Homeಕರ್ನಾಟಕಭಾರತದ ಆರ್ಥಿಕತೆ - ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

- Advertisement -
- Advertisement -

ಪ್ರಸ್ತಾವನೆ

ಭಾರತವು ತನ್ನ 75ನೆಯ ವರ್ಷದ ಸ್ವಾತಂತ್ರ್ಯೋತ್ಸವವನ್ನು 2021-22ನೆಯ ವರ್ಷ ಪೂರ್ತಿ ಆಚರಿಸುತ್ತಿದೆ. ಈ 75 ವರ್ಷಗಳಲ್ಲಿ ನಾವು ಏನೆಲ್ಲ ಆರ್ಥಿಕವಾಗಿ ಸಾಧಿಸಿಕೊಂಡಿದ್ದೇವೆ, ಸವಾಲುಗಳನ್ನು ಎದುರಿಸಿದ್ದೇವೆ, ಸೋಲುಗಳನ್ನು ಅನುಭವಿಸಿದ್ದೇವೆ ಮುಂತಾದ ಸಂಗತಿಗಳ ಬಗ್ಗೆ ಮೌಲ್ಯಮಾಪನ ಮಾಡುವ ಅಗತ್ಯವಿದೆ. ಒಂದು ದೇಶದ ಚರಿತ್ರೆಯಲ್ಲಿ 75 ವರ್ಷ ಸಣ್ಣ ಕಾಲಾವಧಿಯೇನಲ್ಲ. ಪ್ರಸ್ತುತ ಪ್ರಬಂಧದಲ್ಲಿ 1991ರ ಆರ್ಥಿಕ ಸುಧಾರಣಾ ಪೂರ್ವದಲ್ಲಿನ ನಾಲ್ಕು ದಶಕಗಳ ಕಾಲಾವಧಿಯ ಆರ್ಥಿಕ ಸಾಧನೆಗಳನ್ನು ಹಾಗೂ 1991ರ ನಂತರದ ಮೂರು ದಶಕಗಳ ಖಾಸಗೀಕರಣ ಪ್ರಕ್ರಿಯೆಯಲ್ಲಿ ಆದ ಸಾಧನೆಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಎರಡನೆಯ ಸುಧಾರಣೋತ್ತರ ಕಾಲಾವಧಿಯನ್ನು ’ಖಾಸಗೀಕರಣದ ಕಾಲ’(1991-2014) ಮತ್ತು 2014ರ ನಂತರದ ’ಖಾಸಗೀಕರಣ-ಕಾರ್ಪೊರೆಟೀಕರಣದ ಆರಾಧನೆ’ಯ ಕಾಲ ಎಂದು ವರ್ಗೀಕರಿಸಿಕೊಂಡು ಇಲ್ಲಿ ಚರ್ಚೆ ಮಾಡಲಾಗಿದೆ.

