Homeಕರ್ನಾಟಕಎದ್ದೇ ನಿಲ್ಲದ ಸರ್ಕಾರವೊಂದು ಬಿದ್ದ ಈ ಹೊತ್ತಲ್ಲಿ.....

ಎದ್ದೇ ನಿಲ್ಲದ ಸರ್ಕಾರವೊಂದು ಬಿದ್ದ ಈ ಹೊತ್ತಲ್ಲಿ…..

- Advertisement -
- Advertisement -

ಬೀಳಲೇಬೇಕಿದ್ದ ಸರ್ಕಾರ ಬಿದ್ದು ಹೋಗಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಒಂದಾಗಿದ್ದೇವೆ ಎಂದು ಹೇಳಿದ್ದ ಪಕ್ಷಗಳು ಅದರಲ್ಲಿ ಸಫಲವಾಗದ್ದೇಕೆ? ದಕ್ಷಿಣ ಭಾರತದ ಇತರ ರಾಜ್ಯಗಳ ರಾಜಕಾರಣವನ್ನು ಗಮನಿಸಿದರೆ ಕೋಮುವಾದಿ ದುಷ್ಟ ಶಕ್ತಿಗಳಿಗೆ ಸವಾಲು ಒಡ್ಡಲು ಈ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.

ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಪಕ್ಷ ಮತ್ತು ಅವರ ಕುಟುಂಬಕ್ಕೆ ಕೋಮುವಾದಿ ವಿರೋಧ ಎಂಬ ನುಡಿಗಟ್ಟೇ ಇಷ್ಟವಿರಲಿಲ್ಲ. ಹೈಕಮಾಂಡ್ ಒತ್ತಡಕ್ಕೆ ಮಣಿದು ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಿದ ಸಿದ್ದರಾಮಯ್ಯನವರು ಆರಂಭದಿಂದಲೇ ಎಚ್ಚರ ವಹಿಸಿದ್ದರೂ ಈಗಿನ ಭಿನ್ನಮತ ಉಂಟಾಗುತ್ತಲೇ ಇರಲಿಲ್ಲ.

ಸುಧಾಕರ್, ಎಂಟಿಬಿ ನಾಗರಾಜ್, ಸೋಮಶೇಖರ್, ಮುನಿರತ್ನ ಎಂಬ ದಗಲ್ಬಾಜಿಗಳನ್ನು ನಂಬಿದ್ದು ಅವರ ದೊಡ್ಡ ಪ್ರಮಾದವೇ ಆಗಿತ್ತು. ಈ ಸರ್ಕಾರದಲ್ಲಿ ತನ್ನದೇ ಛಾಪು ಮೂಡಿಸಿದ ಮಂತ್ರಿಗಳಿಲ್ಲ. ದೇಶಪಾಂಡೆಯಂತಹ ವಂಚಕರು ಎಲ್ಲಾ ಸರ್ಕಾರಗಳಲ್ಲೂ ಸಚಿವರಾಗುತ್ತಾರೆ. ಇತ್ತ ಜೆಡಿಎಸ್‍ನಲ್ಲಂತೂ ರೇವಣ್ಣ ಒಬ್ಬರೇ ಮಿನಿಸ್ಟರ್ ಎಂಬ ಲೆಕ್ಕದಲ್ಲಿ ನಾಶವಾಯಿತು.

ಈ ಸರ್ಕಾರಕ್ಕೆ ಒಂದು ಮುನ್ನೋಟವಿದ್ದಂತೆ ಕಾಣುತ್ತಿರಲಿಲ್ಲ. ಮೈತ್ರಿ ಪಕ್ಷಗಳ ನಡುವೆಯೂ ತಾಳ ಮೇಳ ಇರಲಿಲ್ಲ. ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿಕೊಳ್ಳುವಲ್ಲೂ ಈ ಸರ್ಕಾರ ವಿಫಲವಾಗಿತ್ತು. 2018ರ ಮೇ ತಿಂಗಳಲ್ಲಿ ಚುನಾವಣಾ ಫಲಿತಾಂಶ ಬಂದಾಗ, ದೆಹಲಿಯಲ್ಲಿ ಮಾತಾಡಿದ್ದ ಈ ದೇಶದ ಪ್ರಧಾನಿ ಅಂದೇ ಹೇಳಿದ್ದರು: ಅಲ್ಲಿ ‘ಅವರು’ ಸರ್ಕಾರ ಮಾಡಲು ಬಿಡಲ್ಲ ಎಂದು. ಅಂದರೆ ಅವತ್ತೇ ಈ ರಾಜ್ಯದ ಅಧಿಕಾರ ಕಬಳಿಸುವ ಆಟ ಶುರುವಾಗಿತ್ತು.

