ಮತ್ತೊಬ್ಬ ದಲಿತ ಮಗಳು ಮೇಲ್ಜಾತಿಯ ಅಹಂಕಾರದ ಬರ್ಬರ ಬೆಂಕಿಯಲ್ಲಿ ಬೆಂದು ಬೂದಿಯಾಗಿ ಮಣ್ಣು ಸೇರಿದ್ದಾಳೆ. ಸದ್ಯದಲ್ಲೇ ಅಂಕಿ ಸಂಖ್ಯೆಯಾಗಿ ಮಾತ್ರವೇ ಇತಿಹಾಸದಲ್ಲಿ ದಾಖಲಾಗಿಬಿಡುತ್ತಾಳೆ.
ದೇಶದ ರಾಜಧಾನಿ ದೆಹಲಿಯಿಂದ ಹೆಚ್ಚು ದೂರವೇನೂ ಇಲ್ಲದ ಹಾಥ್ರಸ್ನ ಈ ಮಗಳು ಎದುರಿಸಿದ ಹಿಂಸೆ ಪೈಶಾಚಿಕ ಸ್ವರೂಪದ್ದು. ಹದಿನೈದು ದಿನಗಳ ಕಾಲ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡದೆ ಅಕ್ಷರಶಃ ಕೊಂದ ಕಾರಸ್ಥಾನದಲ್ಲಿ ಸರ್ಕಾರ- ಸಮಾಜದ ಕೈಗಳು ರಕ್ತಸಿಕ್ತವಾಗಿವೆ.
ತನುಶ್ರೀ ಪಾಂಡೆ ಎಂಬ ದೆಹಲಿಯ ಎಳೆಯ ಉತ್ಸಾಹಿ ಟಿವಿ ವರದಿಗಾರ್ತಿಯ ಕಳಕಳಿಯ ಕಸಬುದಾರಿಕೆಯು ಈ ಕೊಲೆಗಡುಕತನವನ್ನು ಬೆತ್ತಲಾಗಿಸಿತು. ಇಲ್ಲದೆ ಹೋಗಿದ್ದರೆ ಹಳ್ಳಿಗಾಡುಗಳಲ್ಲಿ ಸಮಾಧಿಯಾಗುವ ಇಂತಹದೇ ಸಾವಿರಾರು ಪ್ರಕರಣಗಳ ಸಾಲಿಗೆ ಈ ಪ್ರಕರಣವೂ ಸೇರಿ ಹೋಗುತ್ತಿತ್ತು.

ಸಮೂಹ ಮಾಧ್ಯಮಗಳ ಪ್ರಚಾರದ ಮುಂಬೆಳಕು ಬೀಳದ ಹತ್ತಾರು ಸಾವಿರ ನತದೃಷ್ಟ ಪ್ರಕರಣಗಳು ದಶಕಗಳಿಂದ ಕೊಳೆಯುತ್ತಿವೆ. ಸಾಮಾಜಿಕ ಕಳಂಕದ ಕ್ರೂರ ಹೊರೆ ಹೊತ್ತು ದೇಶದ ನಾನಾ ನ್ಯಾಯಾಲಯಗಳಲ್ಲಿ ಧೂಳು ಹಿಡಿದಿರುವ ಕಡತಗಳಲ್ಲಿ ಹೂತು ಹೋಗಿರುವ ಲಕ್ಷಾಂತರ ಹೆಣ್ಣು ಜೀವಗಳ ಮೊರೆಯನ್ನು ಕೇಳುವವರು ಯಾರು?
