ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ತೆಲಂಗಾಣದ ಆಡಳಿತಾರೂಢ ಬಿಆರ್ಎಸ್ ಪಕ್ಷವು ಸೋಮವಾರ ಎನ್ಡಿಎ ಸರ್ಕಾರದ ವೈಫಲ್ಯಗಳು ಮತ್ತು ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಕಿರುಪುಸ್ತಕ ಮತ್ತು ಸಿಡಿ ಬಿಡುಗಡೆ ಮಾಡಿದೆ.
ಬಿಆರ್ಎಸ್ ಕಾರ್ಯಾಧ್ಯಕ್ಷ ಮತ್ತು ರಾಜ್ಯ ಪೌರಾಡಳಿತ ಸಚಿವ ಕೆ ಟಿ ರಾಮರಾವ್ ಅವರು, ‘ಬಿಜೆಪಿಯ 100 ಸುಳ್ಳುಗಳು’ ಕಿರುಪುಸ್ತಕ ಮತ್ತು ಸಿಡಿ ಬಿಡುಗಡೆ ಮಾಡಿದ್ದಾರೆ.
ಪುಸ್ತಕತ ಹಾಗೂ ಸಿಡಿಯಲ್ಲಿನ ವಿಷಯಗಳನ್ನು ಬಿಆರ್ಎಸ್ನ ಸಾಮಾಜಿಕ ಮಾಧ್ಯಮ ವಿಭಾಗದಿಂದ ಒಟ್ಟುಗೂಡಿಸಲಾಗಿದೆ. ಬಿಜೆಪಿ ತನ್ನ ಭರವಸೆಗಳನ್ನು ಹೇಗೆ ನಿರಾಸೆಗೊಳಿಸಿದೆ ಮತ್ತು ನಿರುದ್ಯೋಗ, ಹಣದುಬ್ಬರ, ಜಿಎಸ್ಟಿ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ‘ಬಿಜೆಪಿಯ 100 ಸುಳ್ಳುಗಳು’ ಎನ್ನುವ ಕಿರುಪುಸ್ತಕ ಮತ್ತು ಸಿಡಿಸಿದ್ದಗೊಳಿಸಲಾಗಿದೆ.
ತೆಲಂಗಾಣಕ್ಕೆ ನೀಡಿದ ಭರವಸೆಗಳಲ್ಲಿ ಉಕ್ಕಿನ ಸ್ಥಾವರ ಮತ್ತು ರೈಲ್ವೇ ಕೋಚ್ ಫ್ಯಾಕ್ಟರಿ ಸ್ಥಾಪನೆಯಂತಹ ವಿಚಾರಗಳು, ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆ ಅನುಷ್ಠಾನಗೊಳಿಸುವ ವಿಚಾರ ಸೇರಿದ್ದು, ಈ ಎಲ್ಲ ಭರವಸೆಗಳನ್ನು ಪೂರೈಸುವಲ್ಲಿ ಬಿಜೆಪಿಯ “ವೈಫಲ್ಯ” ಕಂಡಿದೆ ಎಂದು ಈ ಅಭಿಯಾನದಲ್ಲಿ ಸೇರಿಸಲಾಗಿದೆ.
ತಮ್ಮ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗವನ್ನು ಶ್ಲಾಘಿಸಿದ ರಾಮರಾವ್, ಬಿಜೆಪಿಯ ವೈಫಲ್ಯಗಳನ್ನು ಕಿರುಪುಸ್ತಕ ಮತ್ತು ಸಿಡಿ ಮೂಲಕ ಗ್ರಾಮೀಣ ಜನರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು. ಈ ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ಕಿರುಪುಸ್ತಕ ಹಾಗೂ ಸಿಡಿ ಹೊರತಂದಿರುವುದು ಬಿಜೆಪಿಗೆ ಹಿನ್ನಡೆಯಾಗಲಿದೆ.
ಇದನ್ನೂ ಓದಿ: NEET ಪರೀಕ್ಷೆ ತಗೆದುಹಾಕುವ ಮಸೂದೆಗೆ ರಾಜ್ಯಪಾಲರ ಅನುಮತಿ ಬೇಕಿಲ್ಲ: ಸಚಿವ ಸುಬ್ರಮಣಿಯನ್