ಖಾಸಗೀಕರಣ ಮತ್ತು ಖಾಸಗೀಕರಣ ಆರಾಧನೆಗಳ ನಡುವಿನ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಉದಾ: 2019-2020ರ ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದ ಶೀರ್ಷಿಕೆ ಹೀಗಿದೆ: ’ಪಥ ಬದಲಾವಣೆ: ಬೇಡಿಕೆ, ಬೆಳವಣಿಗೆ, ಉದ್ಯೋಗ ಮತ್ತು ರಫ್ತುಗಳ ಹಿಂದಿನ ಚಾಲಕ ಶಕ್ತಿ – ಖಾಸಗಿ ಬಂಡವಾಳ ಹೂಡಿಕೆ’. ವಿತ್ತ ಮಂತ್ರಿಗಳು 2020-21ರಲ್ಲಿನ ಬಜೆಟ್ ಭಾಷಣದಲ್ಲಿ ನೀಡಿದ ಹೇಳಿಕೆ ಹೀಗಿದೆ: ಸಂಪನ್ಮೂಲ ಸಂಗ್ರಹಕ್ಕೆ ಮೊದಲು ನಾವು ತೆರಿಗೆ ಪಾವತಿ ಕ್ಷಮತೆಯನ್ನು ಉತ್ತಮಪಡಿಸುವುದರ ಮೂಲಕ ಅವುಗಳ ಹಿಗ್ಗುವಿಕೆಯನ್ನು ಹೆಚ್ಚಿಸುವುದು, ಎರಡನೆಯದಾಗಿ ಆಸ್ತಿಗಳ ಮಾನಿಟೈಸೇಶನ್ (ಮಾರಾಟದಿಂದ)ನಿಂದ ಮತ್ತು ಸಾರ್ವಜನಿಕ ಉದ್ದಿಮೆಗಳು ಹಾಗೂ ಭೂಮಿಯ ಮಾರಾಟದಿಂದ ಹೆಚ್ಚು ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳುವುದು. ಪ್ರಧಾನಮಂತ್ರಿಗಳು 2019ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಖಾಸಗಿ ಉದ್ದಿಮೆದಾರರ ಬಗ್ಗೆ ಹೀಗೆ ಹೇಳುತ್ತಾರೆ: ’ಜನರು ವೆಲ್ಥ್ ಕ್ರಿಯೇಟರ್‍ಸ್‌ಗಳನ್ನು ಅನುಮಾನದಿಂದ ನೋಡಬಾರದು. ಅವರಿಗೆ ಗೌರವ ನೀಡಬೇಕು. ಈ ನೀತಿಯನ್ನು ’ಖಾಸಗೀಕರಣದ ಆರಾಧನೆ’ ಎನ್ನದೆ ಮತ್ತೇನು ಹೇಳಲು ಬರುತ್ತದೆ?

ನಾವು ನಮ್ಮ 75ನೆಯ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿರುವಾಗ ಕಳೆದ 75 ವರ್ಷಗಳಲ್ಲಿ ಭಾರತ ಕಾಯ್ದುಕೊಂಡು ಬಂದಿರುವ ವಿಶಿಷ್ಟತೆಗಳನ್ನು ಗುರುತಿಸುವುದು ಸೂಕ್ತ. ಮೊದಲನೆಯದಾಗಿ ಭಾರತವು ಏನೆಲ್ಲ ರಾಜಕೀಯ ಏಳುಬೀಳುಗಳನ್ನು ಅನುಭವಿಸಿದರೂ ತನ್ನೆಲ್ಲ ಇತಿಮಿತಿಗಳ ನಡುವೆ ಪ್ರಜಾಪ್ರಭುತ್ವವನ್ನು ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ನಿಜ, ಇದಕ್ಕೆ 1975-77ರಲ್ಲಿನ ತುರ್ತು ಪರಿಸ್ಥಿತಿಯಲ್ಲಿ ಅಪಾಯ ಬಂದಿತ್ತು. ಅದನ್ನು ನಾವು ಗೆದ್ದಿದ್ದೇವೆ. ಈಗ 2014ರ ನಂತರ ಮತ್ತೆ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಅಪಾಯ ಉಂಟು ಮಾಡುಬಹುದಾದ ಸರ್ವಾಧಿಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಈ ಕೋಮುವಾದೀಕೃತ ಸರ್ವಾಧಿಕಾರಿ ಬೆಳವಣಿಗೆಗೆ ಜನರು ತಮ್ಮದೇ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿದ್ದಾರೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಹೆಗ್ಗುರುತಾಗಿದೆ. ಎರಡನೆಯದಾಗಿ ಸುಧಾರಣಾಪರ್ವದಲ್ಲಿ ಹಾಗೂ ಸುಧಾರಣೋತ್ತರ ಕಾಘಟ್ಟಗಳಲ್ಲಿ ಯಾವುದೆ ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ, ಬಡತನ ನಿವಾರಣೆಯ ಗುರಿಯನ್ನು ನಿರ್ಲಕ್ಷಿಸಲು ಸಾಧ್ಯವಾಗದಂತೆ ದೇಶ ನೋಡಿಕೊಂಡಿದೆ. ನಿಜ, 2014ರ ನಂತರ ಆಳುವ ಪಕ್ಷ/ಸರ್ಕಾರ ಬಡತನ ನಿವಾರಣೆಗೆ ಪ್ರಯತ್ನ ನಡೆಸುವುದಿರಲಿ, ಅದರ ಬಗ್ಗೆ ಮಾತನಾಡಲು ಸಿದ್ಧವಿಲ್ಲ ಎಂಬುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು.

