ಪಕ್ಷದ ಕಾರ್ಯಕರ್ತರ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ AAP ರಾಷ್ಟ್ರೀಯ ಪಕ್ಷವಾಗಲು ಇನ್ನೊಂದು ಹೆಜ್ಜೆ ಬಾಕಿ ಇದೆ ಎಂದಿದ್ದಾರೆ.
ಗೋವಾದಲ್ಲಿ ಆಪ್ ಪಕ್ಷವನ್ನು ರಾಜ್ಯ ಪಕ್ಷ ಎಂದು ಚುನಾವಣಾ ಆಯೋಗ ಗುರುತಿಸಿರುವುದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, “ಪಂಜಾಬ್ ನಂತರ ಗೋವಾದಲ್ಲಿಯೂ ಆಪ್ ಅನ್ನು ರಾಜ್ಯ ಪಕ್ಷ ಎಂದು ಗುರುತಿಸಲಾಗಿದೆ. ಇನ್ನೊಂದು ರಾಜ್ಯದಲ್ಲಿ ನಾವು ಗುರುತಿಸಲ್ಪಟ್ಟರೆ ಅಧಿಕೃತವಾಗಿ ರಾಷ್ಟ್ರೀಯ ಪಕ್ಷ ಎಂದು ಘೋಷಿಸಲಾಗುತ್ತದೆ. ಇದಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಅಭಿನಂದನೆಗಳು. ಆಪ್ ಸಿದ್ದಾಂತದಲ್ಲಿ ನಂಬಿಕೆಯಿಂದ ಜನರಿಗೆ ಧನ್ಯವಾದಗಳು” ಎಂದಿದ್ದಾರೆ.
After Del n Punjab, AAP is now a state recognised party in Goa too. If we get recognised in one more state, we will officially be declared as a “national party”
I congratulate each and every volunteer for their hard work. I thank the people for posing faith in AAP n its ideology pic.twitter.com/7UmsIixF0v
— Arvind Kejriwal (@ArvindKejriwal) August 9, 2022
ರಾಷ್ಟ್ರೀಯ ಪಕ್ಷ ಎಂದು ಗುರುತಿಸಿಕೊಳ್ಳಲು ಇರುವ ಮಾನದಂಡಗಳು
ನಮ್ಮ ದೇಶದ ಯಾವುದೇ ಪಕ್ಷವು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಲು ಈ ಕೆಳಗಿನ ಮೂರು ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.
- ಕನಿಷ್ಟ ನಾಲ್ಕು ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ತಲಾ 6% ಗಿಂತ ಹೆಚ್ಚಿನ ಮತಪ್ರಮಾಣ ಪಡೆಯದಿರಬೇಕು. ಜೊತೆಗೆ ಇತ್ತೀಚಿನ ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿರಬೇಕು.
- ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕನಿಷ್ಟ 2% ರಷ್ಟು ಸೀಟುಗಳನ್ನು ಗೆದ್ದಿರಬೇಕು. ಕನಿಷ್ಟ ಮೂರು ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳಿರಬೇಕು
- ರಾಜ್ಯ ಪಕ್ಷ ಎಂದು ಕನಿಷ್ಟ ನಾಲ್ಕು ರಾಜ್ಯಗಳಲ್ಲಿ ಮಾನ್ಯತೆ ಪಡೆದಿರಬೇಕು
ಈ ಮಾನದಂಡಗಳ ಅನ್ವಯ ಆಪ್ ಸದ್ಯಕ್ಕೆ ದೆಹಲಿ, ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ರಾಜ್ಯಪಕ್ಷದ ಮಾನ್ಯತೆ ಪಡೆದಿದೆ. ಇನ್ನೊಂದು ರಾಜ್ಯದಲ್ಲಿ ಪಡೆದಲ್ಲಿ ಅದು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುತ್ತದೆ.
2012ರ ಭ್ರಷ್ಟಾಚಾರ ವಿರೋಧಿ ಚಳವಳಿ (ಜನ ಲೋಕಪಾಲ್ ಮಸೂದೆ ಜಾರಿಗಾಗಿ ನಡೆದ ಹೋರಾಟ) ಯ ಸಂದರ್ಭದಲ್ಲಿ ಹುಟ್ಟಿದ ಆಪ್ 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಆ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಿಡಿದ ಅದು ಕೇವಲ 49 ದಿನಗಳಲ್ಲಿ ಸರ್ಕಾರ ವಿಸರ್ಜಿಸಿತು.
ಆನಂತರ 2015ರಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ನಂತರ 2020ರಲ್ಲಿಯೂ ಮರಳಿ ಅಧಿಕಾರದಲ್ಲಿದೆ. ಆನಂತರ 2022 ಪಂಜಾಬ್ನಲ್ಲಿಯೂ ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಗೋವಾದಲ್ಲಿ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯಗಳಿಸಿರುವ ಅದು ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ; ಬಿಹಾರ: ನಿತೀಶ್-ತೇಜಸ್ವಿ ನಡುವೆ ಒಪ್ಪಂದ; ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?