HomeUncategorizedಬನಶಂಕರಿ: ಬೀದಿ ವ್ಯಾಪಾರಿಗಳ ಎತ್ತಂಗಡಿಗೆ ಮುಂದಾದ ಬಿಬಿಎಂಪಿ; ತೀವ್ರ ವಿರೋಧ

ಬನಶಂಕರಿ: ಬೀದಿ ವ್ಯಾಪಾರಿಗಳ ಎತ್ತಂಗಡಿಗೆ ಮುಂದಾದ ಬಿಬಿಎಂಪಿ; ತೀವ್ರ ವಿರೋಧ

- Advertisement -
- Advertisement -

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು, ಪೊಲೀಸರು ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವೆ ಮತ್ತೊಮ್ಮೆ ಜಟಾಪಟಿ ಶುರುವಾಗಿದೆ.

ನಗರದ ಬೀದಿ ಬದಿಗಳಲ್ಲಿ ಹಣ್ಣು, ಹೂವು, ತರಕಾರಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ತೆರವುಗೊಳಿಸಲು ಮತ್ತೊಮ್ಮೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಇಂದು (ನ.29) ನಗರದ ಬನಶಂಕರಿ ಮತ್ತು ಸಾರಕ್ಕಿ ಮಾರುಕಟ್ಟೆಯ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ಸ್ಥಳ ಬಿಟ್ಟು ತೆರಳುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದಾರೆ. ಈ ವೇಳೆ ವ್ಯಾಪಾರಿಗಳು ತಮಗೆ ಬೀದಿ ಬದಿ ವ್ಯಾಪಾರ ಮಾಡಲು ಸ್ವತಃ ಬಿಬಿಎಂಪಿಯೇ ನೀಡಿರುವ ಅನುಮತಿ ಪತ್ರ, ಗುರುತಿನ ಚೀಟಿಗಳನ್ನು ತೋರಿಸಿದ್ದಾರೆ. ಇದರಿಂದ ತೆರವು ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳು ವಾಪಸ್‌ ತೆರಳಿದ್ದಾರೆ.

ಈ ಕುರಿತು ನಾನು ಗೌರಿ ಜೊತೆ ಮಾತನಾಡಿರುವ ವಕೀಲ ವಿನಯ್, “ನಮ್ಮ ದೇಶದಲ್ಲಿ 2014ರಿಂದ ‘ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ’ ಜಾರಿಯಲ್ಲಿದೆ. ಬನಶಂಕರಿ ಮತ್ತು ಸಾರಕ್ಕಿ ಮಾರುಕಟ್ಟೆಗಳ ಎಲ್ಲಾ ಬೀದಿ ಬದಿ ವ್ಯಾಪಾರಿಗಳಲ್ಲಿ ಗುರುತಿನ ಚೀಟಿಯಿದೆ. 2017ರಲ್ಲಿ ಬಿಬಿಎಂಪಿ ಸಮೀಕ್ಷೇ ಮಾಡಿ ಗುರುತಿನ ಚೀಟಿ ಕೊಟ್ಟಿದೆ. ಯಾರೂ ಅಕ್ರಮ ಚಟುಚಟಿಕೆ ಮಾಡುತ್ತಿಲ್ಲ. ಬೀದಿಯಲ್ಲಿ ವ್ಯಾಪಾರ ಮಾಡುವುದು ನಮ್ಮ ಹಕ್ಕು. ಅಧಿಕಾರಿಗಳಿಗೆ ವ್ಯಾಪಾರಿಗಳನ್ನು ತೆರವುಗೊಳಿಸಲು ಯಾವುದೇ ಆದೇಶವಿರಲಿಲ್ಲ ಮತ್ತು ಅವರು ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ಕೂಡ ನೀಡಿರಲಿಲ್ಲ” ಎಂದು ಹೇಳಿದ್ದಾರೆ.