ಕೊಂಬೆ ಕೊಂಬೆಗಳಲ್ಲಿ ಚಿನ್ನದ ಹಕ್ಕಿಗಳು ಕೂಗುತ್ತಿದ್ದವೆಂದು ಹೇಳಲಾಗುವ ಭವ್ಯ ಇತಿಹಾಸದ ಭಾರತ ದೇಶದ ಹಿಂದೂಗಳಿಗೆ ದಲಿತರು ಮನುಷ್ಯರಂತೆ ಯಾವ ಕಾಲಕ್ಕೆ ಕಾಣಬಹುದು ಎಂಬ ಪ್ರಶ್ನೆ ನಿರಂತರ ಪ್ರಶ್ನೆಯಾಗಿಯೇ ಉಳಿಯಲಿದೆ. ರಕ್ತದಲ್ಲಿ ಬೆರೆತು ಹೋಗಿರುವ ಈ ಅಸಮಾನತೆ ಅಳಿಯುವ ಸಾಧ್ಯತೆ ದೂರ ದಿಗಂತದ ಚುಕ್ಕೆಯಾಗಿಯೂ ಕಾಣಬರುತ್ತಿಲ್ಲ.

ಇಂಡಿಯಾ ದೇಶದಲ್ಲಿ ನೀವು ಸವರ್ಣೀಯರಾಗಿದ್ದರೆ, ದಲಿತ ಸಮುದಾಯದಿಂದ ಬಂದ ವ್ಯಕ್ತಿಯೊಬ್ಬನಿಗೆ ಏನಾಗುತ್ತಿದೆಯೆಂದು ಅರಿಯುವುದು ನಿಮಗೆ ಸಾಧ್ಯವೇ ಇಲ್ಲ. ದಲಿತರನ್ನು ಹೇಗೆ ಕಾಣಲಾಗುತ್ತಿದೆ ಮತ್ತು ಅವರ ಜಗತ್ತು ವಾಸ್ತವದಲ್ಲಿ ಹೇಗಿದೆ ಎಂಬ ಸಂಗತಿಯನ್ನು ಬೆರಳೆಣಿಕೆಯ ಜನರಷ್ಟೇ ಬಲ್ಲರು ಎನ್ನುತ್ತಾರೆ ಸಂವೇದನಾಶೀಲ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್.
ನಖಶಿಖಾಂತ ಮೇಲು ಕೀಳನ್ನು ಸಾರಿ ಹೇಳುವ ವರ್ಣವ್ಯವಸ್ಥೆಯು ಇಂಡಿಯಾದ ಕೆಳವರ್ಗಗಳ ದಿಕ್ಕೆಟ್ಟ ಬದುಕುಗಳಿಗೆ ಬೀಸಿ ಬಡಿಯುತ್ತಲೇ ಇರುವ ತೀರದ ಶಾಪ. ಈ ವ್ಯವಸ್ಥೆಯನ್ನು ಅನವರತ ಜೀವಂತ ಇರಿಸುವುದನ್ನೇ ಪರಮವೈಭವ ಎಂದು ಭಾವಿಸುತ್ತಾರೆ ಯಥಾಸ್ಥಿತಿವಾದಿಗಳು. ನಾವೆಲ್ಲ ಒಂದು ಎಂದು ಹೇಳುತ್ತಲೇ ವಂಚಿತ ಸಮುದಾಯಗಳ ಇಹದ ಬದುಕನ್ನು ನರಕ ಆಗಿಸುತ್ತಿದ್ದಾರೆ. ಇಲ್ಲವೇ ಅವರನ್ನು ಕೊಂದು ನಿವಾರಿಸಿ ಭರತಭೂಮಿಗೆ ಅಂಟಿರುವ ‘ಪಾಪ’- ‘ಕಳಂಕ’ವನ್ನು ತೊಳೆಯತೊಡಗಿದ್ದಾರೆ.
