ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸಿದ್ದ ಶ್ರೀನಿವಾಸ್ ಪ್ರಸಾದ್ ಸದ್ಯ ಯಡಿಯೂರಪ್ಪರ ವಿರುದ್ಧ ಸಿಡಿದು ಬಿದ್ದಿದ್ದು, “ಮುಖ್ಯಮಂತ್ರಿ ಆಗಿ ಆಯಿತಲ್ಲ, ಈಗ ಅವರ ಕೆಲಸ ಮುಗಿದಿದೆ, ನಮ್ಮ ಅಗತ್ಯ ಅವರಿಗಿಲ್ಲ” ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ತುಂಬಿಸುತ್ತಿದ್ದು, ಈ ನಡುವೆ ಪಕ್ಷದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ವಿರುದ್ದ ಮಾತನಾಡಿರುವ ಶ್ರೀನಿವಾಸ್ ಪ್ರಸಾದ್, “ಯಡಿಯೂರಪ್ಪ ಸಿಎಂ ಆಗಿ ಆಯಿತಲ್ಲ. ಈಗ ಅವರ ಕೆಲಸ ಮುಗಿದಿದೆ, ನಮ್ಮ ಅಗತ್ಯ ಅವರಿಗಿಲ್ಲ” ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಮತ್ತುಬಿಜೆಪಿ ಒಳಒಪ್ಪಂದದಿಂದ ಉಪಚುನಾವಣೆ ಗೆದ್ದಿದ್ದಾರೆ
ಮುಖ್ಯಮಂತ್ರಿಯಾದ ನಂತರ ತನ್ನನ್ನು ಯಡಿಯೂರಪ್ಪ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಶ್ರೀನಿವಾಸ್ ಪ್ರಸಾದ್ ಅವರಿಗೆ ಇತ್ತೆನ್ನಲಾಗಿದ್ದು, ನಿಗಮ ಮಂಡಳಿಗಳ ನೇಮಕದ ಹೆಸರುಗಳು ಒಂದೊಂದಾಗೇ ಪ್ರಕಟವಾಗುತ್ತಲೇ, ಅದರಲ್ಲಿ ತಾವು ಸೂಚಿಸಿದವರ ಹೆಸರುಗಳು ಇಲ್ಲವೆಂದು ತಿಳಿದು ಉರಿದು ಬಿದ್ದಿದ್ದಾರೆ.
ಇಂದು ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಲು ಸುತ್ತೂರಿಗೆ ಭೇಟಿ ನೀಡಿದ್ದ ಯಡಿಯೂರಪ್ಪರ ವಿರುದ್ದ ಸುತ್ತೂರು ಸ್ವಾಮೀಜಿ ಎದುರೇ ಶ್ರೀನಿವಾಸ್ ಪ್ರಸಾದ್ ಕಿಡಿ ಕಾರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನವೆಂಬರ್ 26 ರ ಅಖಿಲ ಭಾರತ ಮುಷ್ಕರಕ್ಕೆ ವಿದ್ಯಾರ್ಥಿ ಸಂಘಟನೆಗಳ ಬೆಂಬಲ