ಪ್ರಗತಿಪರ ಆಲೋಚನೆಗಳುಳ್ಳ ಗೆಳಯರು ಒಟ್ಟುಗೂಡಿ ‘ಜಾತಿ-ಮತ’ದ ಹಂಗಿಲ್ಲದೇ ವಿವಾಹವಾಗಲು ಬಯಸುವ ವಧು-ವರರಿಗೆ ಹೊಸ ‘ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ’ ಎಂಬ ವೇದಿಕೆಯೊಂದನ್ನು ಆರಂಭಿಸಿದ್ದಾರೆ.
ವಿವಾಹಕ್ಕೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಆದರೆ ಅದಕ್ಕೆ ಹಲವು ಕಟ್ಟುಕಟ್ಟಳೆಗಳೆಂಬ ಗೊಡ್ಡು ಸಂಪ್ರದಾಯದ ಸೋಂಕೂ ತಗುಲಿದೆ. ಜಾತಿ-ಮತವನ್ನು ಮೀರಿ ಎರಡು ಸಮಾನ ಮನಸ್ಸುಗಳು ವಿವಾಹವಾಗುವುದಕ್ಕೆ ನಮ್ಮಲ್ಲಿ ಇಂದಿನ ಪರಿಸ್ಥಿತಿಯಲ್ಲಿಯೂ ಅನೇಕ ಸವಾಲುಗಳನ್ನು ಎದುರಿಸಬೇಕಿದೆ.
ಹಾಗಾಗಿಯೇ ಅಂತರ್ಜಾತಿ ಮತ್ತು ಅಂತರ್ಧರ್ಮದ ವಿವಾಹಗಳ ಸಂಖ್ಯೆ ತಿರಾ ವಿರಳ. ಆದಾಗ್ಯೂ ಕೆಲವರು ಇದರಿಂದ ಹೊರಬಂದು ವಿವಾಹವಾಗುತ್ತಿದ್ದಾರೆ. ಆದರೆ ಅದೂ ಕೂಡ ಪ್ರೇಮವಿವಾಹವಾಗುವವರ ಸ್ವಯಿಚ್ಚೆಯಿಂದ ಮಾತ್ರ ಆಗುತ್ತಿದೆ. ಪೋಷಕರೇ ಸ್ವಯಂ ನಿರ್ಧಾರ ತೆಗೆದುಕೊಂಡು ಅಂತರ್ಜಾತಿ ಮತ್ತು ಅಂತರ್ಧರ್ಮದ ವಿವಾಹಗಳನ್ನು ಮಾಡುವುದಕ್ಕೆ ಇಂದಿಗೂ ಮುಕ್ತರಾಗಿಲ್ಲ.
ಇದನ್ನೂ ಓದಿ: ಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? – ಜಾನ್ ಡ್ರೀಜ್ ವಿಶೇಷ ಲೇಖನ
ಈ ಸಂದರ್ಭದಲ್ಲಿ, ಮೈಸೂರಿನ ಗೆಳಯರು ಕೈಗೊಂಡಿರುವ “ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿ” ಪ್ರಯತ್ನ ಅತ್ಯಂತ ಮಹತ್ವಪೂರ್ಣವೆನಿಸುತ್ತದೆ. ಯಾವುದೇ ಹಂಗಿಲ್ಲದೇ ಒಂದಾಗುವ ಮನಸ್ಸುಗಳಿಗೆ ವೇದಿಕೆಯೊಂದನ್ನು ಕಲ್ಪಿಸಿಕೊಡುವ ಕೆಲಸಕ್ಕೆ ಈಗಾಗಲೇ ಹಲವರಿಂದ ಮೆಚ್ಚುಗೆ ಸಿಕ್ಕಿದೆ.
