ಹವಾಮಾನ ವೈಪರೀತ್ಯದಿಂದಾಗಿ ಅಮರನಾಥ ಯಾತ್ರೆಗೆ ತೆರಳಿದ್ದ ಕಲಬುರಗಿಯ 27 ಜನರು ಮತ್ತು ಗದಗ ಜಿಲ್ಲೆಯ 23 ಯಾತ್ರಿಕರು ಮಧ್ಯದಲ್ಲೇ ಉಳಿದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವಂತ ಕುಟುಂಬ ವರ್ಗದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
”ಪವಿತ್ರ ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ. ಗದಗ್ ನಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 km ದೂರದಲ್ಲಿರುವ ಪಂಚತಾರ್ನಿ ಟೆಂಟ್ ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು, ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ” ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪವಿತ್ರ ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ.
ಗದಗ್ ನಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 km ದೂರದಲ್ಲಿರುವ ಪಂಚತಾರ್ನಿ ಟೆಂಟ್ ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ…
— CM of Karnataka (@CMofKarnataka) July 8, 2023
ಮೂರು ದಿನಗಳ ಹಿಂದೆ ಕಲಬುರಗಿಯಿಂದ 22 ಜನರ ತಂಡವು ರಾಮತೀರ್ಥ ಸೇವಾ ಸಮಿತಿಯ ಮೂಲಕ ಅಮರನಾಥ ಯಾತ್ರೆಗೆ ತೆರಳಿದ್ದರು. ಎಲ್ಲರೂ ಕಲಬುರಗಿ ನಗರದವರಾಗಿದ್ದು, ಸಧ್ಯ ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ ಸಮೀಪದ ಬಾಲ್ ಹಾಲ್ ಶಿಬಿರದಲ್ಲಿ ಉಳಿದುಕೊಂಡಿದ್ದಾರೆ. ಉಳಿದ ಐದು ಜನರ ತಂಡವು ಸೇನಾ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಜುಲೈ 14ರಂದು ವಾಪಸಾಗಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ರಾಜಪ್ಪ ತಿಳಿಸಿದ್ದಾರೆ.
ಗದಗದಿಂದ ಹೋಗಿರುವ ವಿನೋದ್ ಸಿ.ಪಟೇಲ್, ನೀತಾ ವಿ.ಪಟೇಲ್, ಚಂದೂಲಾಲ್ ಪಟೇಲ್, ಭಾವನಾ ಪಟೇಲ್, ತೇಜಲ್, ಶಾರದಾ, ಭೂಮಿಕಾ, ರಿತೇಶ್, ಪರ್ವಿನ್ ವಿ.ನಿರ್ಮಲ್, ಟೀನಾ ಪಿ. ನಿರ್ಮಲ್, ರಾಜೇಶ್ ಬಿ., ಪಾಲಕ್ ಆಲ್., ವೈಶಾಲಿ ಬಿ., ಯಶ್ ಆರ್., ಪ್ರವೀಣ್ ಸಿ., ಪಿಂಕಿ ಪಿ.. ಪ್ರಣೀತಾ ಪಿ., ವಿನಯ್ ಪಿ., ಜಾಹ್ನವಿ ವಿ., ಭವೇಶ್ ಬಿ., ತೃಪ್ತಿ … ದಿವಿತ್ ಬಿ., ಮಾಳವಿಕಾ ಆರ್. ಸಂಘಾನಿ ಅಮರನಾಥದಲ್ಲಿ ಸಿಲುಕಿಕೊಂಡವರು.
ವಿನೋದ್ ಪಟೇಲ್ ಎನ್ನುವವರು ಪತ್ರಿಕೆಯೊಂದರ ಜೊತೆ ಮಾತನಾಡಿದ್ದು, ”ಗುಜರಾತಿ ಸಮಾಜಕ್ಕೆ ಸೇರಿದ ನಾವೆಲ್ಲ ಒಟ್ಟಾಗಿ ಗದಗ ನಗರದಿಂದ ಜುಲೈ 1ರಂದು ಅಮರನಾಥ ಯಾತ್ರೆಗೆ ಬಂದಿದ್ದವು. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮಧ್ಯದಲ್ಲೇ ಸಿಕ್ಕಿಹಾಕಿಕೊಂಡು, ಶಿಬಿರದಲ್ಲಿ ಕುಳಿತಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದೇವೆ. ಕೆಟ್ಟ ಹವಾಮಾನ ಇನ್ನೂ ಎರಡು ದಿನಗಳ ಕಾಲ ಹೀಗೆ ಇರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ”ಆ ದಾರಿಯಲ್ಲಿ ಒಟ್ಟು 15 ಸಾವಿರ ಮಂದಿ ಯಾತ್ರಿಕರು ಇದ್ದಾರೆ. ಕನ್ನಡಿಗರು ಇರುವ ಕ್ಯಾಂಪ್ನಲ್ಲಿ 880 ಮಂದಿ ಇದ್ದಾರೆ. ಹವಾಮಾನ ಸರಿಯಿಲ್ಲ ಎಂಬ ಕಾರಣಕ್ಕೆ ಯಾತ್ರಿಕರನ್ನು ಮುಂದಕ್ಕೆ ಬಿಡುತ್ತಿಲ್ಲವಷ್ಟೇ, ಯಾತ್ರಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲಿನ ಅಧಿಕಾರಿಗಳು ನಮ್ಮ ಜತೆಗೆ ಸಂಪರ್ಕದಲ್ಲಿದ್ದು, ಯಾತ್ರಿಕರ ಕಾಳಜಿಗೆ ಕ್ರಮವಹಿಸಿದ್ದಾರೆ. ಎರಡು ದಿನಗಳ ಬಳಿಕ ಯಾತ್ರಿಕರು ಸುರಕ್ಷಿತವಾಗಿ ಹಿಂತಿರುಗುವ ಭರವಸೆ ಇದೆ” ಎಂದು ತಿಳಿಸಿದ್ದಾರೆ.
‘ಟೆಂಟ್ನಲ್ಲಿ ಸಿಲುಕಿರುವ ಯಾತ್ರಿಕರಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.
ಭಕ್ತರ ನೆರವಿಗೆ ಸಹಾಯವಾಣಿ ಆರಂಭ
ಸಂಕಷ್ಟದಲ್ಲಿರುವವರ ನೆರವಿಗಾಗಿ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಅಮರನಾಥ ದೇವಸ್ಥಾನ ಮಂಡಳಿಯ ಸಹಾಯವಾಣಿ-14464, 18001807198 (ಟ್ರೋಲ್ ಫ್ರೀ) ಅಥವಾ ಪಂಚತಾರ್ನಿ ಬೇಸ್ ಕ್ಯಾಂಪ್ನ ಸಹಾಯವಾಣಿ- 9906037370, 9414121477, 9419123373, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ- 1070, 080-22253707, 080-22340676 ಗೆ ಸಂಪರ್ಕಿಸಬಹುದು.