ಅವಮಾನಿತ ಕೆಳಜಾತಿಗಳ ದಮನದ ಅಮಾನುಷ ಮುಖಗಳು ಹತ್ತು ಹಲವು. ದಲಿತರು ಚಪ್ಪಲಿ ಧರಿಸುವುದನ್ನು ನಿಷೇಧಿಸಿರುವ, ಊರು ಪ್ರವೇಶ ಮಾಡುವ ಮುನ್ನ ಚಪ್ಪಲಿಯನ್ನು ಕಳಚಿ ಕೈಲಿ ಹಿಡಿದು ನಡೆಯಬೇಕಾದ, ಏರಿದ್ದ ಸೈಕಲ್ಲನ್ನು ಇಳಿದು ಅದನ್ನು ತಳ್ಳಿಕೊಂಡೇ ಮೇಲ್ಜಾತಿಗಳ ವಸತಿಯನ್ನು ಹಾದು ಹೋಗಬೇಕಾದ ರೂಢಿ ಇಂದಿಗೂ ಜಾರಿಯಲ್ಲಿರುವ ಸಾವಿರಾರು ಹಳ್ಳಿಗಳಿವೆ.
ಉತ್ತರಭಾರತದ ಮದುವೆಗಳಲ್ಲಿ ವರ ಕುದುರೆಯೇರಿ ದಿಬ್ಬಣ ಹೊರಡುವ ರಿವಾಜಿದೆ. ದಲಿತರು ಕುದುರೆ ಏರುವಂತಿಲ್ಲ. ಆನೆ ಕುದುರೆ ಎತ್ತಿನ ಗಾಡಿ ಏರಿದ ದಲಿತ ಮದುಮಕ್ಕಳನ್ನು ಮೇಲು ಜಾತಿಗಳು ಥಳಿಸಿ ರಂಪ ಮಾಡುವ ವಿದ್ಯಮಾನಗಳು ಇಂದಿಗೂ ಅಳಿದಿಲ್ಲ.
ಮೋಟರ್ ಸೈಕಲ್ ಸವಾರಿ ಮಾಡುವ ದಲಿತ ಯುವಕನ ಮೂಗು ಕತ್ತರಿಸುವ, ಅಂಬೇಡ್ಕರ್ ರಿಂಗ್ಟೋನನ್ನು ತೆಗೆದು ಹಾಕಲಿಲ್ಲವೆಂದು ದಲಿತ ತರುಣನ ಪ್ರಾಣವನ್ನೇ ತೆಗೆಯುವ, ದಲಿತ ಪ್ರೊಫೆಸರಿಗೆ ಬಾಡಿಗೆ ಮನೆ ನಿರಾಕರಿಸುವ, ಮೂರು ವರ್ಷದ ದಲಿತ ಹಸುಳೆಗೆ ಕ್ಷೌರ ಮಾಡಲು ನಿರಾಕರಿಸುವ, ಮೇಲ್ಜಾತಿಯ ಮಕ್ಕಳ ತಟ್ಟೆ ಮುಟ್ಟಿದನೆಂದು ಎಳೆಯ ದಲಿತ ಜೀವವನ್ನು ಥಳಿಸುವ ಘಟನೆಗಳು ಈ ಸಮಾಜದ ಆತ್ಮಸಾಕ್ಷಿಯನ್ನು ಕಲಕುವುದೇ ಇಲ್ಲ.
ಅತ್ಯಾಚಾರವನ್ನು ಪ್ರತಿಭಟಿಸಿದ ದಲಿತ ಬಾಲಕಿಯೊಬ್ಬಳ ಮೂಗು, ಕಿವಿ ಹಾಗೂ ತೋಳನ್ನು ಕತ್ತರಿಸಿ ಒಗೆದವರು ಮೇಲ್ಚಾತಿಗಳ ಬಲಾತ್ಕಾರಿಗಳು. ಆಕೆಯ ದುಪಟ್ಟಾದಿಂದಲೇ ಬಾಲೆಯ ಕಣ್ಣು ಕಟ್ಟಿದ ಧೂರ್ತರು ಮೂಗು ಕಿವಿ ತೋಳನ್ನು ಕೊಡಲಿಯಿಂದ ಕತ್ತರಿಸಿ ಒಗೆದ ಘಟನೆ ನಡೆದದ್ದು ಮಧ್ಯಪ್ರದೇಶದಲ್ಲಿ.