ಅದಕ್ಕಾಗಿ ಹಲವು ಪ್ರಯತ್ನಗಳನ್ನು ನಡೆಸಿ, ಕಡೆಯಲ್ಲಿ ನೇರವಾಗಿ ಹೈಕಮ್ಯಾಂಡ್ ಉಸ್ತುವಾರಿಯಲ್ಲಿ ನಡೆದ ಆಪರೇಷನ್‍ನಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಶಾಸಕರು ಬಲಿ ಬೀಳಲು ಕಾರಣವೇನು? ಇದಕ್ಕಿಂತ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸೀಟುಗಳು ಬಿಜೆಪಿಗೆ ಹೋಗಲು ಕಾರಣವೇನು? ಆ ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಕೆಲಸ ಮಾಡದಂತಾಗಿತ್ತು. ಏಕೆಂದರೆ ಕೋಮುವಾದ ವಿರೋಧವೆನ್ನುವುದು ಕೇವಲ ಘೋಷಣೆಯಾಗಿದ್ದು, ಅವರ ಕಾರ್ಯಕರ್ತರಿಗಿರಲಿ ಸ್ವತಃ ಶಾಸಕರಲ್ಲೂ ಅರಿವು ಮೂಡಿಸಿರಲಿಲ್ಲ.

ಕೆ.ಎನ್.ರಾಜಣ್ಣರಂತಹ ಹಿರಿಯ ಶಾಸಕರು ದೇವೇಗೌಡರನ್ನು ಸೋಲಿಸಲು ಕೆಲಸ ಮಾಡಿಸುತ್ತಾರೆ. ಇಂತಹ ಉದಾಹರಣೆಗಳು ರಾಜ್ಯದುದ್ದಕ್ಕೂ ಇವೆ. ತನ್ನ ಮನೆಗೇ 3 ಕೋಟಿ ತಂದುಕೊಟ್ಟರೂ ತಾನು ಆಪರೇಷನ್‍ಗೆ ಒಳಗಾಗಲಿಲ್ಲ ಎಂದು ಸದನದಲ್ಲಿ ಹೇಳಿಕೊಂಡ ಶ್ರೀನಿವಾಸಗೌಡರು ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡುತ್ತಾರೆ. ಇಂದು ಮಿಕ್ಕೆಲ್ಲರಿಗೆ ಪಾಠ ಹೇಳುತ್ತಿರುವ ಸ್ಪೀಕರ್ ರಮೇಶ್‍ಕುಮಾರ್ ಅವರೇ ಈ ವಿಚಾರದಲ್ಲಿ ಅವರಿಗೆ ನಾಯಕರು.

ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ಧ ಗುಡುಗುತ್ತಿದ್ದರಾದರೂ, ಅದಕ್ಕಾಗಿ ಕೆಲವು ತ್ಯಾಗಗಳನ್ನು ಮಾಡಲು ಸಿದ್ಧರಿರಲಿಲ್ಲ. ಇನ್ನು ಗೌಡರ ಕುಟುಂಬಕ್ಕೆ ಕುಟುಂಬದ ಹಿತಾಸಕ್ತಿಯೇ ರಾಜ್ಯದ ಹಿತಾಸಕ್ತಿ. ಹೀಗಾಗಿ ಪರಸ್ಪರ ಬೆನ್ನಿಗಿರಿಯುವ ಕೆಲಸಗಳು ಸಾಕಷ್ಟು ನಡೆದಿದ್ದವು. ಇವರು ಬೆಚ್ಚಿಬಿದ್ದು ಎಚ್ಚೆತ್ತುಕೊಂಡಿದ್ದು ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ. ನಂತರ ಗಾಬರಿಗೊಂಡಿದ್ದು ಗುಂಪು ರಾಜೀನಾಮೆ ಪ್ರಕರಣದ ನಂತರವೇ. ಆ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.

ಸಮಾಜದಲ್ಲಿ ಕೋಮುವಾದದ ವಿರುದ್ಧದ ಮನೋಭಾವ ಮೂಡಿಸದೇ ಇದ್ದಾಗ ಶಾಸಕರು ಮಾಡಿದ ದ್ರೋಹವು ಪಕ್ಷದ್ರೋಹವೆನಿಸಿಕೊಳ್ಳುತ್ತದೆಯೇ ಹೊರತು ಸೈದ್ಧಾಂತಿಕ ದ್ರೋಹವೆಂದಲ್ಲ. ಇವೆಲ್ಲಾ ಹಿನ್ನೆಲೆಯನ್ನು ಕೆದಕಿ ನೋಡದೇ, ಈಗ ಮತ್ತೆ ಪಕ್ಷ ಕಟ್ಟುತ್ತೇವೆಂದು ಹೊರಟವರು ಏನನ್ನು ಕಟ್ಟಲು ಸಾಧ್ಯ? ಈ ವಿಚಾರವನ್ನು ಡಿ.ಕೆ.ಶಿವಕುಮಾರ್, ಎಚ್.ಡಿ.ಕೆ ಥರದವರು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ ಸಿದ್ದರಾಮಯ್ಯನವರಿಗಾದರೂ ಇದು ಅರ್ಥವಾದೀತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...