2019 ರ ಬಾಲಕೋಟ್ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ ಬಾರ್ಕ್ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತಾ ಮತ್ತು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ನಡೆಸಿದ್ದಾರೆ ಎನ್ನಲಾಗಿರುವ ವಿವಾದಾತ್ಮಕ ವಾಟ್ಸಪ್ ಚಾಟ್ಗಳ ವಿರುದ್ದ ಮಹರಾಷ್ಟ್ರ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ. ಅಧಿಕೃತ ರಹಸ್ಯ ಕಾಯ್ದೆಯಡಿ ಅರ್ನಾಬ್ ವಿರುದ್ಧ ಕ್ರಮ ಕೈಗೊಳ್ಳಬಹುದೇ ಎಂಬ ಬಗ್ಗೆ ರಾಜ್ಯ ಸರ್ಕಾರ ಕಾನೂನು ಅಭಿಪ್ರಾಯ ಕೋರುತ್ತಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಶನಿವಾರ ಹೇಳಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇಶ್ಮುಖ್, ಅರ್ನಾಬ್ಗೆ ರಕ್ಷಣಾ ಇಲಾಖೆಯ ಸೂಕ್ಷ್ಮ ಮಾಹಿತಿಗೆ ಹೇಗೆ ಸಿಕ್ಕಿತು ಎಂದು ಕೇಂದ್ರವು ಉತ್ತರಿಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅರ್ನಾಬ್ ವಾಟ್ಸಪ್ ಚಾಟ್: ಬಿಜೆಪಿಯ ರಾಷ್ಟ್ರೀಯತೆ ಪರೀಕ್ಷಿಸಬೇಕೆಂದ ಶಿವಸೇನೆ
“ಅರ್ನಾಬ್ ಬಾಲಕೋಟ್ ವೈಮಾನಿಕ ದಾಳಿಯ ಬಗ್ಗೆ ಮೂರು ದಿನಗಳ ಮುಂಚಿತವಾಗಿ ಮಾಹಿತಿ ಹೊಂದಿದ್ದರು ಎಂಬುವುದು ಈ ವಾಟ್ಸಾಪ್ ಚಾಟ್ನ ಆಘಾತಕಾರಿ ಸಂಗತಿಯಾಗಿದೆ. ದಾಳಿಯ ಬಗ್ಗೆ ಪ್ರಧಾನಿ, ರಕ್ಷಣಾ ಮಂತ್ರಿ, ಸೇನಾ ಮುಖ್ಯಸ್ಥ ಮತ್ತು ಕೆಲವು ಆಯ್ದ ಜನರಿಗೆ ಮಾತ್ರ ತಿಳಿದಿತ್ತು. ಆದರೆ ಅರ್ನಾಬ್ಗೆ ಇಂತಹ ಸೂಕ್ಷ್ಮ ಮಾಹಿತಿ ಹೇಗೆ ಸಿಕ್ಕಿತು ಎಂದು ನಾವು ಕೇಂದ್ರ ಸರ್ಕಾರವನ್ನು ಕೇಳಲು ಬಯಸುತ್ತೇವೆ” ಎಂದು ದೇಶ್ಮುಖ್ ಅವರು ಹೇಳಿದ್ದಾರೆ.
“1923 ರ ಅಧಿಕೃತ ರಹಸ್ಯ ಕಾಯ್ದೆಯಡಿ ರಾಜ್ಯ ಗೃಹ ಇಲಾಖೆಯು ಈ ಸಂಬಂಧ ಕ್ರಮ ಕೈಗೊಳ್ಳಬಹುದೇ ಎಂಬ ಬಗ್ಗೆ ಮಹಾರಾಷ್ಟ್ರ ಸರ್ಕಾರ ಕಾನೂನು ಅಭಿಪ್ರಾಯ ತೆಗೆದುಕೊಳ್ಳುತ್ತಿದೆ” ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 26, 2019 ರಂದು ಭಾರತೀಯ ವಾಯುಪಡೆ (ಐಎಎಫ್)ಯು ಪಾಕಿಸ್ತಾನದ ಬಾಲಕೋಟ್ನಲ್ಲಿ ಅತೀ ದೊಡ್ಡ ಭಯೋತ್ಪಾದಕ ಕೇಂದ್ರವನ್ನು ಹೊಡೆದುರುಳಿಸಿದ್ದಾಗಿ ಹೇಳಿತ್ತು. ಆದರೆ ಈ ಸೈನಿಕ ಕಾರ್ಯಚರಣೆಯ ಬಗ್ಗೆ ಅರ್ನಾಬ್ ಮತ್ತು ಪಾರ್ಥೋ ದಾಸ್ಗುಪ್ತಾ ಮೂರು ದಿನಗಳ ಮುಂಚೆಯೆ ಮಾತನಾಡಿಕೊಂಡಿದ್ದರು ಎಂಬುವುದು ವಾಟ್ಸಪ್ ಚಾಟ್ಗಳು ಸೋರಿಕೆಯಾದ ಹಿನ್ನಲೆಯಲ್ಲಿ ಬಹಿರಂಗಗೊಂಡಿತ್ತು.
ಇದನ್ನೂ ಓದಿ: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