ಛತ್ತೀಸ್ಗಢದ ಬಡ ಓರಾನ್ ಆದಿವಾಸಿ ಕುಟುಂಬದ ಮಗಳು ಹದಿನಾರರ ಮೀನಾ ಖಾಲ್ಕೋ. ಒಂದು ಸಂಜೆ ಸೈಕಲ್ ಹತ್ತಿ ಗೆಳತಿಯ ಮನೆಗೆ ತೆರಳಿದವಳು ಪತ್ತೆಯಾದದ್ದು ಆಸ್ಪತ್ರೆಯಲ್ಲಿ. ಸಾವು ಬದುಕಿನ ನಡುವಣ ಹೋರಾಟದಲ್ಲಿ. ಬಾಲೆಯನ್ನು ಅಪಹರಿಸಿದ ಪೊಲೀಸರು ಸಾಮೂಹಿಕ ಬಲಾತ್ಕಾರ ಎಸಗಿ ಗುಂಡು ಹೊಡೆದು ಆಕೆಗೆ ಮಾವೋವಾದಿಯ ಹಣೆಪಟ್ಟಿ ಕಟ್ಟಿದ್ದರು.
ಮಧ್ಯಾಹ್ನದ ಬಿಸಿಯೂಟ ನೀಡಲು ದಲಿತ ಮಕ್ಕಳನ್ನು ದೂರ ಬೇರೆ ಪಂಕ್ತಿಯಲ್ಲಿ ಕೂರಿಸುವ ರೂಢಿ ಕೇವಲ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತ ಅಲ್ಲ. ಇತರೆ ಮಕ್ಕಳಿಗೆ ನೀಡುವ ಪ್ರಮಾಣದ ಕಾಲು ಭಾಗದಷ್ಟನ್ನು ಮಾತ್ರವೇ ದಲಿತ ಮಕ್ಕಳಿಗೆ ಬಡಿಸಿ, ಎರಡನೆಯ ಬಾರಿ ಕೇಳಿದರೆ ಅವಮಾನ ಮಾಡುವ ಪ್ರಕರಣಗಳು ಸರ್ವೇ ಸಾಧಾರಣ. ಮೇಲ್ಜಾತಿಯ ಮಕ್ಕಳಿಗೆ ಬಡಿಸಿ ಉಳಿದ ಚೂರು ಪಾರನ್ನು ದಲಿತ ಮಕ್ಕಳಿಗೆ ಹಾಕುವ ಶಿಕ್ಷಕರ ಮನಸ್ಥಿತಿಗಳು ಅಪರೂಪ ಅಲ್ಲ.
ಬಿಸಿಯೂಟದ ಅಡುಗೆ ಮಾಡುವ ಹೆಣ್ಣುಮಕ್ಕಳು ದಲಿತರೆಂಬ ಕಾರಣಕ್ಕೆ ಪೋಷಕರು ಊಟಕ್ಕೇ ಬಹಿಷ್ಕಾರ ಹಾಕಿದ್ದ ಘಟನೆಗಳು ನಮ್ಮದೇ ಕರ್ನಾಟಕದಿಂದ ವರದಿಯಾಗಿ ತಣ್ಣಗಾಗಿವೆ.
ಥಳಗುಟ್ಟುವ ಭಾರತದ ಆಚೆಗೆ ಬದುಕಿರುವ ಕಗ್ಗತ್ತಲ ಉದ್ದಗಲಗಳಲ್ಲಿ ಜಾತಿ ಬಲವುಳ್ಳವರು, ಹಣದ ಸೊಕ್ಕಿನವರು, ಧರ್ಮದುರಂಧರರು, ಪಿತೃಪ್ರಧಾನ್ಯತೆಯ ಪರಿಪಾಲಕರು, ಪೊಲೀಸರು, ಪ್ಯಾರಾಮಿಲಿಟರಿಗಳ ಅಟ್ಟಹಾಸಗಳಲ್ಲಿ ಈ ಜೀವಗಳು ನಲುಗಿಹೋಗುತ್ತಿವೆ. ಇವರು ಮಾತು ಸತ್ತವರು, ಕಾಸಿಲ್ಲದವರು, ತುಳಿಸಿಕೊಂಡವರು, ಒಕ್ಕಲೆಬ್ಬಿಸಿ ದಬ್ಬಲಾದ ಅನಾಥ ಆದಿವಾಸಿಗಳು. ತಮ್ಮ ಮಾನ ಪ್ರಾಣ ಕಣ್ಣೀರುಗಳಿಗೆ ಕಾಸಿನ ಕಿಮ್ಮತ್ತೂ ಇಲ್ಲದ ದೈನೇಸಿಗಳು. ಖೈರ್ಲಾಂಜಿ, ಕಂಬಾಲಪಲ್ಲಿಗಳಲ್ಲಿ ಬೂದಿಯಾದವರು ಇವರು.
