ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ ಮತ್ತು ಐಐಟಿ ದೆಹಲಿಯ ಪ್ರೊಫೆಸರ್ ಡಾ. ಸಂದೀಪ್ ಪಾಠಕ್ ಅವರು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಾರ್ಚ್ 31 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಅವರನ್ನೂ ಎಎಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
117 ವಿಧಾನಸಭಾ ಸ್ಥಾನಗಳ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 92 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತ್ತು. ಇದರ ನಂತರ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಭಗವಂತ್ ಮಾನ್ ಅವರಿಗೆ ಅಭಿನಂದನಾ ಸಂದೇಶವನ್ನು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ವೈಫಲ್ಯಗಳ ಮೇಲಿನ ಕೋಪ; ಪಂಜಾಬ್ಅನ್ನು ಸುಲಭವಾಗಿ ಒಲಿಸಿಕೊಂಡ ಆಪ್
“ಆಮ್ ಆದ್ಮಿ ಪಕ್ಷಕ್ಕೆ ಶುಭಾಶಯಗಳು ಮತ್ತು ನಮ್ಮ ಹೊಸ ಮುಖ್ಯಮಂತ್ರಿಯಾಗುತ್ತಿರುವ ನನ್ನ ಸ್ನೇಹಿತ ಭಗವಂತ ಮಾನ್ ಅವರಿಗೆ ಅಭಿನಂದನೆಗಳು. ಭಗತ್ ಸಿಂಗ್ ಅವರ ಗ್ರಾಮ ಖಟ್ಕರಕಲನ್ನಲ್ಲಿ ಅವರು ಹೊಸ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಕೇಳಿ ತುಂಬಾ ಸಂತೋಷವಾಗಿದೆ. ಎಂತಹ ಚಿತ್ರಣ, ಇದು ಮಾತಾ ಜಿಗೆ ಹೆಮ್ಮೆಯ ಕ್ಷಣ” ಎಂದು ಹರ್ಭಜನ್ ಸಿಂಗ್ ಬರೆದಿದ್ದರು.
13 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. 13 ಸ್ಥಾನಗಳಲ್ಲಿ, ಪಂಜಾಬ್ ಶಾಸಕರು ಐದು ಸಂಸದರಿಗೆ ಮತ ಹಾಕಲಿದ್ದಾರೆ. ಮೂವರು ಕೇರಳದಿಂದ ಆಯ್ಕೆಯಾಗಲಿದ್ದು, ಇಬ್ಬರು ಅಸ್ಸಾಂನಿಂದ ಮತ್ತು ತಲಾ ಒಬ್ಬೊಬ್ಬರು ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾದಿಂದ ಆಯ್ಕೆಯಾಗಲಿದ್ದಾರೆ.
ಪಂಜಾಬ್ನ ಗೆಲುವು ರಾಜ್ಯಸಭೆಯಲ್ಲಿ ಆಪ್ಗೆ ಹೆಚ್ಚಿನ ಬಲ ತುಂಬಲಿದೆ. ಪಕ್ಷವು ಪ್ರಸ್ತುತ ಮೇಲ್ಮನೆಯಲ್ಲಿ ಮೂವರು ಸಂಸದರನ್ನು ಹೊಂದಿದ್ದು, ಅವರೆಲ್ಲರೂ ದೆಹಲಿಯವರಾಗಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ನನ್ನ ವೈಯಕ್ತಿಕ ನಂಬರ್ ಆಗಿರಲಿದೆ: ಪಂಜಾಬ್ ಸಿಎಂ