ನೆರೆಪೀಡಿತ ಪ್ರದೇಶಗಳ ಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡು ಮಾತನಾಡಿದರೆ ಅದು ನಿಮಗೆ ಸುಳ್ಳಿನಂತೆ ಕಾಣಿಸುತ್ತಿದೆಯೇ? ಜಿಲ್ಲಾಧಿಕಾರಿಗಳು ಕೊಟ್ಟ ಹೇಳಿಕೆ ಓದಲು ನಾನು ಯಡಿಯೂರಪ್ಪ ಅಲ್ಲ, ನಾನು ಸಿದ್ದರಾಮಯ್ಯ. ಪ್ರತ್ಯಕ್ಷವಾಗಿ ಪರಿಶೀಲನೆ ಮಾಡಿ ಮಾತನಾಡ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮತ್ತೆ ಯಡಿಯೂರಪ್ಪನವರ ವಿರುದ್ಧ ಗುಡುಗಿದ್ದಾರೆ.
ನೀವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕುಸಿದುಬಿದ್ದ ಮನೆಗಳ ಸಂಖ್ಯೆ 2,47,628 ಎಂದು ಹೇಳಿದ್ದೀರಿ. ಅಷ್ಟು ಮನೆ ಮಾಲೀಕರಿಗೆ ತಲಾ ರೂ.10 ,000 ಪರಿಹಾರ ಕೊಟ್ಟಿದ್ದೀರಾ? ಅಷ್ಟು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದೀರಾ? ಲೆಕ್ಕಕೊಡಿ. ಪತ್ರಿಕೆಗಳ ವರದಿಗಳನ್ನು ಕಣ್ಣುಬಿಟ್ಟು ಓದಿ. ವಿಧಾನಸೌಧದಲ್ಲಿ ಕೂತು ಸಭೆ ನಡೆಸುತ್ತಿರುವ ನೀವು ಮತ್ತು ನಿಮ್ಮ ಸಹದ್ಯೋಗಿಗಳು ಒಮ್ಮೆ ನೆರೆಬಾಧಿತ ಪ್ರದೇಶಗಳ ಕಡೆ ಹೆಜ್ಜೆ ಹಾಕಿ. ನಿಮ್ಮ ಉಪಚುನಾವಣಾ ತಯಾರಿ ಕಸರತ್ತು ನಿಲ್ಲಿಸಿ ಜನರ ಕಷ್ಟದ ಕಡೆ ಗಮನ ಕೊಡಿ ಎಂದು ಸಿದ್ದು ಕಿಡಿಕಾರಿದ್ದಾರೆ.
ನೆರೆಬಾಧಿತ ಜನ ತಾತ್ಕಾಲಿಕ ಶೆಡ್ನಲ್ಲಿ ನರಳಾಡುತ್ತಿದ್ದಾರೆ, ಬಯಲಲ್ಲಿ ದೀಪಾವಳಿ ಆಚರಿಸಿದ್ದಾರೆ. ಅಧಿಕಾರಿಗಳು ಅಲ್ಲಿಂದಲೂ ಓಡಿಸಲು ಪ್ರಯತ್ನಿಸುತ್ತಿದ್ದಾರೆ, ಪರಿಹಾರದ ಹಣವೂ ಹೆಚ್ಚಿನವರನ್ನು ತಲುಪಿಲ್ಲ. ಸಂತ್ರಸ್ತರ ಪುನರ್ ವಸತಿ ಕಾರ್ಯ ಪ್ರಾರಂಭವೇ ಆಗಿಲ್ಲ. ಇದಕ್ಕೆ ಏನ್ ಹೇಳ್ತಿರಾ ಯಡಿಯೂರಪ್ಪನವರೇ? ಸತ್ತು ಹೋಗಿರುವ ಸರ್ಕಾರ ಮಾತ್ರ ಹೀಗಿರಲು ಸಾಧ್ಯ. ಜೀವಂತವಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಜೀವಂತಿಕೆ ತೋರಿಸಿ. ಜನರ ಗಮನ ಬೇರೆ ಕಡೆ ಸೆಳೆಯುವ ಕುತಂತ್ರ ಬೇಡ. ಮೊದಲು ನೆರೆ ಪರಿಹಾರ ಮಾಡಿ ಲೆಕ್ಕಕೊಡಿ,
ಆ ಮೇಲೆ ಟಿಪ್ಪು, ಸಾವರ್ಕರ್ ಬಗ್ಗೆ ಮಾತನಾಡೋಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ನನ್ನ ಮಾತು ನಿಮಗೆ ಸಹಿಸಲಾಗುವುದಿಲ್ಲ, ಇದಕ್ಕಾಗಿಯೇ ಕಾಟಾಚಾರಕ್ಕೆ ವಿಧಾನಮಂಡಲ ಅಧಿವೇಶನ ನಡೆಸಿ ಮುಗಿಸಿಬಿಟ್ಟಿರಿ. ಈಗ ಯಾವುದೋ ವಿಡಿಯೋ, ಇನ್ನಾವುದೋ ಸುಳ್ಳು ಆರೋಪಗಳನ್ನು ಮಾಡಿ ಬಾಯಿ ಮುಚ್ಚಿಸಲು ನೋಡುತ್ತಿದ್ದೀರಿ. ಕರ್ನಾಟಕದ ಬಿಜೆಪಿ ನಾಯಕರೇ, ಈ ರೀತಿ ನಿಮ್ಮಿಂದ ನನ್ನ ಬಾಯಿ ಕಟ್ಟಲಾಗದು ಎಂದು ಸವಾಲು ಹಾಕಿದ್ದಾರೆ