ಲಡಾಖ್ನಲ್ಲಿ ನಡೆಯುತ್ತಿರುವ ಭಾರತ-ಚೀನಾ ಸಂಘರ್ಷದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಕರೆದಿರುವ ಸರ್ವಪಕ್ಷ ಸಭೆ ಗೆ ಸೋನಿಯಾ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ. ಆದರೆ ಎರಡು ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಲಾಲು ಯಾದವ್ ಅವರ ಆರ್ಜೆಡಿಗೆ ಆಹ್ವಾನ ನೀಡದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಸಂಜೆ ಪಕ್ಷದ ಎಲ್ಲ ಅಧ್ಯಕ್ಷರಿಗೂ ಫೋನ್ ಕರೆ ಮಾಡಿ ಅವರನ್ನು ಸಭೆಗೆ ಆಹ್ವಾನಿಸಿದ್ದಾರೆ.
ಆದರೆ ತಮ್ಮ ಪಕ್ಷವನ್ನು ಏಕೆ ಆಹ್ವಾನಿಸಿಲ್ಲ ಎಂದು ಆರ್ಜೆಡಿಯ ತೇಜಶ್ವಿ ಯಾದವ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. “ಪ್ರೀತಿಯ ರಕ್ಷಣಾ ಸಚಿವರೆ ಮತ್ತು ಪ್ರಧಾನಿ ಮಂತ್ರಿ ಕಚೇರಿ, ಗಾಲ್ವನ್ ಕಣಿವೆ ಕುರಿತು ನಡೆಯುತ್ತಿರುವ ಸರ್ವಪಕ್ಷ ಸಭೆಗೆ ಆಹ್ವಾನಿಸುವುದರ ಮಾನದಂಡಗಳನ್ನು ಅಂದರೆ ಸಭೆಗೆ ಒಳಗೊಳ್ಳುವ ಅಥವಾ ಹೊರಗಿಡುವ ಕುರಿತು ತಿಳಿಸಬೇಕೆಂದು ಮನವಿ. ಏಕೆಂದರೆ ನಮ್ಮ ಪಕ್ಷ ಆರ್ಜೆಡಿಗೆ ಇದುವರೆಗೂ ಯಾವುದೇ ಆಹ್ವಾನ ಬಂದಿಲ್ಲ” ಎಂದು ತಿಳಿಸಿದ್ದಾರೆ.
Dear @DefenceMinIndia @PMOIndia, Just wish to know the criteria for inviting political parties for tomorrow's #AllPartyMeet on #GalwanValley. I mean the grounds of inclusion/exclusion. Because our party @RJDforIndia hasn't received any message so far.
— Tejashwi Yadav (@yadavtejashwi) June 18, 2020
ಎಎಪಿ ಮತ್ತು ಆರ್ಜೆಡಿಯನ್ನು ಸರ್ವಪಕ್ಷ ಸಭೆಯಿಂದ ಹೊರಗಿಡಲಾಗಿರುವ ಕುರಿತು “ಸಂಸತ್ತಿನಲ್ಲಿ ಕನಿಷ್ಠ ಐದು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲಾಗಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದಕ್ಕೆ ಉತ್ತರಿಸಿರುವ ಪಕ್ಷದ ನಾಯಕ ಮನೋಜ್ ಕುಮಾರ್ ಜಾ “ಆರ್ಜೆಡಿಗೆ ಐದು ಸ್ಥಾನಗಳಿವೆ. ಯಾರಿಗಾದರೂ ಸಂದೇಹವಿದ್ದರೆ ರಾಜ್ಯಸಭೆಯ ವೆಬ್ಸೈಟ್ ಪರಿಶೀಲಿಸಿ. ಹಾಗಾಗಿ ಆರ್ಜೆಡಿಯನ್ನು ಇಂದಿನ ಸಭೆಯ ಪಟ್ಟಿಗೆ ಸೇರಿಸಿಕೊಳ್ಳಬೇಕು” ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಸರ್ವಪಕ್ಷ ಸಭೆ ಎಂದರೆ ನಮ್ಮ ಅಭಿಪ್ರಾಯಗಳನ್ನು ಮುಂದಿಡಲು ನಮಗೆಲ್ಲರಿಗೂ ಅವಕಾಶ ನೀಡಬೇಕು ಎಂದು ಜಾ ತಿಳಿಸಿದ್ದಾರೆ.
The idea of 'Five is Fiction'..anybody can check #RajyaSabha website..https://t.co/a4jafMOq6e https://t.co/wXsfqyIWDk
— Manoj Kumar Jha (@manojkjhadu) June 19, 2020
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಸಂಸತ್ತಿನಲ್ಲಿ ನಾಲ್ವರು ಸಂಸದರನ್ನು ಒಳಗೊಂಡಿದೆ. ಈ ಕುರಿತು ಅಸಮಾಧಾನಗೊಂಡ ಎಎಪಿ ನಾಯಕ ಸಂಜಯ್ ಸಿಂಗ್ “ಕೇಂದ್ರದಲ್ಲಿ ವಿಚಿತ್ರವಾದ ಅಹಂಕಾರವುಳ್ಳ ಸರ್ಕಾರವಿದೆ. ಎಎಪಿಗೆ ದೆಹಲಿಯಲ್ಲಿ ಸರ್ಕಾರವಿದೆ ಮತ್ತು ಪಂಜಾಬ್ನಲ್ಲಿ ಮುಖ್ಯ ವಿರೋಧ ಪಕ್ಷವಾಗಿದೆ. ಆದರೂ ಒಂದು ಪ್ರಮುಖ ವಿಷಯದ ಬಗ್ಗೆ ಎಎಪಿಯ ಅಭಿಪ್ರಾಯಗಳು ಅಗತ್ಯವಿಲ್ಲವೇ? ಸಭೆಯಲ್ಲಿ ಪ್ರಧಾನಿ ಏನು ಹೇಳುತ್ತಾರೆಂದು ದೇಶ ಕಾಯುತ್ತಿದೆ” ಎಂದು ತಿಳಿಸಿದ್ದಾರೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸೋಮವಾರ ಚೀನಾ ಜೊತೆ ಮುಖಾಮುಖಿಯಾಗಿ ಇದರಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಈ ಕುರಿತು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದು ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಸರ್ಕಾರ ಮಾಹಿತಿ ಕೊಡಬೇಕೆಂದು ಒತ್ತಾಯಿಸಿವೆ.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೇಂದ್ರದ ನಿಲುವಿನಿಂದ ಅಸಮಾಧಾನಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸರ್ವಪಕ್ಷ ಸಭೆ ಸರಿಯಾದ ನಿರ್ಧಾರ ಮತ್ತು ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಪರವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಪಕ್ಷದ ಮುಖಂಡರು ತಿಳಿಸಿದ್ದಾರೆ.
ಶಿವಸೇನೆಯ ಉದ್ಧವ್ ಠಾಕ್ರೆ, ಎನ್ಸಿಪಿಯ ಶರದ್ ಪವಾರ್, ವೈಎಸ್ಆರ್ ಕಾಂಗ್ರೆಸ್ನ ಜಗನ್ ಮೋಹನ್ ರೆಡ್ಡಿ, ಜೆಡಿಯುನ ನಿತೀಶ್ ಕುಮಾರ್, ಡಿಎಂಕೆಯ ಎಂಕೆ ಸ್ಟಾಲಿನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಸಿಪಿಎಂನ ಸೀತಾರಾಮ್ ಯೆಚೂರಿ ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಕಾಂಗ್ರೆಸ್ಗೆ ಮತ್ತೆ ಅಧಿಕಾರದ ಸಾಧ್ಯತೆ