Homeಕರ್ನಾಟಕನಮ್ಮ ಸಚಿವರಿವರು; ಬೆಂಗಳೂರು ರಾಜಕಾರಣದಲ್ಲಿ ಹಿಡಿತ ಸಾಧಿಸಿರುವ ಸೋಲಿಲ್ಲದ ಸರದಾರ ರಾಮಲಿಂಗಾರೆಡ್ಡಿ

ನಮ್ಮ ಸಚಿವರಿವರು; ಬೆಂಗಳೂರು ರಾಜಕಾರಣದಲ್ಲಿ ಹಿಡಿತ ಸಾಧಿಸಿರುವ ಸೋಲಿಲ್ಲದ ಸರದಾರ ರಾಮಲಿಂಗಾರೆಡ್ಡಿ

- Advertisement -
- Advertisement -

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಎಂಟು ಶಾಸಕರಲ್ಲಿ ಬಿಟಿಎಂ ಲೇಔಟ್ ಕ್ಷೇತ್ರದಿಂದ ಗೆದ್ದಿರುವ ರಾಮಲಿಂಗಾ ರೆಡ್ಡಿ ಸಹ ಒಬ್ಬರು.

ಸೌಮ್ಯ ಸ್ವಭಾವದ ವ್ಯಕ್ತಿತ್ವದ ರಾಮಲಿಂಗಾ ರೆಡ್ಡಿಯವರು, ಕಳೆದ 20 ವರ್ಷಗಳಿಂದ ಬೆಂಗಳೂರು ರಾಜಕಾರಣದಲ್ಲಿ ಹಿಡಿತ ಸಾಧಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರಷ್ಟೇ ಶಕ್ತಿಯುತ ರಾಜಕಾರಣಿಯಾಗಿರುವ ರಾಮಲಿಂಗಾ ರೆಡ್ಡಿ ಅವರು, ತಮ್ಮ ರಾಜಕಾರಣದ ಪ್ರಾಬಲ್ಯವನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಿದ್ದಾರೆ. ಬೆಂಗಳೂರಿನ ಯಾವ ಕ್ಷೇತ್ರದಲ್ಲಾದರೂ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಹೊಂದಿರುವಂತಹವರು.

ರಾಮಲಿಂಗಾ ರೆಡ್ಡಿ ಮೇಲಿರುವ ಗಂಭೀರವಾದ ಆರೋಪವೆಂದರೆ ಅದು ಹೊಂದಾಣಿಕೆ ರಾಜಕಾರಣಿ. ಈ ಹೊಂದಾಣಿಕೆ ರಾಜಕಾರಣವು ಬಿಜೆಪಿಯ ದಿ.ಅನಂತಕುಮಾರ್ ಕಾಲದಿಂದ ಈಗಿನ ಆರ್. ಆಶೋಕ್ ಅವರ ಕಾಲದವರೆಗೂ ಇದೆ ಎನ್ನುವ ಆರೋಪಗಳು ಕೇಳಿಬಂದಿವೆ. ಅನಂತ್‌ಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಅವರ ಹೊಂದಾಣಿಕೆ ರಾಜಕಾರಣದಲ್ಲಿ ಅದೆಷ್ಟೋ ನಾಯಕರು ಸೋಲುಕಂಡಿದ್ದಾರೆ ಎನ್ನಲಾಗುತ್ತದೆ. ಈಗಲೂ ಆರ್. ಅಶೋಕ್ ಜೊತೆಗೆ ಅದೇ ಹೊಂದಾಣಿಕೆ ಮುಂದುವರಿಸಿದ್ದಾರೆ; ಇದು ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ಒಳ್ಳೆಯದು ಹೌದು ಕೆಟ್ಟದ್ದು ಕೂಡಾ ಹೌದು ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿವೆ.

