ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಮಲಯಾಳಂ ಭಾಷೆಯ ಪ್ರಮುಖ ಸುದ್ದಿ ಚಾನೆಲ್ ಮೀಡಿಯಾ ಒನ್ ಟಿವಿ ಪ್ರಸಾರವನ್ನು ನಿರ್ಬಂಧಿಸಿದೆ. ಸೋಮವಾರ ಮಧ್ಯಾಹ್ನದಿಂದ ಚಾನಲ್ ಪ್ರಸಾರವನ್ನು ನಿಲ್ಲಿಸಲಾಗಿದೆ.
ಈ ಬಗ್ಗೆ ಮೀಡಿಯಾ ಒನ್ ಟಿವಿ ಸಂಪಾದಕ ಪ್ರಮೋದ್ ರಾಮನ್ ಪತ್ರಿಕಾ ಹೇಳಿಕೆಯಲ್ಲಿ ನಿರ್ಬಂಧವನ್ನು ದೃಢಪಡಿಸಿದ್ದು, “ಸುರಕ್ಷತಾ ಕಾರಣಗಳಿಂದಾಗಿ ನಮ್ಮ ಟಿವಿ ಚಾನೆಲ್ ಮೇಲೆ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ. ಆದರೆ ಚಾನೆಲ್ ಈ ಬಗ್ಗೆ ಯಾವ ವಿವರಗಳನ್ನು ಇನ್ನೂ ಪಡೆದಿಲ್ಲ. ಈ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವು ಮೀಡಿಯಾ ಒನ್ ಟಿವಿಗೆ ವಿವರಗಳನ್ನು ನೀಡಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧರ್ಮ ಸಂಸದ್ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ: ದೇಶದ ನಾಯಕರ ಮೌನ ಪ್ರಶ್ನಿಸಿದ ಅಂತರರಾಷ್ಟ್ರೀಯ ಮಾಧ್ಯಮಗಳು
“ನಿಷೇಧದ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದೇವೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಮ್ಮ ಚಾನೆಲ್ ಮತ್ತೆ ವೀಕ್ಷಕರಿಗೆ ದೊರೆಯಲಿದೆ. ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
മീഡിയവണിന്റെ സംപ്രേഷണം കേന്ദ്ര സർക്കാർ വീണ്ടും തടഞ്ഞു pic.twitter.com/92XbeRBa1a
— MediaOne TV (@MediaOneTVLive) January 31, 2022
ಟಿವಿ ಚಾನೆಲ್ನ ಪರವಾನಗಿ ಅವಧಿ ಇನ್ನು ಮುಗಿದಿಲ್ಲ. ಆದರೆ ಚಾನೆಲ್ ಮೇಲೆ ನಿರ್ಬಂಧ ಹೇರಿದ ನಂತರ ಚಾನೆಲ್ನ ಪರವಾನಗಿ ನವೀಕರಣ ಪ್ರಕ್ರಿಯೆಯು ಆರಂಭವಾಗಿದೆ ಎಂದು ಚಾನೆಲ್ ಮೂಲಗಳು ತಿಳಿಸಿವೆ.
ಪ್ರಸ್ತುತ ಜಾರಿಯಲ್ಲಿರುವ ನೀತಿಯ ಪ್ರಕಾರ 10 ವರ್ಷಗಳ ಅವಧಿಗೆ ಸುದ್ದಿ ವಿಭಾಗದಲ್ಲಿ ಖಾಸಗಿ ಉಪಗ್ರಹ ಟಿವಿ ಚಾನೆಲ್ಗೆ ನೀಡಲಾಗುವ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಮೀಡಿಯಾ ಒನ್ ಸಂಸ್ಥೆಗೆ “ಭದ್ರತಾ ಅನುಮತಿಯನ್ನು ನಿರಾಕರಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್ಯಾರು? ಪತ್ರಿಕೆಗಳು ಹೇಳಿದ್ದೇನು?
ಈಗಿನ ನಿಯಮದ ಪ್ರಕಾರ ಪ್ರತೀ ಚಾನೆಲ್ ಹತ್ತು ವರ್ಷಗಳಿಗೊಮ್ಮೆ ತಮಗೆ ನೀಡಿದ ಭದ್ರತಾ ಅನುಮತಿಯನ್ನು ನವೀಕರಿಸಿಕೊಳ್ಳುವ ಅಗತ್ಯವಿರುತ್ತದೆ. ಆದರೆ ಮೀಡಿಯಾ ಒನ್ ಸಂಸ್ಥೆ 2011ರಲ್ಲಿ ಭದ್ರತಾ ಅನುಮತಿಯ ಜೊತೆಗೆ ಪರವಾನಗಿ ಪಡೆದುಕೊಂಡಿತ್ತು. ನವೀಕರಿಸಿದ ಭದ್ರತಾ ಅನುಮತಿಯನ್ನು ಚಾನೆಲ್ ಪಡೆದಿರದ ಕಾರಣ ಅದನ್ನು ನಿರ್ಬಂಧಿಸಲು ಆದೇಶವನ್ನು ಹೊರಡಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿರುವ ಕೇರಳದ ವಿಪಕ್ಷ ನಾಯಕ ವಿ.ಡಿ. ಸತೀಶನ್, “ಮೀಡಿಯಾ ಒನ್ ಚಾನೆಲ್ ಪ್ರಸಾರವನ್ನು ಕೇಂದ್ರವು ಮತ್ತೊಮ್ಮೆ ಸ್ಥಗಿತಗೊಳಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾರಣಗಳನ್ನು ಹೇಳದೇ ಚಾನೆಲ್ ಅನ್ನು ನಿಷೇಧಿಸಿದೆ” ಎಂದು ಹೇಳಿದ್ದಾರೆ.
“ಚಾನೆಲ್ ಪ್ರಸಾರವನ್ನು ನಿಲ್ಲಿಸುವ ಮೂಲಕ ಕೇಂದ್ರವು ಅನಪೇಕ್ಷಿತ ಸುದ್ದಿಗಳಿಗೆ ಅಸಹಿಷ್ಣುತೆ ತೋರಿಸುವ ಸಂಘ ಪರಿವಾರದ ನೀತಿಯನ್ನು ಜಾರಿಗೆ ತರುತ್ತಿದೆ. ಇದು ಮಾಧ್ಯಮ ಸ್ವಾತಂತ್ಯ್ರಕ್ಕೆ ಅಡ್ಡಿಪಡಿಸುವಂತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು: ‘ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ’ಎಂದು ಎಚ್ಡಿಕೆ ಆಕ್ರೋಶ
ಮಾದ್ಯಮದ ಕತ್ತು ಹಿಸುಕುವ ಒಕ್ಕೂಟ ಸರ್ಕಾರದ ಈ ಕ್ರಮ ಕಂಡನಾರ್ಹ.