ಭಾರತೀಯ ಸೇನೆಯ ಹನ್ನೊಂದು ಮಂದಿ ಸಿಪಾಯಿಗಳು ಚಿತ್ರಹಿಂಸೆಯ ನಂತರ ಸಾಮೂಹಿಕ ಮಾನಭಂಗ ಮಾಡಿ ಜನನೇಂದ್ರಿಯಕ್ಕೆ ಕಾಡತೂಸುಗಳ ಸಿಡಿಸಿ ಕೊಂದ ಪ್ರಕರಣದ ಬಲಿಪಶು ಮಣಿಪುರದ ಥಂಗ್ಲಾಮ್ ಮನೋರಮಾದೇವಿ ಎಂಬ ಯುವತಿ. 2004ರ ಈ ಪ್ರಕರಣದ ಅಪರಾಧಿಗಳನ್ನು ಕಾನೂನಿನ ಕೈಗಳು ಈಗಲೂ ಮುಟ್ಟಿಲ್ಲ. 1991ರಲ್ಲಿ ಕಾಶ್ಮೀರದ ಮೂವತ್ತು ಮಹಿಳೆಯರ ಮೇಲೆ ಸೇನೆ ನಡೆಸಿತೆನ್ನಲಾದ ಅತ್ಯಾಚಾರ ಪ್ರಕರಣದ ಮರುವಿಚಾರಣೆ ಇನ್ನೂ ಮುಗಿದಿಲ್ಲ.
ಶೇ.75ರಷ್ಟು ಅತ್ಯಾಚಾರ ಪ್ರಕರಣಗಳು ನಡೆಯುವುದು ಗ್ರಾಮೀಣ ಭಾರತದಲ್ಲಿ ಎಂಬುದಾಗಿ ದಿಲ್ಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಸಮೀಕ್ಷೆಯಿಂದ ತಿಳಿದುಬಂದಿತ್ತು. ಗ್ರಾಮೀಣ ಪ್ರದೇಶಗಳ ಅತ್ಯಾಚಾರ ಪ್ರಕರಣಗಳನ್ನು ಜಾತಿ – ವರ್ಗ ಹಾಗೂ ಊಳಿಗಮಾನ್ಯ ವ್ಯವಸ್ಥೆಗಳು ಅಲ್ಲಲ್ಲಿಯೇ ಅದುಮಿ ಹೂತು ಹಾಕುತ್ತಿವೆ.
ಪ್ರಾಣ ಮತ್ತು ಮಾನಹರಣದ ಶುದ್ಧೀಕರಣದ ಹಿಂದೂ ಮಹಾಯಜ್ಞಕ್ಕೆ ದಲಿತರು ಈ ದೇಶದಲ್ಲಿ ನಿರಂತರ ಬಲಿಪಶುಗಳು.
ಇದನ್ನೂ ಓದಿ: ರಾಜಕೀಯ ಸಾಧನವಾಗಿ ಅತ್ಯಾಚಾರದ ಕಲ್ಪನೆಯನ್ನು ಸಾವರ್ಕರ್ ಸಮರ್ಥಿಸಿಕೊಂಡಿದ್ದು ಹೀಗೆ..