ರಾಮಲಿಂಗಾ ರೆಡ್ಡಿ ಅವರು ಈಗ ಎರಡು ಇಲಾಖೆಗಳನ್ನು ನಿರ್ವಹಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವರಾಗಿ ಖಾತೆ ಹಂಚಿಕೆಯಾಗಿದ್ದರೂ ತಮ್ಮ ಹಿರಿತನಕ್ಕೆ ಇನ್ನೂ ದೊಡ್ಡ ಖಾತೆ ಸಿಗಬೇಕಿತ್ತು ಎಂಬ ಅಸಮಧಾನ ಹೊಂದಿದ್ದಾರೆಂಬ ವದಂತೆ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು.

ರಾಜಕಾರಣದ ಹಿನ್ನೆಲೆ

ರಾಮಲಿಂಗಾ ರೆಡ್ಡಿ ಅವರು ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸ್ ಅವರ ಬಡತನ ನಿರ್ಮೂಲನ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. 1973ರಲ್ಲಿ ಎನ್‌ಎಸ್‌ಯುಐಗೆ ಸೇರಿ, ಕೇರಳದ ತಿರುವನಂತಪುರದಲ್ಲಿ ಎನ್‌ಎಸ್‌ಯುಐ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದರು. ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದ ಒಲವು ಬೆಳೆಸಿಕೊಂಡಿದ್ದ ಅವರು 1973-74ರವರೆಗೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾದರು. 1977-78ರ ಅವಧಿಯಲ್ಲಿ ನಗರದ ಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 1980-83ರ ಸಮಯದಲ್ಲಿ ಬೆಂಗಳೂರು ವಿವಿಯಲ್ಲಿ ಸೆನೆಟ್ ಮತ್ತು ಹಣಕಾಸು ಸಮಿತಿ ಸದಸ್ಯರಾದರು. 1983ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆದರು. ಇದೇ ವೇಳೆ 1985-90ರವರೆಗೂ ಜಯನಗರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಹೀಗೆ ರಾಮಲಿಂಗಾ ರೆಡ್ಡಿ ಅವರು ಸಾರ್ವಜನಿಕ ಜೀವನದಲ್ಲಿ ಹಂತಹಂತವಾಗಿ ಬೆಳೆದವರು.

ರಾಜ್ಯ ಚುನಾವಣಾ ರಾಜಕಾರಣ ಹಾದಿ

ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ರಾಮಲಿಂಗಾ ರೆಡ್ಡಿಯವರು ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದಾರೆ. ಅವರು 1989ರಿಂದ ಈವರೆಗೂ ಎದುರಿಸಿದ 8 ವಿಧಾನಸಭಾ ಚುನಾವಣೆಗಳಲ್ಲೂ ಗೆಲುವು ಕಂಡಿದ್ದಾರೆ.

1989ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ರಾಮಲಿಂಗಾ ರೆಡ್ಡಿ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಬೆಂಗಳೂರಿನ ಹಳೆ ತಲೆಮಾರಿಗೆ ಈ ಚುನಾವಣೆಯು ಬಹಳ ನೆನಪಿನಲ್ಲಿ ಉಳಿದಿರುತ್ತದೆ. ಏಕೆಂದರೆ, ಈ ಸಮಯದಲ್ಲಿ ಭೂಗತ ಪಾತಕಿಯಾಗಿದ್ದ ಡಾನ್ ಜಯರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹುಲಿಯನ್ನು ಬೋನ್‌ನಲ್ಲಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡಿದ್ದರು. ಆದರೆ ಚುನಾವಣೆಗೂ ಮುನ್ನವೇ ಅವರು ಲಾಲ್‌ಬಾಗ್ ಬಳಿ ಕೊಲೆಯಾಗಿ ಹೋದರು. ಆನಂತರ ಆ ಕ್ಷೇತ್ರದಲ್ಲಿ ಚುನಾವಣೆಯನ್ನೂ ಮುಂದೂಡಲಾಯಿತು. ಆ ಬಳಿಕ ನಡೆದ ಚುನಾವಣೆಯಲ್ಲಿ ರಾಮಲಿಂಗಾ ರೆಡ್ಡಿ ಅವರು ಗೆಲುವು ಕಂಡರು.