ಇದರ ಕುರಿತು ನಾನುಗೌರಿ.ಕಾಂ ಗೆ ಪ್ರತಿಕ್ರಿಯೆ ನೀಡಿದ ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿಯ ಕಾರ್ಯದರ್ಶಿಯಾದ ಸಂದೀಪ್ ಈಶಾನ್ಯ, “ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗ, ಕೇವಲ ಜಾತಿ ಆಧರಿತ ಮ್ಯಾಟ್ರಿಮೋನಿಯಲ್ ಸೈಟ್ಗಳಿಗೆ ಪರ್ಯಾಯವಾಗಿ, ಜಾತಿ-ಮತಗಳನ್ನು ಮೀರಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೇದಿಕೆಯನ್ನು ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆ ಬಂದಿತ್ತು. ನಮಗೆ ಶಿಕ್ಷಕರಾಗಿದ್ದ ಕ್ರಾಂತಿರಾಜ್ ಒಡೆಯರ್ ಕೂಡ ನಮ್ಮ ಆಲೋಚನೆಗಳಿಗೆ ಕೈ ಜೋಡಿಸಿದ್ದರು. ಆದರೆ, ಕಾಲೇಜು ಮುಗಿಯುತ್ತಿದ್ದಂತೆ ಚರ್ಚೆಯಲ್ಲಿ ಭಾಗವಹಿಸಿದ್ದ ಗೆಳೆಯರು ಹೆಚ್ಚಿನ ಓದು ಮತ್ತು ಉದ್ಯೋಗದ ಕಾರಣಕ್ಕೆ ವಲಸೆ ಹೊಗಿದ್ದರು. ಸದ್ಯ ಎಲ್ಲರೂ ಮೈಸೂರಿಗೆ ಮರಳಿದ್ದೇವೆ. ಕ್ರಾಂತಿರಾಜ್ ಒಡೆಯರ್ ಸೇರಿದಂತೆ ನಾವು ಎಲ್ಲಾ ಗೆಳೆಯರು ಮತ್ತೊಮ್ಮೆ ಚರ್ಚಿಸಿ ನಮ್ಮ ಹಳೆಯ ಕನಸಿಗೆ ಮರು ಚಾಲನೆ ನೀಡುತ್ತಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ
“ಮೈಸೂರು ಮಹಾಜನ ಕಾಲೇಜಿನ ಹಳೆಯ ಗೆಳಯರು ಸೇರಿ, ಮನುಷ್ಯವಿರೋಧಿ ಬೇಲಿಗಳಿಂದ ಹೊರಗೆ ನಿಂತು ಜೀವನದೃಷ್ಟಿಗೆ ಹೊಂದುವ ಸಂಗಾತಿಯನ್ನು ಅಯ್ಕೆಮಾಡಿಕೊಳ್ಳುವ ವೇದಿಕೆ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಈ ಮ್ಯಾಟ್ರಿಮೋನಿಯನ್ನು ಆರಂಭಿಸಿದ್ದೇವೆ” ಎಂದು ಚೇಂಜ್ ಮೇಕರ್ಸ್ ಮ್ಯಾಟ್ರಿಮೋನಿಯ ಮುಖ್ಯ ಸಲಹೆಗಾರರಾದ ಕ್ರಾಂತಿರಾಜ್ ಒಡೆಯರ್ ಹೇಳಿದರು.
ಬೇರೆ ಜಾತಿಯ ಹುಡುಗ/ಹುಡುಗಿಯನ್ನು ಪ್ರೇಮಿಸಿದ್ದಕ್ಕೆ ಕೊಲ್ಲುತ್ತಿರುವ ಇಂದಿನ ಸಮಾಜದಲ್ಲಿ ಇಂತಹ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿರುವುದು ಸಮಾಧಾನಕರ ವಿಷಯವಾಗಿದೆ.
ಇದರ ಕುರಿತು ಹೆಚ್ಚಿನ ಮಾಹಿತಿಗೆ ಮತ್ತು ಈ ಮ್ಯಾಟ್ರಿಮೋನಿಗೆ ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಕೀಳು ನನ್ನ ‘ಜಾತಿ’ ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ…!