ಉದಾ: ಖಾಸಗೀಕರಣ ಪರ್ವವನ್ನು ಉದ್ಘಾಟಿಸಿದ ಡಾ. ಮನಮೋಹನ್‌ಸಿಂಗ್ ಸರ್ಕಾರವು 2006ರಲ್ಲಿ ಆರಂಭಿಸಿದ ಉದ್ಯೋಗ ಹಕ್ಕಿನ (ಎಂಜಿ) ಎನ್‌ಆರ್‌ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮ ಉದ್ಯೋಗ ಖಾತ್ರಿ ಯೋಜನೆ) ಕಾರ್ಯಕ್ರಮವನ್ನು ಹತ್ತಿಕ್ಕಲು 2014ರ ನಂತರ ಆಳುವ ಸರ್ಕಾರ ಏನೆಲ್ಲ ಪ್ರಯತ್ನಿಸಿದರೂ ಮತ್ತು ಇಂದಿನ ಪ್ರಧಾನಮಂತ್ರಿ ಇದನ್ನು ’ಮಾನ್ಯುಮೆಂಟಲ್ ಫೈಲ್ಯೂರ್’ ಎಂದು ಟೀಕಿಸಿದರೂ ಅದನ್ನು ಸಮಾಪ್ತಿಗೊಳಿಸಲು ಸಾಧ್ಯವಾಗಿಲ್ಲ. ನಿರಂತರವಾಗಿ ಬಡತನ ನಿವಾರಣೆಯನ್ನು ಒಂದು ಗುರಿಯನ್ನಾಗಿಟ್ಟುಕೊಂಡು ಬರಲಾಗಿದೆ. ಅದರಲ್ಲಿ ನಮ್ಮ ಸಾಧನೆ ಎಷ್ಟು ಎಂಬುದರ ಬಗ್ಗೆ ಭಿನ್ನಾಭಿಪ್ರಾಯ ಸಾಧ್ಯ. ನಮ್ಮ ದೇಶದಲ್ಲಿ ಆರಂಭದಿಂದಲೂ ಲಿಂಗ ಸಮಾನತೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ವಿರೋಧವಿಲ್ಲದಿದ್ದರೂ ಅದಕ್ಕೆ ಪ್ರಜ್ಞಾಪೂರ್ವಕ ಆದ್ಯತೆ ದೊರೆತಿಲ್ಲ ಎಂಬುದು ಸತ್ಯ.

ಆದರೆ 2014ರ ನಂತರ ಅಧಿಕಾರ ಹಿಡಿದಿರುವ ಸರ್ಕಾರವು ’ಮಹಿಳೆಯರ ಕಾರ್ಯಕ್ಷೇತ್ರವೇನಿದ್ದರೂ ’ಮನೆ-ಗಂಡ-ಮಕ್ಕಳು’ ಎಂದು ಸ್ತ್ರೀವಿರೋಧಿ ಪ್ರಣಾಳಿಕೆಯನ್ನು ಬೋಧಿಸುವ ಬೃಹತ್ ಸಂಘಟನೆಯೊಂದರ ಅನುಯಾಯಿ ಎಂಬುದನ್ನು ಮರೆಯುವ ಹಾಗಿಲ್ಲ. ಆದರೆ 1991ಕ್ಕೆ ಪೂರ್ವದಲ್ಲಿ ಇಂತಹ ಸ್ತ್ರೀಸ್ವಾತಂತ್ರ್ಯ ವಿರೋಧಿ ನಿಲುವು ಸರ್ಕಾರದ ಮಟ್ಟದಲ್ಲಿ ಬಹಿರಂಗವಾಗಿರಲಿಲ್ಲ. ಮೂರನೆಯದಾಗಿ ಜಗತ್ತಿನಲ್ಲಿಯೇ ವಿಶಿಷ್ಟವಾದ ಮಿಶ್ರ ಆರ್ಥಿಕ ಪದ್ಧತಿಯನ್ನು ಅಭಿವೃದ್ಧಿಗಾಗಿ ನಾವು ಅಳವಡಿಸಿಕೊಂಡು ಬಂದಿದ್ದೇವೆ. ಅದರ ಇತಿಮಿತಿಗಳೇನೇ ಇರಲಿ, ಅದು ಅಭಿವೃದ್ಧಿಶೀಲ ಆರ್ಥಿಕತೆಗೆ ಅಗತ್ಯವಾದ ಸಮತೋಲನದ ವ್ಯವಸ್ಥೆಯಾಗಿದೆ. ಸುಧಾರಣೋತ್ತರ ಕಾಲಘಟ್ಟದಲ್ಲಿಯೂ ಅದಕ್ಕೆ ಅಪಾಯ ತಟ್ಟಿರಲಿಲ್ಲ. ಆದರೆ ’ಖಾಸಗೀಕರಣ ಆರಾಧನಾ’ ಪರ್ವವಾದ 2014ರ ನಂತರದ ಕಾಲಘಟ್ಟದಲ್ಲಿ ಇದನ್ನು ಸರ್ಕಾರ ತಿರಸ್ಕರಿಸುತ್ತಿರುವುದು ಕಂಡುಬರುತ್ತದೆ. ಇದು ಅಷ್ಟು ಸುಲಭವಲ್ಲ.

