ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಯಾವುದೇ ಪುರಾವೆಗಳಿಲ್ಲದೆಯೇ ಮ್ಯಾನ್ಮಾರ್ನಲ್ಲಿನ ಅಶಾಂತಿಯನ್ನು ದೂಷಿಸುವುದು ‘ಅತ್ಯಂತ ದುರದೃಷ್ಟಕರ’ ಎಂದು ಕುಕಿ ಸಂಘಟನೆಗಳು ಹೇಳಿವೆ.
ಆಗಸ್ಟ್ 9ರಂದು ಲೋಕಸಭೆಯಲ್ಲಿ ಮಣಿಪುರ ಹಿಂಸಾಚಾರದ ಚರ್ಚೆಯ ಸಂದರ್ಭದಲ್ಲಿ ಶಾ, ಮ್ಯಾನ್ಮಾರ್ನಲ್ಲಿ 2021ರ ಮಿಲಿಟರಿ ದಂಗೆಯ ನಂತರ, ಕುಕಿ ಡೆಮಾಕ್ರಟಿಕ್ ಫ್ರಂಟ್ ಎಂಬ ಸಂಘಟನೆಯು ಮಿಲಿಟರಿ ನಾಯಕತ್ವದ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದೆ. ಆಗ್ನೇಯ ಏಷ್ಯಾದ ದೇಶದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಅನೇಕ ಕುಕಿಗಳು ತಮ್ಮ ಸುರಕ್ಷತೆಗಾಗಿ ಮಣಿಪುರಕ್ಕೆ ಪಲಾಯನ ಮಾಡಬೇಕಾಯಿತು. ಮ್ಯಾನ್ಮಾರ್ನ ವಲಸಿಗರಿಂದಾಗಿ ಬಹುಸಂಖ್ಯಾತ ಮೈತಿ ಸಮುದಾಯದಲ್ಲಿ ಆತಂಕ ಹೆಚ್ಚಾಯಿತು ಎಂದು ಗೃಹ ಸಚಿವರು ಹೇಳಿದ್ದಾರೆ.
ಮಣಿಪುರದ ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿರುವ ಮೈತೈಗಳು, ಅವರು ಎದುರಿಸುತ್ತಿರುವ ತೊಂದರೆಗಳಿಗೆ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಿ ಪ್ರಜೆಗಳ ದೊಡ್ಡ ಪ್ರಮಾಣದ ಅಕ್ರಮ ವಲಸೆಯನ್ನು ದೂಷಿಸುತ್ತಾರೆ.
ಷಾ ಅವರ ಹೇಳಿಕೆಗಳು ‘ಕಲ್ಪನೆಯ ಆಕೃತಿ’
ಮಣಿಪುರದಲ್ಲಿ ಅಶಾಂತಿ ಸೃಷ್ಟಿಯಾಗಲು ಮ್ಯಾನ್ಮಾರ್ನಿಂದ ಕುಕಿ ವಲಸಿಗರು ಕಾರಣರಾಗಿದ್ದಾರೆ ಎಂಬ ಷಾ ಅವರ ಹೇಳಿಕೆಗಳು ಹಲವಾರು ಕುಕಿ ಗುಂಪುಗಳು ಮತ್ತು ಶಾಸಕರನ್ನು ಕೆರಳಿಸಿದೆ.
ಸಚಿವರ ಭಾಷಣದ ಒಂದು ದಿನದ ನಂತರ, ರಾಜ್ಯಸಭೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸಂಸದ ಕೆ ವನ್ಲಾಲ್ವೆನಾ ಅವರಿಗೆ ಮಾತನಾಡಲು ಅವಕಾಶ ನೀಡದೆ ಅವರ ಮೈಕ್ ಅನ್ನು ಸ್ವಿಚ್ ಆಫ್ ಮಾಡಲಾಯಿತು. ಅವರು ಅಮಿತ್ ಶಾ ಅವರ ಹೇಳಿಕೆಗಳು ಕಪೋಕಲ್ಪಿತವಾಗಿವೆ ಎಂದು ಪ್ರತಿಪಾದಿಸಲು ಪ್ರಯತ್ನಿಸಿದರು.
