ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಕಾರ್ಯಕರ್ತ ಪನ್ನುನ್ ಕೊಲೆಗೆ ಸಂಚು ಆರೋಪದ ಕುರಿತು ತನಿಖೆ ನಡೆಸಲು ಭಾರತ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ.
ಯುಎಸ್ ಅಧಿಕಾರಿಗಳು ನನ್ನ ಹತ್ಯೆಯ ಸಂಚನ್ನು ವಿಫಲಗೊಳಿಸಿದ್ದಾರೆ ಮತ್ತು ಹತ್ಯೆಯ ಸಂಚಿನಲ್ಲಿ ಭಾರತದ ಕೈವಾಡ ಇದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ಮೊದಲು ಆರೋಪಿಸಿದ್ದರು. ಆ ಬಳಿಕ ಅಮೆರಿಕ ಕೂಡ ಘಟನೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತ್ತು. ಭಾರತ ಸರ್ಕಾರ ಈ ಸಂಚಿನ ಬಗ್ಗೆ ತಿಳಿದಿರಬಹುದು ಎಂದು ಹೇಳಿತ್ತು.
ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದು, ಅಮೆರಿಕದಲ್ಲಿ ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ಯತ್ನಿಸಲಾಗಿತ್ತು ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಪನ್ನೂನ್ ಸಿಖ್ ಪತ್ಯೇಕತಾವಾದಿ ಮತ್ತು ಕೆನಡಾದ ಪ್ರಜೆ ಎಂದು ತಿಳಿದು ಬಂದಿದೆ. ವಿವಿಧ ಭಯೋತ್ಪಾದನಾ ಆರೋಪಗಳಲ್ಲಿ ಈತ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾನೆ. ಈ ಆರೋಪಗಳ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವುದಕ್ಕಾಗಿ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧಾರದ ಮೇಲೆ ಭಾರತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ನಮ್ಮ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವುದರಿಂದ ಭಾರತವು ಅಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಂಬಂಧಿತ ಇಲಾಖೆಗಳು ಈಗಾಗಲೇ ಸಮಸ್ಯೆಯನ್ನು ಪರಿಶೀಲಿಸುತ್ತಿವೆ ಎಂದು ಅವರು ಹೇಳಿದರು.
ಜೂನ್ನಲ್ಲಿ ವ್ಯಾಂಕೋವರ್ ಉಪನಗರದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿತ್ತು.ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿವಾದದ ಮಧ್ಯೆಯೇ ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಯನ್ನು ಮಾಡುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ಕೂಡ ಹೇಳಿಕೊಂಡಿತ್ತು.
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್ವಂತ್ ಸಿಂಗ್ ಪನ್ನುನ್, ಹರ್ದೀಪ್ ಸಿಂಗ್ ನಿಜ್ಜರ್ನಂತೆ ದಶಕಗಳ ಕಾಲದ ಸಿಖ್ ಪ್ರತ್ಯೇಕವಾದಿ ಪ್ರತಿಪಾದಕನಾಗಿದ್ದಾನೆ.
ಪನ್ನೂನ್ ಗಾರ್ಡಿಯನ್ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕೆನಡಾದಲ್ಲಿರುವ ಭಾರತೀಯ ಅಧಿಕಾರಿಗಳು ನಿಜ್ಜರ್ ಹತ್ಯೆಯ ತನಿಖೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿಜ್ಜರ್ ಗುಂಡೇಟಿಗೆ ಬಲಿಯಾಗಿ 5 ತಿಂಗಳಾದರೂ ಯಾರನ್ನೂ ಬಂಧಿಸಲಾಗಿಲ್ಲ. ಸರಣಿ ಹತ್ಯೆಗಳ ಈ ತನಿಖೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಟೊರೊಂಟೊ ಅಥವಾ ವ್ಯಾಂಕೋವರ್ನಲ್ಲಿ ನಡೆದ ಸರಳವಾದ ಕೊಲೆಯಲ್ಲ. ಇದು ಖಲಿಸ್ತಾನ್ ಪರ ಕಾರ್ಯಕರ್ತನ ಸುಸಂಘಟಿತ ಕೊಲೆಯಾಗಿದೆ ಎಂದು ಹೇಳಿದ್ದರು.
ಇದನ್ನು ಓದಿ; ಸಿಎಎ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