ಆರ್ಥಿಕ ನಿರ್ಮಾಣದ ಪರ್ವ: 1950-1991

ಈ ಕಾಲಾವಧಿಯನ್ನು ’ಲೈಸೆನ್ಸ್-ಪರ್ಮಿಟ್ ರಾಜ್’ ಎಂದು ಚಕ್ರವರ್ತಿ ರಾಜಗೋಪಾಲಚಾರಿ ಅವರು ಬಣ್ಣಿಸಿದ್ದು ಎಲ್ಲರಿಗೂ ತಿಳಿದಿದೆ. ಈ ಟೀಕೆಯು ’ಸರ್ಕಾರಿ ನಿಯಂತ್ರಣ’ ವಿಪರೀತವಾಗಿದ್ದುದ್ದನ್ನು ಸೂಚಿಸುತ್ತದೆ. ಈ ಟೀಕೆಯಲ್ಲಿ ನಿಜಾಂಶವಿದ್ದರೂ ಆರ್ಥಿಕತೆಯನ್ನು ಕಟ್ಟುವ ಆರಂಭದ ಸಂದರ್ಭದಲ್ಲಿ ಇಂತಹ ನಿಯಂತ್ರಣ ಕ್ರಮಗಳು ಅಗತ್ಯವಾಗಿದ್ದವು. ಅವುಗಳು ಅತಿಯಾದಾಗ ಅಭಿವೃದ್ಧಿಗೆ ಕಂಟಕವನ್ನು ಉಂಟುಮಾಡುತ್ತವೆ. ಈ ಕಾಲಾವಧಿಯಲ್ಲಿ ದೇಶವು ಎಲ್ಲವನ್ನೂ ಆರಂಭದಿಂದ ಕಟ್ಟಬೇಕಾಗಿತ್ತು. ನೌಕರಶಾಹಿ, ಜಮೀನ್ದಾರಿ ವ್ಯವಸ್ಥೆ, ಅನಕ್ಷರತೆ, ಕೃಷಿ ಹಿಂದುಳಿದಿರುವಿಕೆ, ಕಂದಾಚಾರ, ಜನಸಂಖ್ಯಾ ಆಸ್ಫೋಟ, ಹಣದುಬ್ಬರ ಮುಂತಾದ ಅನೇಕ ಸಮಸ್ಯೆಗಳನ್ನು ಆರ್ಥಿಕತೆ ಎದುರಿಸಬೇಕಾಯಿತು. ಈ ಕಾಲಾವಧಿಯಲ್ಲಿ ಆರ್ಥಿಕತೆಯು ಅದ್ಭುತ ರೀತಿಯಲ್ಲಿ ಬೆಳೆಯದಿದ್ದರೂ ಗೌರವಯುತವಾದ ರೀತಿಯಲ್ಲಿ ಬೆಳವಣಿಗೆಯನ್ನು ನಾವು ಸಾಧಿಸಿಕೊಂಡಿದ್ದಿದೆ. ಇದನ್ನು ಕೋಷ್ಟಕದಲ್ಲಿ ನೀಡಲಾಗಿದೆ.

