ಪ್ರಧಾನ ಮಂತ್ರಿ ಕಚೇರಿಯಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದೇನೆಂದು ಬಿಂಬಿಸಿಕೊಂಡಿದ್ದ ವ್ಯಕ್ತಿಯನ್ನು ಪುಣೆ ಪೊಲೀಸ್ ಅಪರಾಧ ವಿಭಾಗವು ಬಂಧಿಸಿದೆ.
ಈ ವಾರದ ಆರಂಭದಲ್ಲಿ ಔಂಧ್ನಲ್ಲಿ ಚಾರಿಟಬಲ್ ಟ್ರಸ್ಟ್ವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಯ ಸೋಗಿನಲ್ಲಿ ಭಾಗವಹಿಸಿದ್ದ 54 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ವ್ಯಕ್ತಿಯನ್ನು ವಾಸುದೇವ್ ನಿವೃತ್ತಿ ತಾಯ್ಡೆ (54) ಎಂದು ಗುರುತಿಸಲಾಗಿದೆ. ತನ್ನನ್ನು ಡಾ.ವಿನಯ್ ದೇವ್ ಎಂದು ಪರಿಚಯಿಸಿಕೊಂಡು, “ಪ್ರಧಾನಿ ಕಚೇರಿ ಉಪ ಕಾರ್ಯದರ್ಶಿಯಾಗಿ ನನ್ನನ್ನು ಪೋಸ್ಟ್ ಮಾಡಿದ್ದಾರೆ, ಗುಪ್ತಚರ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ” ಎಂದು ಹೇಳಿದ್ದನು.
ಪುಣೆ ಮೂಲದ ಸಂಘಟನೆ ಬಾರ್ಡರ್ಲೆಸ್ ವರ್ಲ್ಡ್ ಫೌಂಡೇಶನ್ ಸೋಮವಾರ ಔಂಧ್ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಡಾ.ವಿನಯ್ ದೇವ್ ಎಂಬಂತೆ ಪೋಸ್ ಕೊಡುತ್ತಿದ್ದ ವ್ಯಕ್ತಿ ಕಾರ್ಯಕ್ರಮಕ್ಕೆ ಹಾಜರಾಗಿ ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದನು.
ಆತನ ಚಲನವಲನ ಮತ್ತು ಆತ ಹೇಳುತ್ತಿರುವ ಮಾತುಗಳನ್ನು ಅನುಮಾನಿಸಿದ ಸಂಘಟನೆಯ ಟ್ರಸ್ಟಿಗಳು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಪರಾಧ ವಿಭಾಗದ ಘಟಕ 1ರ ತಂಡವು ತನಿಖೆಯನ್ನು ಪ್ರಾರಂಭಿಸಿದ ನಂತರ, ಆ ವ್ಯಕ್ತಿಯನ್ನು ಪತ್ತೆಹಚ್ಚಲಾಯಿತು. ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡರು. ತಾಳೇಗಾಂವ್ ದಭಾಡೆ ನಿವಾಸಿ ತಾಯ್ಡೆ ಎಂಬಾತನೇ ಈ ಕೃತ್ಯ ಎಸಗಿದವನು ಎಂದು ಪೊಲೀಸರು ಕಂಡುಕೊಂಡರು.
ಇದನ್ನೂ ಓದಿರಿ: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎನ್ನುವುದು ಸುಳ್ಳು, ತನಿಖೆ ಪ್ರಗತಿಯಲ್ಲಿದೆ ಎಂದ ದೆಹಲಿ ಪೊಲೀಸರು
ಉಪ ಪೊಲೀಸ್ ಕಮಿಷನರ್ (ಅಪರಾಧ) ಅಮೋಲ್ ಝೆಂಡೆ ಪ್ರತಿಕ್ರಿಯಿಸಿ, “ಶಂಕಿತ ವ್ಯಕ್ತಿಯು ಐಎಎಸ್ ಅಧಿಕಾರಿಯಂತೆ ನಟಿಸುತ್ತಿದ್ದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಆತ ಐಎಎಸ್ ಅಧಿಕಾರಿಯ ಸೋಗು ಹಾಕುವ ಮೂಲಕ ಹೆಚ್ಚಿನ ಜನರನ್ನು ಅಥವಾ ಸಂಸ್ಥೆಗಳನ್ನು ವಂಚಿಸಿದ್ದಾನೆಯೇ ಎಂಬುದರ ಕುರಿತು ನಾವು ತನಿಖೆಯನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ವಂಚನೆ ಮತ್ತು ಸೋಗು ಹಾಕುವಿಕೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ತಾವ್ಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈತನ ಮೇಲೆ ಈ ಹಿಂದೆ ಯಾವುದಾದರೂ ಪ್ರಕರಣಗಳಿವೆ ಎಂಬುದರ ಕುರಿತೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.