ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಘಾತ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ತಪ್ಪು ಯಾರೇ ಮಾಡಿದ್ದರೂ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗಾಗಲೇ ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ಹೇಳಿದರು.
ಇನ್ನೂ ಹಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಇಬ್ಬರು ಆರೋಪಿಗಳ ಬಂಧನ
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ ಮಾಳಿ, ಹುಸೇನ್ ಢಾಲಾಯತ್ ಬಂಧಿತ ಆರೋಪಿಗಳು. ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ನಾರಾಯಣ ಮಾಳಿ, ಜೈನಮುನಿ ಆಶ್ರಮದ ಬಳಿ ಜಮೀನು ಲೀಸ್ ಪಡೆದು ಉಳುಮೆ ಮಾಡುತ್ತಿದ್ದನು. ಇದೇ ವೇಳೆ ಜೈನಮುನಿಗೆ ಆಪ್ತನಾಗಿದ್ದು, ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನಮುನಿಗಳ ವಿಶ್ವಾಸಗಳಿಸಿದ್ದನು.
ವೈಯಕ್ತಿಕ ಕಾರಣಕ್ಕೆ ಮಾಳಿ ಜೈನಮುನಿಗಳ ಬಳಿ 6 ಲಕ್ಷ ರೂ. ಹಣ ಪಡೆದಿದ್ದನು. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿಗಳ ಕೊಲೆಗೈಯಲಾಗಿದೆ ಎನ್ನಲಾಗುತ್ತಿದೆ. ಜು.5ರ ರಾತ್ರಿ ಹಿರೇಕೋಡಿ ನಂದಿಪರ್ವತ ಆಶ್ರಮದ ಕೋಣೆಯಲ್ಲೇ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ನಡೆದಿದೆ. ವಿದ್ಯುತ್ ಶಾಕ್ ನೀಡಿ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಬಳಿಕ ಸ್ನೇಹಿತ ಹುಸೇನ್ಗೆ ಕರೆಮಾಡಿ ಕರೆಸಿಕೊಂಡಿದ್ದನು. ಇಬ್ಬರು ಮೃತದೇಹ ಕತ್ತರಿಸಿ ಬಟ್ಟೆ ಸುತ್ತಿ ಕೊಳವೆಬಾವಿಗೆ ಎಸೆದಿದ್ದರು. ಶನಿವಾರ ಮೃತದೇಹ ಪತ್ತೆಯಾಗಿದೆ.