ಕುಕಿ ಬುಡಕಟ್ಟು ಜನಾಂಗದವರ ಅತ್ಯುನ್ನತ ಸಂಸ್ಥೆಯಾದ ಕುಕಿ ಇನ್ಪಿ ಮಣಿಪುರ, ”ಶಾ ಅವರ ಹೇಳಿಕೆಯು ಊಹಾತ್ಮಕವಾಗಿದೆ. ತಮ್ಮ ಹೇಳಿಕೆಗಳು ಸತ್ಯ ಎಂದು ಹೇಳಲು ಅವರ ಬಳಿ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದರು.
”ಮಣಿಪುರದ ಪ್ರಸ್ತುತ ಹತ್ಯಾಕಾಂಡಕ್ಕೆ ಮಿಜೋರಾಂ ಕುಕಿಗಳ ವಲಸೆಗೂ ಯಾವುದೇ ಸಂಬಂಧವಿಲ್ಲ. ಮ್ಯಾನ್ಮಾರ್ನಿಂದ ಮಣಿಪುರಕ್ಕೆ ‘ಕುಕಿಗಳ ವಲಸೆ’ ಬರುತ್ತಿದ್ದಾರೆ ಎಂಬ ಮೈತಿಗಳಿಗೆ ಅಭದ್ರತೆ ಉಂಟಾಗಿದೆ ಎಂದು ಅತಿಯಾಗಿ ಪ್ರಚಾರಗೊಂಡಿದೆ” ಎಂದು ಅದು ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪೂರ್ವಾಗ್ರಹ ಪೀಡಿತ ಹೇಳಿಕೆಗಳು, ಸುಳ್ಳು ಆರೋಪಗಳು ಮತ್ತು ಕಪೋಲಕಲ್ಪಿತ ನಿರೂಪಣೆಗಳನ್ನು ಅಮಿತ್ ಶಾ ಅವರು ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತಿದ್ದಾರೆ. ಸಿಂಗ್ ಅವರು ಮೈತಿ “ಬಹುಮತ” ಭಾವನೆಗಳ ಪರವಾಗಿದ್ದಾರೆ ಎಂದು ಸಂಘಟನೆಯವರು ಆರೋಪಿಸಿದ್ದಾರೆ.
ಆಗಸ್ಟ್ 11 ರಂದು ಬಿಜೆಪಿಯ ಎಂಟು ಶಾಸಕರು ಸೇರಿದಂತೆ ಮಣಿಪುರದ ಎಲ್ಲಾ 10 ಕುಕಿ ಶಾಸಕರು ಕೂಡ ಶಾ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ. ಶಾ ಅವರು ತಮ್ಮ ಹೇಳಿಕೆಗಳಿಗೆ ಪುರಾವೆಗಳನ್ನು ಒದಗಿಸಬೇಕು ಎಂದು ಹೇಳಿದರು.
ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಕುರಿತು ಪರಿಗಣಿಸುವಂತೆ ಏಪ್ರಿಲ್ನಲ್ಲಿ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಮೈತಿ ಬೇಡಿಕೆಯನ್ನು ವಿರೋಧಿಸಿ ಮೇ 3 ರಂದು ಕುಕಿ ಬುಡಕಟ್ಟು ಸಮುದಾಯದವರು ರ್ಯಾಲಿ ಆಯೋಜಿಸಿದ್ದರು. ಈ ವೇಳೆ ಹಿಂಸಾಚಾರ ಆರಂಭವಾಯಿತು. ಅಂದಿನಿಂದ ಈವರೆಗೂ 187 ಜನರು ಸಾವಿಗೀಡಾಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುವಾಗ ಸಂಸತ್ತಿನಲ್ಲಿ ಹಾಸ್ಯ ಮಾಡುವುದು ಪ್ರಧಾನಿ ಹುದ್ದೆಗೆ ತಕ್ಕುದಲ್ಲ: ಮೋದಿಗೆ ಚಾಟಿ ಬೀಸಿದ ರಾಹುಲ್