ಈ ಕಾಲಘಟ್ಟದ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ(1965-1961) ಭಾರಿ ಕೈಗಾರಿಕಿರಣಕ್ಕೆ ಆದ್ಯತೆ ನೀಡಿದ್ದರಿಂದ, ಆಮದಿಗೆ ಆಂತರಿಕ ಪರ್ಯಾಯ ಉತ್ಪಾದನೆ ನೀತಿಯನ್ನು ಅನುಸರಿಸಿದ್ದರಿಂದ ದೇಶ ತೀವ್ರ ವಿದೇಶಿ ವಿನಿಮಯ ಕೊರತೆಯ ಸಮಸ್ಯೆಯನ್ನು ಎದುರಿಸಬೇಕಾಯಿತು. ಭಯಾನಕ ಬರಗಾಲ, ಯುದ್ಧಗಳು, ಆಹಾರೋತ್ಪಾದನೆಯಲ್ಲಿನ ಕುಸಿತ ಮುಂತಾದ ಸಮಸ್ಯೆಗಳ ನಡುವೆಯೂ ಆರ್ಥಿಕತೆಯ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದು ಯಶಸ್ವಿಯಾಗಿದ್ದೇವೆ. ಉದಾ: ಆಹಾರೋತ್ಪಾದನೆಯು 1960-61ರಲ್ಲಿ 82 ಮಿಲಿಯನ್ ಟನ್ನುಗಳಷ್ಟಿದ್ದುದು 1965-66ರಲ್ಲಿ 72.4 ಮಿಲಿಯನ್ ಟನ್ನುಗಳಿಗೆ ಮತ್ತೆ 1970-71ರಲ್ಲಿ 108.4 ಮಿಲಿಯನ್ ಟನ್ನುಗಳಿಗೆ ಏರಿಕೆಯಾಯಿತು. ಮುಂದೆ 1990-91ರಲ್ಲಿ ಆಹಾರದ ಉತ್ಪಾದನೆಯು 176.4 ಮಿಲಿಯನ್ ಟನ್ನುಗಳಷ್ಟಾಯಿತು. ಹಸಿರುಕ್ರಾಂತಿಯಿಂದ ಆಹಾರವನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತವು ಅದನ್ನು ರಫ್ತು ಮಾಡುವ ದೇಶವಾಗಿ ಮಾರ್ಪಟ್ಟಿತು. ಹೀಗೆ ಸುಧಾರಣಾ-ಪೂರ್ವ ಆರ್ಥಿಕ ಸಾಧನೆಯನ್ನು ಯಾವುದೇ ಕಾರಣಕ್ಕೂ ಹೀಗಳೆಯಲು ಬರುವುದಿಲ್ಲ.

ಅನೇಕರು ಟೀಕಿಸುವಂತೆ ಸದರಿ ಕಾಲಘಟ್ಟವು ಆರ್ಥಿಕ ಮಹಾವೈಫಲ್ಯದ ಪರ್ವವೇನಾಗಿರಲಿಲ್ಲ. ಈ ಅವಧಿಯಲ್ಲಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತಹ ಆರ್ಥಿಕ ಸಾಧನೆಯನ್ನು ’ಹಿಂದೂ ಬೆಳವಣಿಗೆ ದರ’ ಎಂದೂ ಟೀಕಿಸಲಾಗಿದೆ. ಕೋಷ್ಟಕದಲ್ಲಿ ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟಗಳಲ್ಲಿನ ಜಿಡಿಪಿ ಬೆಳವಣಿಗೆ ದರಗಳ ವಿವರವನ್ನು ನೀಡಲಾಗಿದೆ. ಇದು ಏನನ್ನು ತೋರಿಸುತ್ತದೆ? ಈ ಮೂರು ಕಾಲಘಟ್ಟಗಳಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ತೀವ್ರ ವ್ಯತ್ಯಾಸಗಳೇನು ಕಂಡುಬರುವುದಿಲ್ಲ. ಮೊದಲ ಘಟ್ಟದಲ್ಲಿ ನಾವು ಆರ್ಥಿಕತೆಗೆ ಅಗತ್ಯವಾದ ಮೂಲಸೌಲಭ್ಯಗಳಾದ ವಿದ್ಯುತ್ ಸ್ಥಾವರ, ಅಣೆಕಟ್ಟೆಗಳು, ಭಾರಿ ಉದ್ದಿಮೆಗಳು, ಸಂಶೋಧನಾ ಕೇಂದ್ರಗಳು, ಆರೋಗ್ಯ ವ್ಯವಸ್ಥೆ, ಶಿಕ್ಷಣ, ರೈಲು-ರಸ್ತೆ ಸಾರಿಗೆ ಮುಂತಾದ ಸಂಗತಿಗಳ ನಿರ್ಮಾಣಕ್ಕೆ ಒತ್ತುಕೊಟ್ಟಿದ್ದೇವೆ.

