ಮಹಾದಾಯಿ ನದಿ ನೀರು ಹಂಚಿಕೆ ವಿಷಯವಾಗಿ ಕರ್ನಾಟಕ ಮಹತ್ವದ ವಿಜಯ ಸಾಧಿಸಿದೆ. ಮೂರು ರಾಜ್ಯಗಳು ಐ ತೀರ್ಪು ಅಧಿಸೂಚನೆಗೆ ಒಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ನ್ಯಾಯಪೀಠ ಹೇಳಿದೆ. ಆದರೆ ಮಹಾದಾಯಿ ವಿಚಾರಣೆಯನ್ನು ಜುಲೈ 15 ರಿಂದ ನಡೆಸುವುದಾಗಿ ಹೇಳಿದೆ.
ನ್ಯಾಯ ಮಂಡಳಿಯೂ ರಾಜ್ಯಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಈ ಹಿಂದೆ ರಾಜ್ಯಕ್ಕೆ ನೀಡಿದ್ದ ನೀರಿನ ಪ್ರಮಾಣದ ಬಗ್ಗೆ ಗೋವಾ ಸರ್ಕಾರವೂ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ನೀಡಿದ ಅಧಿಸೂಚನೆಗೆ ಮೂರೂ ರಾಜ್ಯಗಳು ಒಪ್ಪಿಗೆ ನೀಡಿದೆ.
ಈ ವಿಚಾರವನ್ನು ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸ್ತಾಪಿಸಿ “ನಮ್ಮ ಪರವಾಗಿ ತೀರ್ಪು ಬಂದಿರುವುದು ಸಂತೋಷದ ವಿಚಾರ” ಎಂದರು.
ಸಚಿವ ಜಗದೀಶ್ ಶೆಟ್ಟರ್ ಸುದ್ದಿಗಾರರೊಂದಿಗೆ ಮಾತನಾಡಿ “ಮೂರು ರಾಜ್ಯಗಳು ಸೌಹಾರ್ದಯುತವಾಗಿ ಇದನ್ನು ಒಪ್ಪಿದ್ದು ಸಂತೋಷದ ವಿಚಾರ, ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದ್ದೂದರ ಫಲ ಇದು” ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ “ಮಹದಾಯಿ ಐತೀರ್ಪಿನ ಗೆಜೆಟ್ ಪ್ರಕಟಣೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ನಮ್ಮ ನೀರಿನ ಹಕ್ಕಿಗಾಗಿ ಕಷ್ಟ-ನಷ್ಟಗಳನ್ನು ಎದುರಿಸಿ ಶ್ರಮಿಸಿದ್ದ ರೈತಹೋರಾಟಗಾರರಿಗೆ ಅಭಿನಂದನೆಗಳು” ಎಂದು ಟ್ವಿಟ್ಟರಿನಲ್ಲಿ ಹೇಳಿದ್ದಾರೆ .
ಅಲ್ಲದೇ “ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ತಕ್ಷಣ ಗೆಜೆಟ್ ಪ್ರಕಟಣೆ ಮಾಡಿ ಕಳಸಾ-ಬಂಡೂರಿ ನಾಲೆ ನಿರ್ಮಾಣ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪ್ರಾರಂಭಿಸಬೇಕು. ಯೋಜನೆಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಹದಾಯಿ ನೀರು ಹಂಚಿಕೆ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ. ಐತೀರ್ಪು ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ಜುಲೈ 15ರಿಂದ ಪ್ರಾರಂಭವಾಗಲಿದೆ. ರಾಜ್ಯವನ್ನು ಪ್ರತಿನಿಧಿಸುವ ವಕೀಲರ ತಂಡಕ್ಕೆ ರಾಜ್ಯ ಸರ್ಕಾರ ಅಗತ್ಯ ಮಾಹಿತಿ ನೀಡಿ ಸಹಕರಿಸಿ ನ್ಯಾಯಾಲಯದಲ್ಲಿಯೂ ಗೆಲುವು ನಮ್ಮದಾಗುವಂತೆ ನೋಡಿಕೊಳ್ಳಬೇಕು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.