1989ರಿಂದ 2008ರವರೆಗೂ ಅಂದರೆ 20ವರ್ಷಗಳ ಕಾಲ ಜಯನಗರದಲ್ಲಿ ಪಾರುಪತ್ಯ ಸ್ಥಾಪಿಸಿದ್ದರು. ಹೌದು 1989ರಲ್ಲಿ ಗೆಲುವಿನ ಓಟ ಆರಂಭಿಸಿದ ಅವರು, 1994, 1999, 2004ರವರೆಗೂ ಜಯನಗರದಲ್ಲಿ ಸ್ಪರ್ಧಿಸಿ ಗೆಲುವು ಕಂಡರು. ಆ ಬಳಿಕ 2008ರಲ್ಲಿ ಅವರು ಬಿಟಿಎಂ ಲೇಔಟ್ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೇಲೆ ಅಲ್ಲಿಗೆ ವಲಸೆ ಹೋದರು. ಈವರೆಗೆ ಇಲ್ಲಿ ಒಟ್ಟು ನಾಲ್ಕು (2008, 2013, 2018 ಮತ್ತು 2023) ಚುನಾವಣೆಗಳು ನಡೆದಿವೆ. ಇಲ್ಲಿಯೂ ರಾಮಲಿಂಗಾ ರೆಡ್ಡಿ ಅವರು ನಿರಂತರವಾಗಿ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮಲಿಂಗಾ ರೆಡ್ಡಿಯವರ ಪುತ್ರಿ ಸೌಮ್ಯಾ ರೆಡ್ಡಿ ಜಯಗಳಿಸಿದ್ದರು. 2023ರ ಚುನವಾಣೆಯಲ್ಲಿ ಮರುಎಣಿಕೆಯ ಪ್ರಹಸನ ಎದುರಾಗಿ ಕೇವಲ 16 ವೋಟುಗಳಿಂದ ಸೌಮ್ಯಾ ಸೋಲುಂಡಿದ್ದಾರೆ.

ಅಧಿಕಾರದ ಮೈಲಿಗಲ್ಲುಗಳು

ರಾಮಲಿಂಗಾ ರೆಡ್ಡಿ ಅವರು ಮೊದಲು 1992ರಲ್ಲಿ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಹಣಕಾಸು, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಮತ್ತು ಎಪಿಎಂಸಿ ಸಚಿವರಾಗಿದ್ದರು. 1993-94ರವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿದ್ದರು.

2002ರಲ್ಲಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿದ್ದರು. 2004ರಲ್ಲಿ ಎನ್. ಧರ್ಮಸಿಂಗ್ ಅವರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು.

2013ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ, ರಾಮಲಿಂಗಾ ರೆಡ್ಡಿ ಅವರು 18 ಮೇ 2013ರಿಂದ 2 ಸೆಪ್ಟೆಂಬರ್ 2017ವರೆಗೆ ಕರ್ನಾಟಕದ ಸಾರಿಗೆ ಸಚಿವರಾಗಿದ್ದರು ಮತ್ತು 2 ಸೆಪ್ಟೆಂಬರ್ 2017ರಿಂದ 17 ಮೇ 2018ರವರೆಗೆ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು.

2021ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಕಸ ವಿಲೇವಾರಿ ಉದ್ಯಮದಲ್ಲಿ ಹಿಡಿತ ಸಾಧಿಸಿರುವ ರಾಮಲಿಂಗಾರೆಡ್ಡಿಯವರು, ಪೌರಕಾರ್ಮಿಕರು ಮತ್ತು ಕಸ ಸಂಗ್ರಹಿಸುವ, ವಾಹನ ಚಲಾಯಿಸುವವರು ಕಾಯಂ ಆಗಲು ತಡೆಯಾಗಿದ್ದಾರೆ ಎಂಬ ಆರೋಪ ಸಹ ಅವರ ಮೇಲಿದೆ.

ಇನ್ನು ಬೆಂಗಳೂರಿನ ನಾಯಕರಾದ ಅವರಿಗೆ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ಉತ್ತಮ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಸಾರಿಗೆ ಮತ್ತು ಮುಜರಾಯಿ ಸಚಿವರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...