ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ “ಶಾ ಪ್ರೇರಿತ ತೆಗೆದುಹಾಕುವಿಕೆ” (Shah Instigated Removal) ಮತ್ತು “ಸಂವಿಧಾನದ ಮೇಲಿನ ದಾಳಿ” ಎಂದು ಭಾನುವಾರ (ಸೆ.20) ಹೇಳಿದೆ.
ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಗಳಿಂದ ಬೃಹತ್ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಟ್ಟಿರುವುದು ಹೆಚ್ಚಾಗಿ ಸಮಾಜದ ಅತ್ಯಂತ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮತ್ತು ವಂಚಿತ ವರ್ಗಗಳಿಗೆ ಸೇರಿದ ಮತದಾರರದ್ದೇ ಆಗಿದೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ, ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮೊದಲ ಹಂತವನ್ನು ಜೂನ್ 2025ರಲ್ಲಿ ಬಿಹಾರದಲ್ಲಿ ಪ್ರಾರಂಭಿಸಿತು. ನವೆಂಬರ್ 2025ರಲ್ಲಿ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತವನ್ನು ಜಾರಿಗೆ ತರಲಾಯಿತು. ಈ ಒಂದು ಮತ್ತು ಎರಡನೇ ಹಂತದಲ್ಲಿ 7.8 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ.
ಎಸ್ಐಆರ್ ಪೂರ್ವ ಮತದಾರರ ಪಟ್ಟಿಗೆ ಹೋಲಿಸಿದರೆ, ಹೆಸರುಗಳನ್ನು ಕೈಬಿಡುವ ಪ್ರಮಾಣವು ಶೇಕಡಾ 13ರಷ್ಟಿದೆ. 2026ರ ಮಧ್ಯಭಾಗದಲ್ಲಿ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಹಂತವು ಪ್ರಾರಂಭವಾಯಿತು. ಪ್ರಸ್ತುತ ನಡೆಯುತ್ತಿರುವ ಮೂರನೇ ಹಂತದಲ್ಲಿ, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ದತ್ತಾಂಶದ ಪ್ರಕಾರ, ಒಟ್ಟು 36.06 ಕೋಟಿ ಮತದಾರರ ಪೈಕಿ 6.18 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಸರುಗಳನ್ನು ತೆಗೆದುಹಾಕುವ ಪ್ರಮಾಣವು ಶೇಕಡಾ 17ಕ್ಕಿಂತ ಹೆಚ್ಚಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಳ್ಳಲು ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ಕೋರಿ ಇನ್ನೂ 5.43 ಕೋಟಿ ಮತದಾರರಿಗೆ ನೋಟಿಸ್ಗಳನ್ನು ನೀಡಲಾಗಿದೆ. ಹೀಗೆ ಹೆಸರುಗಳನ್ನು ತೆಗೆದುಹಾಕುವ ಸಾಧ್ಯತೆಯು ಹೆಚ್ಚುವರಿಯಾಗಿ ಶೇಕಡಾ 15ರಷ್ಟಿದೆ. ಇದು ಅಸಾಮಾನ್ಯವಾಗಿ ಹೆಚ್ಚಿನ ಪ್ರಮಾಣವಾಗಿದ್ದು, ಸಂಪೂರ್ಣ ಎಸ್ಐಆರ್ ಪ್ರಕ್ರಿಯೆಯಲ್ಲಿನ ರಚನಾತ್ಮಕ ದೋಷಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಟ್ಟ ನಂತರವೂ, ‘ಪರಿಶೀಲನೆಗೆ ಒಳಪಡಬೇಕಾದ’ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಮತದಾರರು ಹೇಗೆ ಉಳಿದುಕೊಂಡಿದ್ದಾರೆ ಎಂದು ಪ್ರಶ್ನಿಸಿದೆ.
ಬೆಚ್ಚಿಬೀಳಿಸುವಂತಹ ಪ್ರಮಾಣದಲ್ಲಿ, ಅಂದರೆ ಶೇ.32 ರಷ್ಟು (ಅಥವಾ ಸುಮಾರು ಮೂವರಲ್ಲಿ ಒಬ್ಬರು) ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಅಥವಾ ಅಂತಹ ಅಪಾಯವನ್ನು ಅವರು ಎದುರಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯವಾರು ಅಂಕಿಅಂಶಗಳು ಹೀಗಿವೆ: ದೆಹಲಿ (ಶೇ. 53.73), ಚಂಡೀಗಢ (ಶೇ. 52.58), ಜಾರ್ಖಂಡ್ (ಶೇ. 39.57), ಉತ್ತರಾಖಂಡ (ಶೇ. 35.71), ಮೇಘಾಲಯ (ಶೇ. 35.36), ಮಹಾರಾಷ್ಟ್ರ (ಶೇ. 33.88), ತೆಲಂಗಾಣ (ಶೇ. 48.90), ಕರ್ನಾಟಕ (ಶೇ. 27.6), ಹರಿಯಾಣ (ಶೇ. 37.5), ಒಡಿಶಾ (ಶೇ. 23.67), ಆಂಧ್ರಪ್ರದೇಶ (ಶೇ. 21.17) ಮತ್ತು ಪಂಜಾಬ್ (ಶೇ. 15.23). ಕರ್ನಾಟಕ, ತೆಲಂಗಾಣ ಮತ್ತು ಜಾರ್ಖಂಡ್ನಲ್ಲಿ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಡುವ ಅಪಾಯದಲ್ಲಿರುವ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ, ಇದರಿಂದ ಮತದಾರರು ತಮ್ಮ ಹೆಸರು ಅದರಲ್ಲಿ ಇದೆಯೇ ಎಂದು ಪರಿಶೀಲಿಸಿಕೊಳ್ಳಬಹುದು. ‘ದೆಹಲಿಯು ಈ ಪಟ್ಟಿಯನ್ನು ಸೆಪ್ಟೆಂಬರ್ 19, 2026 ರಂದು ಮಾತ್ರ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿದೆ, ಅದು ಕೂಡ ಸಾರ್ವಜನಿಕ ಒತ್ತಡಕ್ಕೆ ಮಣಿದು. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳು ಹಾಗೂ ಪಂಜಾಬ್ ಇದುವರೆಗೆ ಅಂತಹ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
ವಿವಿಧ ರಾಜ್ಯಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿರುವ ಪ್ರಕರಣಗಳಲ್ಲಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಮತ್ತು ವಂಚಿತ ವರ್ಗಗಳಿಗೆ ಸೇರಿದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಹೆಚ್ಚಿನ ಪ್ರಮುಖ ರಾಜ್ಯಗಳಲ್ಲಿ, ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರಕಟಣೆ ಪ್ರತಿಪಾದಿಸಿದೆ.
ಈ ‘ಎಸ್ಐಆರ್ನಲ್ಲಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ತಾನು ಎಂದಿಗೂ ಒದಗಿಸಿಲ್ಲದ ದಾಖಲೆಗಳನ್ನು ಹಾಜರುಪಡಿಸುವ ಹೊಣೆಯನ್ನು ನಾಗರಿಕರ ಮೇಲೆ ಹೊರಿಸಿದೆ. ಹಾಗಾಗಿ, ಬಹುಸಂಖ್ಯಾತ ನಾಗರಿಕರು ಉತ್ತೀರ್ಣರಾಗಲು ಸಾಧ್ಯವಾಗದ ಈ ಪರೀಕ್ಷೆಯು ಕೇವಲ ‘ಹೊರಗಿಡುವ ಯಂತ್ರ’ವಷ್ಟೇ ಎಂದು ಪ್ರಕಟಣೆ ಹೇಳಿದೆ.
ಎಸ್ಐಆರ್ (SIR)ಎಂಬುದು ವಾಸ್ತವವಾಗಿ ಶಾ (Shah) ಅವರ ಪ್ರಚೋದನೆಯಿಂದ ಮತದಾರರನ್ನು ಬೃಹತ್ ಪ್ರಮಾಣದಲ್ಲಿ ಪಟ್ಟಿಯಿಂದ ತೆಗೆದುಹಾಕುವ (Shah Instigated Removal) ಪ್ರಕ್ರಿಯೆಯಾಗಿದೆ. ಇದು ನಮ್ಮ ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
‘ಎಕ್ಸ್’ ಜಾಲತಾಣದಲ್ಲಿ ತಮ್ಮ ಹೇಳಿಕೆಯನ್ನು ಹಂಚಿಕೊಂಡಿರುವ ಜೈರಾಮ್ ರಮೇಶ್, ‘ವಾಸ್ತವವಾಗಿ ಎಸ್ಐಆರ್ (SIR) ಎಂದರೆ ‘ಶಾ (Shah) ಅವರಿಂದ ಪ್ರೇರೇಪಿತವಾದ ಬೃಹತ್ ಪ್ರಮಾಣದ ಮತದಾರರ ಹೆಸರುಗಳ ತೆಗೆದುಹಾಕುವಿಕೆ’ (Shah Instigated Removal) ಆಗಿದೆ. ನಮ್ಮ ಸಂವಿಧಾನದ ಮೇಲೆಯೇ ನಡೆಸಿರುವ ಈ ದಾಳಿ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಪರವಾಗಿಲ್ಲದ ಮತದಾರರನ್ನು ಗುರಿಯಾಗಿಸಿಕೊಳ್ಳಲು ರೂಪಿಸಲಾದ ತಂತ್ರ ಇದಾಗಿದೆ ಎಂದು ಬರೆದುಕೊಂಡಿದ್ದಾರೆ.
ಆದರೆ, 22 ವರ್ಷಗಳ ನಂತರ ನಡೆಯುತ್ತಿರುವ ಈ ಪರಿಷ್ಕರಣೆಯು ಮತದಾರರ ಪಟ್ಟಿಯಿಂದ ಅನರ್ಹ ವ್ಯಕ್ತಿಗಳು ಹಾಗೂ ನಕಲಿ ನೋಂದಣಿಗಳನ್ನು ತೆಗೆದುಹಾಕಲಿದೆ ಮತ್ತು ಕಾನೂನುಬದ್ಧವಾಗಿ ಮತ ಚಲಾಯಿಸಲು ಅರ್ಹರಾದವರನ್ನು ಪಟ್ಟಿಗೆ ಸೇರಿಸಲಿದೆ ಎಂದು ಚುನಾವಣಾ ಆಯೋಗವು ಸಮರ್ಥಿಸಿಕೊಂಡಿದೆ.