“2017 ಬಿಬಿಎಂಪಿ ಸಮೀಕ್ಷೆ ಬಳಿಕ ಪಟ್ಟಣ ವ್ಯಾಪಾರ ಸಮಿತಿ ರಚನೆಯಾಗಿದೆ. ಈ ಸಮಿತಿ ಅಧೀನಲ್ಲಿ ಮತ್ತೊಮ್ಮೆ ಸಮೀಕ್ಷೆ ಅಗಬೇಕು. ಅದು ಆಗುವವರೆಗೆ ಯಾರನ್ನೂ ತೆರವುಗೊಳಿಸುವಂತಿಲ್ಲ. ನಾವು ಅನುಮತಿ ಪತ್ರ, ಗುರುತಿನ ಚೀಟಿ ತೋರಿಸಿದಾಗ ಅಧಿಕಾರಿಗಳು ವಾಪಸ್ ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಅಧಿಕಾರಿಗಳು ಪದೇ ಪದೇ ಕಿರುಕುಳ ಕೊಡಬಾರದು. ಬೀದಿ ವ್ಯಾಪಾರಿಗಳ ಕಾಯ್ದೆಯ ಸೆಕ್ಷನ್ 27ರಲ್ಲಿ ವ್ಯಾಪಾರಿಗಳಿಗೆ ಕಿರುಕುಳ ಆಗಬಾರದು ಎಂಬುವುದು ಸ್ಪಷ್ಟವಾಗಿದೆ. ಈ ಬಗ್ಗೆ ಹೆಚ್ಚಿನ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಕಾಯ್ದೆ ಪ್ರಕಾರ ಅಧಿಕಾರಿಗಳಿಗೂ ತರಬೇತಿ ನೀಡಬೇಕು. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ಮಾತ್ರ ತರಬೇತಿ ನೀಡಲಾಗಿದೆ ಆದರೆ, ಅಧಿಕಾರಿಗಳಿಗೆ ತರಬೇತಿ ನೀಡಿಲ್ಲ” ಎಂದರು.

ಬನಶಂಕರಿ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಖಾದರ್ ವಾಲಿ ಮಾತನಾಡಿ, “ನಾವು ಇಲ್ಲಿ ಮೂವತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ನಮಗೆ ಬಿಬಿಎಂಪಿಯಿಂದ ಅನುಮತಿ ಇದೆ. ಆದರೂ, ಅಧಿಕಾರಿಗಳು ಪದೇ ಕಿರುಕುಳ ಕೊಡುತ್ತಿದ್ದಾರೆ. ಪಾಲಿಕೆಯವರೇ ನಮಗೆ ಬಲವಂತವಾಗಿ ಲೋನ್ ಕೊಟ್ಟು ವ್ಯಾಪಾರ ಮಾಡಿ ಎಂದಿದ್ದರು. ಈಗ ಅವರೇ ತೆರವು ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿವಿಸಿ ಸದಸ್ಯ ಮಂಜು ಮಾತನಾಡಿ, “ಅಧಿಕಾರಿಗಳಿಗೆ ಬೀದಿ ವ್ಯಾಪಾರಿಗಳ ಕಾಯ್ದೆ ಬಗ್ಗೆ ಮಾಹಿತಿ ಗೊತ್ತಿಲ್ಲ. ಅವರಿಗೆ ಕಾನೂನಿನ ಅರಿವಿಲ್ಲ. ಈ ಹಿಂದೆ ಮೆಟ್ರೋ ನಿಗಮದಿಂದಲೂ ವ್ಯಾಪಾರಿಗಳಿಗೆ ತೊಂದರೆಯಾಗಿತ್ತು. ನಾವು ಪ್ರತಿಭಟಿಸಿದ್ದಕ್ಕೆ ನಮ್ಮನ್ನೇ ಟಾರ್ಗೆಟ್ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ತುಂಬಾ ಕಿರುಕುಳ ನೀಡುತ್ತಿದ್ದಾರೆ.
ದಯವಿಟ್ಟು ಬೀದಿ ವ್ಯಾಪಾರಿಗಳನ್ನು ಬದುಕಲು ಬಿಡಿ” ಎಂದರು.

ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ಸೈಯ್ಯದ್ ಝಮೀರ್ ಮಾತನಾಡಿ, “ನಮಗೆ ಬೀದಿ ಬದಿ ವ್ಯಾಪಾರ ಮಾಡಲು ಪಾಲಿಕೆಯಿಂದ ಅನುಮತಿ ಇದೆ. ನಮ್ಮದು ಕಚ್ಚಾ ವಸ್ತು, ನಾವು ಅವತ್ತಿಂದು ಅವತ್ತೇ ಮಾರಾಟ ಮಾಡಬೇಕು. ಇಲ್ಲದಿದ್ದರೆ ಬಂಡವಾಳ ಹಾಳಾಗುತ್ತದೆ. ಸರ್ಕಾರ ನಮಗೆ 10, 20, 30 ಸಾವಿರ ಸಾಲ ಕೊಟ್ಟ ವ್ಯಾಪಾರ ಮಾಡಲು ಪ್ರೋತ್ಸಾಹಿಸಿದೆ. ಅಧಿಕಾರಿಗಳು ಹೀಗೆ ಕಿರುಕುಳ ಕೊಟ್ಟರೆ ನಾವು ವ್ಯಾಪಾರ ಮಾಡೋದು ಹೇಗೆ? ಸಾಲ ತೀರಿಸೋದು ಹೇಗೆ? ಹೀಗೆ ಎತ್ತಂಗಡಿ ಮಾಡುತ್ತಿದ್ದರೆ ನಮಗೆ ಆಗುವ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು ಎಂದು” ಹೇಳಿದರು.

ಸಾರಕ್ಕಿ ಮಾರುಕಟ್ಟೆಯ ಅರುಣ್ ಕುಮಾರ್ ಮಾತನಾಡಿ, “ನಮಗೆ ವ್ಯಾಪಾರ ಮಾಡಲು ಅನುಮತಿ ಇದೆ. ಅನುಮತಿ ಕೊಟ್ಟು ಐದು ವರ್ಷ ಆಗಿದೆ. ಈಗ ನ್ಯಾಯಾಲಯದ ಆದೇಶ ಮೇರೆಗೆ ತೆರವುಗೊಳಿಸಲು ಬಂದಿದ್ದಾರೆ. ನಮ್ಮ ಕಡೆಯಿಂದ ವಕೀಲರು ಬಂದು ಮಾತನಾಡಿದ ಬಳಿಕ ಅಧಿಕಾರಿಗಳು ತೆರಳಿದ್ದಾರೆ. ನಮಗೆ ಹಕ್ಕುಪತ್ರ ಇದೆ. ರಸ್ತೆ ಬದಿ ವ್ಯಾಪಾರ ಮಾಡಲು ಗೆರೆ ಹಾಕಿ ಕೊಟ್ಟದ್ದಾರೆ” ಎಂದು ತಿಳಿಸಿದರು.

“ನಮಗೆ ಬೀದಿ ಬದಿ ವ್ಯಾಪಾರ ಮಾಡಲು ಪಾಲಿಕೆಯಿಂದ ಅನುಮತಿ ಇದೆ. ಬಿಬಿಎಂಪಿ ಅಧಿಕಾರಿಗಳೇ ಅನುಮತಿ ಕೊಟ್ಟು ಈಗ ಎತ್ತಂಗಡಿ ಮಾಡಲು ಬಂದಿದ್ದಾರೆ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು? ನಮಗೆ ಜೀವನ ಮಾಡಲು ಬೀದಿ ಬದಿ ವ್ಯಾಪಾರವೊಂದೇ ದಾರಿ. ಇದು ಬಿಟ್ಟರೆ ಬೇರೆ ಗೊತ್ತಿಲ್ಲ. ಇಡೀ ಕುಟುಂಬವನ್ನು ಈ ವ್ಯಾಪಾರದಿಂದಲೇ ಸಲಹುತ್ತಿದ್ದೇವೆ. ನಾವು ಯಾವುದೇ ನಿಯಮ ಮೀರಿಲ್ಲ. ಪಾಲಿಕೆಯವರು ನಿಗದಿಪಡಿಸಿದ ಜಾಗದಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ಸಾವಿರಾರು ಹೆಣ್ಣು ಮಕ್ಕಳು ನನ್ನಂತೆ ವ್ಯಾಪಾರ ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಅವರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕು ಎಂದು ಬೀದಿ ಬದಿ ವ್ಯಾಪಾರಿ ಫರ್ವೀನ್ ತಾಜ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬೆಂಗಳೂರು: ರಂಗ ಶಂಕರದಲ್ಲಿ ಪ್ಯಾಲೇಸ್ತೀನ್ ಪರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...