರಮದಲ್ಲಿ ಮಾಜಿ ಐಪಿಎಸ್ ಅಧಿಕಾರಿ ರಿಷಿರಾಜ್ ಸಿಂಗ್ ಮತ್ತು ಪತ್ರಕರ್ತ ಬಾಬು ರಾಮಚಂದ್ರನ್ ಕೂಡ ಭಾಗವಹಿಸಿದ್ದರು, ಆದರೆ ಆ ಅತಿಥಿಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ.
ಸಂಸ್ಥೆಯು ಆರಂಭದಲ್ಲಿ ಪಂದೀರಂಕಾವು ಪೊಲೀಸರಿಗೆ ದೂರು ನೀಡಿತ್ತು. ಆದರೆ, ಯಾವುದೇ ಎಫ್ಐಆರ್ ದಾಖಲಾಗದ ಕಾರಣ, ಅದು ಕೋಝಿಕ್ಕೋಡ್ನ ಜುಡೀಶಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಯಿತು. ಈ ಕುರಿತು ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿರುವ ಎಕ್ಸ್ ಅಂಡ್ ವೈ ಲರ್ನಿಂಗ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೊಹಮ್ಮದ್ ಅಜ್ಮಲ್ ಸಿ, ಕೇರಳ ಸ್ಟಾರ್ಟ್ಅಪ್ ಮಿಷನ್ನಿಂದ ಮಾನ್ಯತೆ ಪಡೆದಿರುವ ಈ ಸ್ಟಾರ್ಟ್ಅಪ್ನಲ್ಲಿ ಸುಮಾರು 7,000 ವಿದ್ಯಾರ್ಥಿಗಳು ಮತ್ತು 200ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಹಾಗೂ ಯಾವುದೇ ಧರ್ಮದ ನಂಟಿಲ್ಲದ ವ್ಯಕ್ತಿಗಳು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ಇಂತಹ ವ್ಯಕ್ತಿಗಳು ವ್ಯವಹಾರಗಳನ್ನು ಗುರಿಯಾಗಿಸುವುದನ್ನು ಮುಂದುವರಿಸಲು ತಾವು ಬಯಸುವುದಿಲ್ಲವಾದ್ದರಿಂದಲೇ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದ್ದಾಗಿ ಅಜ್ಮಲ್ ಸಿ ತಿಳಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುವುದು ಇತರರನ್ನು ಅಪಖ್ಯಾತಿಗೊಳಿಸುವ ಪರವಾನಗಿಯಲ್ಲ ಎಂದಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಯಸುವ ಉದ್ಯಮದಾರರು ಮತ್ತು ಸಾರ್ವಜನಿಕರು ಕಾನೂನುಬದ್ಧ ವ್ಯವಹಾರಗಳನ್ನು ರಕ್ಷಿಸುವಲ್ಲಿ ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ನ್ಯಾಯಾಲಯದ ಆದೇಶದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ, ಆರಿಫ್ ಹುಸೇನ್ ತೆರುವತ್ ಎಕ್ಸ್ ಅಂಡ್ ವೈ ಲರ್ನಿಂಗ್ ವಿರುದ್ಧದ ತಮ್ಮ ಹಿಂದಿನ ಆರೋಪಗಳನ್ನು ಪುನರುಚ್ಚರಿಸಿದ್ದು, ತಾನು ತನ್ನ ಹೇಳಿಕೆಗಳಿಗೆ ಬದ್ಧವಾಗಿರುವುದಾಗಿ ಮತ್ತು ಆ ಸಂಸ್ಥೆಯ ವಿರುದ್ಧ ತಾನೂ ಸಹ ದೂರು ನೀಡುವುದಾಗಿ ತಿಳಿಸಿದ್ದಾನೆ.
ಈ ಕಾರ್ಯಕ್ರಮವು ‘ವೈಟ್ ಕಾಲರ್ ಜಿಹಾದ್’ ಅನ್ನು ಹೋಲುತ್ತದೆ ಎಂಬ ತನ್ನ ವಾದವನ್ನು ಪುನರುಚ್ಚರಿಸಿರುವ ಆರಿಫ್, ಕೇರಳ ಮತ್ತು ಕೇಂದ್ರ ಸರ್ಕಾರಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾನೆ.
ಕೆಲವು ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆಗಳನ್ನು ‘ಭಯೋತ್ಪಾದನೆ, ಉಗ್ರವಾದ ಮತ್ತು ತಾಲಿಬಾನ್ ಮಾದರಿಯ ಸಿದ್ಧಾಂತಕ್ಕೆ’ ಮುಖವಾಡವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬುವುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಹೇಳಿರುವ ಆರಿಫ್, ಕೇರಳವು ‘ಅಲ್-ಫಲಾಹ್ ವಿಶ್ವವಿದ್ಯಾನಿಲಯಗಳ’ ತಾಣವಾಗಿ ಬದಲಾಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಹೇಳಿದ್ದಾನೆ.
ಆರಿಫ್ ಹುಸೇನ್ ತೆರುವತ್ ಒಬ್ಬ ಸ್ವಘೋಷಿತ ಎಕ್ಸ್ ಮುಸ್ಲಿಂ ಯೂಟ್ಯೂಬರ್, ಈತ ಇಸ್ಲಾಮೋಫೋಬಿಕ್ ನರೇಟಿವ್ ಬಿತ್ತುತ್ತಿದ್ದಾನೆ ಮತ್ತು ಹಿಂದುತ್ವ ರಾಜಕಾರಣದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾನೆ ಎಂಬ ಆರೋಪಗಳಿವೆ.
ಸಾರ್ವಜನಿಕವಾಗಿ ತನ್ನನ್ನು ತಾನು ಝಿಯೋನಿಸ್ಟ್ ಎಂದು ಗುರುತಿಸಿಕೊಳ್ಳುವ ತೆರುವತ್, ಗಾಝಾದಲ್ಲಿ ಇಸ್ರೇಲ್ನ ನರಮೇಧವನ್ನು ಪದೇ ಪದೇ ಬೆಂಬಲಿಸುತ್ತಾನೆ.
ಧರ್ಮಗಳ ನಡುವೆ ವೈಷಮ್ಯವನ್ನು ಉಂಟುಮಾಡುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ಇಸ್ಲಾಮಿಕ್ ಆಚರಣೆಗಳ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡುವುದು ಸೇರಿದಂತೆ ದ್ವೇಷಪೂರಿತ ಭಾಷಣದ ಆರೋಪಗಳ ಮೇಲೆ ತೆರುವತ್ ಈ ಹಿಂದೆ ಕೂಡ ಪೊಲೀಸ್ ಪ್ರಕರಣಗಳು ಮತ್ತು ನ್ಯಾಯಾಲಯದ ಅರ್ಜಿಗಳನ್ನು ಎದುರಿಸಿದ್ದಾನೆ.
Credit : maktoobmedia.com


