ಹೈಕೋರ್ಟ್ ಆದೇಶದ ಹೊರತಾಗಿಯೂ ಬೆಂಗಳೂರಿನ ಜಯನಗರ ನಾಲ್ಕನೇ ಹಂತದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ತೆರವುಗೊಳಿಸುತ್ತಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ವಕೀಲ ವಿನಯ್ ಶ್ರೀನಿವಾಸ್, “ಜಯನಗರ 4ನೇ ಹಂತದಲ್ಲಿ ಬಿಬಿಎಂಪಿ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ. ಇದರ ವಿರುದ್ದ 78 ಬೀದಿಬದಿ ವ್ಯಾಪಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಕೊಡದಂತೆ ಸೂಚಿಸಿದೆ” ಎಂದಿದ್ದಾರೆ.
“ನಾವು ಹೈಕೋರ್ಟ್ ಆದೇಶದ ಪ್ರತಿಯನ್ನು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರು ಮತ್ತು ಜಯನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ನೀಡಿದ್ದೇವೆ. ಆದರೂ, ಕೋರ್ಟ್ ಆದೇಶ ಲೆಕ್ಕಿಸದೆ ಬೀದಿ ವ್ಯಾಪಾರಿಗಳ ತೆರವಿಗೆ ಮುಂದಾಗಿದ್ದಾರೆ. ಇದು ಕಾನೂನು ಬಾಹಿರ ಮತ್ತು ನ್ಯಾಯಾಂಗ ನಿಂದನೆಯಾಗಿದೆ” ಎಂದು ತಿಳಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳು-ಅಧಿಕಾರಿಗಳ ಜಟಾಪಟಿ:
ಜಯನಗರ 4ನೇ ಹಂತದಲ್ಲಿ ಜನವರಿ 12,2024ರಂದು ಸಂಜೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ಮಾರ್ಷಲ್ಗಳೊಂದಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ವ್ಯಾಪಾರಿಗಳು ವಕೀಲ ವಿನಯ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದರು.
ಜಯನಗರ ಮಾತ್ರವಲ್ಲದೆ ಬೆಂಗಳೂರು ನಗರದ ಹಲವೆಡೆ ಬೀದಿಬದಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ ಎಂಬಂತಾಗಿದೆ ಪರಿಸ್ಥಿತಿ. ಪ್ರತೀ ಬಾರಿಯೂ ಅಧಿಕಾರಿಗಳು ತೆರವಿಗೆ ಮುಂದಾಗುವುದು, ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸುವುದು ಆಗುತ್ತಿದೆ.
ಬನಶಂಕರಿ: ಬೀದಿ ವ್ಯಾಪಾರಿಗಳ ಎತ್ತಂಗಡಿಗೆ ಮುಂದಾದ ಬಿಬಿಎಂಪಿ; ತೀವ್ರ ವಿರೋಧ
ಈ ಹಿಂದೆ ಬನಶಂಕರಿ ಬಸ್ ನಿಲ್ದಾಣದ ಮುಂಭಾಗ ಮತ್ತು ಸಾರಕ್ಕಿ ಮಾರುಕಟ್ಟೆಯ ಬಳಿ ಇದೇ ರೀತಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದಾಗ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ವ್ಯಾಪಾರಿಗಳು ತಮ್ಮ ಅನುಮತಿ ಪತ್ರ ಸೇರಿದಂತೆ ದಾಖಲೆಗಳನ್ನು ತೋರಿಸಿದಾಗ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.
ಅನುಮತಿ ಇದ್ದರೂ ಅಧಿಕಾರಿಗಳಿಂದ ಕಿರುಕುಳ ಆರೋಪ:
ನಾನುಗೌರಿ ತಂಡ ಹಲವು ಬಾರಿ ಬೀದಿಬದಿ ವ್ಯಾಪಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈ ವೇಳೆ ಅವರು ಹೇಳಿರುವುದು ನಮಗೆ ಬೀದಿಬದಿ ವ್ಯಾಪಾರ ಮಾಡಲು ಬಿಬಿಎಂಪಿ ಅಧಿಕಾರಿಗಳೇ ಅನುಮತಿ ನೀಡಿದ್ದಾರೆ ಎಂಬುದಾಗಿದೆ. ವ್ಯಾಪಾರಿಗಳು ತಮ್ಮಲ್ಲಿರುವ ಅನುಮತಿ ಪತ್ರಗಳನ್ನು ಕೂಡ ನಮಗೆ ತೋರಿಸಿದ್ದಾರೆ. ಆದರೂ, ಅವರನ್ನು ತೆರವುಗೊಳಿಸಲು ಅಧಿಕಾರಿಗಳು ಪದೇ ಪದೇ ಮುಂದಾಗುತ್ತಿದ್ದಾರೆ.
ಹಾಗಾದರೆ, ಬೀದಿಬದಿ ವ್ಯಾಪಾರ ಮಾಡಲು ಬಿಬಿಎಂಪಿ ಕೊಟ್ಟಿರುವ ಅನುಮತಿ ಪತ್ರಗಳಿಗೆ ಬೆಲೆ ಇಲ್ಲವೇ ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿರುವ ವಕೀಲ ವಿನಯ್ ಶ್ರೀನಿವಾಸ್, “ಹೆಚ್ಚಿನ ಅಧಿಕಾರಿಗಳಿಗೆ ಈ ಅನುಮತಿ ಪತ್ರದ ಬಗ್ಗೆ ಮತ್ತು ಬೀದಿಬದಿ ವ್ಯಾಪಾರಿಗಳ ಕಾನೂನಿನ ಬಗ್ಗೆ ಮಾಹಿತಿಯೇ ಇಲ್ಲ” ಎಂದಾಗಿದೆ.
ಜಯನಗರ 4ನೇ ಹಂತಕ್ಕೆ ಸಂಬಂಧಿಸಿದಂತೆ ಕೇವಲ ಅನುಮತಿ ಪತ್ರ ಮಾತ್ರವಲ್ಲ, ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸದಂತೆ ಹೈಕೋರ್ಟ್ ಆದೇಶವೂ ಇದೆ. ಅದನ್ನು ಉಲ್ಲಂಘಿಸಿ ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಏಳನೇ ವೇತನ ಆಯೋಗದ ವರದಿ ಸಲ್ಲಿಕೆ: ಶೇ.27.5ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು