ಚೆನ್ನೈನಿಂದ ಗುಜರಾತ್ನ ಪಾಲಿಟಾನಾಗೆ ತೆರಳುತ್ತಿದ್ದ ವಿಶೇಷ ರೈಲಿನಲ್ಲಿ ಸುಮಾರು 90 ಪ್ರಯಾಣಿಕರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುಣೆ ರೈಲ್ವೆ ವಿಭಾಗದ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮದಾಸ್ ಭಿಸೆ, ಚೆನ್ನೈನಿಂದ ಗುಜರಾತ್ನ ಪಾಲಿಟಾನಾಗೆ ತೆರಳುತ್ತಿದ್ದ ವಿಶೇಷ ರೈಲಿನಲ್ಲಿ ಸುಮಾರು 1,000 ಪ್ರಯಾಣಿಕರಿದ್ದರು. ಹಲವಾರು ಪ್ರಯಾಣಿಕರು ತಲೆ ಸುತ್ತು, ಹೊಟ್ಟೆ ನೋವು, ವಾಂತಿ ಹಾಗೂ ಭೇದಿಯಿಂದ ಬಳಲಿದ್ದಾರೆ. ರೈಲ್ವೆ ಆಸ್ಪತ್ರೆಯ ವೈದ್ಯರ ತಂಡ ಹಾಗೂ ರೈಲ್ವೆ ಅಧಿಕಾರಿಗಳನ್ನು ಪ್ರಯಾಣಿಕರಿಗೆ ವೈದ್ಯಕೀಯ ನೆರವು ಒದಗಿಸಲು ಕಳುಹಿಸಿಕೊಡಲಾಗಿತ್ತು ಎಂದು ಹೇಳಿದ್ದಾರೆ.
ಗುಜರಾತ್ನ ಪಾಲಿಟಾನಾದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಭಾರತ್ ಗೌರವ್ ರೈಲನ್ನು ಖಾಸಗಿಯಾಗಿ ಕಾಯ್ದಿರಿಸಲಾಗಿತ್ತು. ಪ್ರಯಾಣಿಕರ ಗುಂಪು ಹೊರಗಿನಿಂದ ಖಾಸಗಿಯಾಗಿ ಆಹಾರವನ್ನು ತರಿಸಿಕೊಂಡು ತಿಂದಿದ್ದಾರೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಈ ಆಹಾರವನ್ನು ಪೂರೈಸಿಲ್ಲ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ.
ಸೋಲಾಪುರ ಮತ್ತು ಪುಣೆ ನಡುವೆ ಒಂದೇ ಕೋಚ್ನಲ್ಲಿದ್ದ ಸುಮಾರು 80 ರಿಂದ 90 ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ. ಪುಣೆ ನಿಲ್ದಾಣದಲ್ಲಿ ವೈದ್ಯರ ತಂಡವು ಎಲ್ಲಾ ಪ್ರಯಾಣಿಕರನ್ನು ಭೇಟಿ ಮಾಡಿ ಅವರಿಗೆ ಚಿಕಿತ್ಸೆ ನೀಡಿದೆ. 50 ನಿಮಿಷಗಳ ನಂತರ ರೈಲು ಮತ್ತೆ ಹೊರಟಿದ್ದು, ಎಲ್ಲಾ ಪ್ರಯಾಣಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಸೋಲಾಪುರದಿಂದ ಅಂದಾಜು 180 ಕಿಮೀ ದೂರದಲ್ಲಿರುವ ವಾಡಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಆಹಾರ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಯಾಣಿಕರು ಯಾರೋ ದಾನದ ರೂಪದಲ್ಲಿ ನೀಡಿದ ಆಹಾರವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ನಾವು ಆಹಾರದ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಆ ಆಹಾರವನ್ನು ರೈಲ್ವೆ ಇಲಾಖೆಯು ಪೂರೈಸಿರಲಿಲ್ಲ. ಈ ಕುರಿತು ಮುಂದಿನ ತನಿಖೆಯನ್ನು ನಡೆಸುತ್ತೇವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ಓದಿ; ಅಝಾನ್ಗೆ ಧ್ವನಿವರ್ಧಕ ಬಳಸಿದರೆ ಶಬ್ಧಮಾಲಿನ್ಯವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ: ಹೈಕೋರ್ಟ್