ನಮ್ಮ ಆರ್ಥಿಕತೆಗೆ ಅತ್ಯವಶ್ಯಕವಾಗಿದ್ದ ಆರ್ಥಿಕ ಅಡಿಪಾಯವನ್ನು ಸದರಿ ಕಾಲಘಟ್ಟದಲ್ಲಿ ನಿರ್ಮಿಸಲಾಯಿತು. ಈ ಅಡಿಪಾಯದ ಮೇಲೆ ಇಂದು ನಮ್ಮ ಆರ್ಥಿಕತೆಯ ಸೌಧವು ನಿಂತಿದೆ. ಇಂದು ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಬಗ್ಗೆ ನಾವು ಹೆಮ್ಮೆಪಡುತ್ತಿದ್ದರೆ ಇದರ ಕೀರ್ತಿಯು ಸುಧಾರಣಾ ಪೂರ್ವದ ಕಾಲಘಟ್ಟದಲ್ಲಿ ನಿರ್ಮಾಣ ಮಾಡಿದ ಆರ್ಥಿಕ ಅಡಿಪಾಯಕ್ಕೆ ಸಲ್ಲಬೇಕು. ಈ ಕಾಲಘಟ್ಟದಲ್ಲಿ ಸಾರ್ವಜನಿಕ ವಲಯಕ್ಕೆ ಮುಂಚೂಣಿ ಪಾತ್ರ ನೀಡಲಾಗಿತ್ತು, ನಿಜ. ಆದರೆ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದ ಭಾರತದಲ್ಲಿ ಅಂದು ಖಾಸಗಿ ವಲಯವನ್ನು ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತೇ ವಿನಾ ಅದನ್ನು ನಿಷೇಧಿಸಿರಲಿಲ್ಲ.

ಬಡತನ ನಿವಾರಣೆ ಮತ್ತು ಸಂಪತ್ತಿನ ಕೇಂದ್ರೀಕರಣ ಹಾಗೂ ವರಮಾನದಲ್ಲಿನ ಅಸಮಾನತೆಯನ್ನು ತಡೆಯುವ ಕ್ರಮಗಳನ್ನು ಸಂವಿಧಾನದ ಭಾಗ 4ರ ಪರಿಚ್ಛೇದ 38ರ ಸೆಕ್ಷನ್ 2 ರಾಜ್ಯ ನಿರ್ದೇಶನ ತತ್ವದ ಅನುಷ್ಠಾನಕ್ಕೆ ತೀವ್ರ ಗಮನ ನೀಡಲಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸುವುದರ ಜೊತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಸಮಾಜದಲ್ಲಿ ಬೆಳೆಸುವುದಕ್ಕೆ ಇಲ್ಲಿ ಗಮನ ನೀಡಲಾಗಿತ್ತು.

ಖಾಸಗೀಕರಣ-ಉದಾರೀಕರಣ ಪರ್ವ: 1991-2014

ನಮ್ಮ ಆರ್ಥಿಕತೆಯಲ್ಲಿ ಉದಾರೀಕರಣ-ಖಾಸಗೀಕರಣ-ಮಾರ್ಕೆಟ್ಟೀಕರಣ ನೀತಿಯನ್ನು 1991ರಲ್ಲಿ ಜಾರಿಗೆ ತರಲಾಯಿತು. ಈ ಕ್ರಮದಿಂದಾಗಿ ಮಹಾ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದ ಆರ್ಥಿಕತೆಯನ್ನು ಮುಕ್ತಗೊಳಿಸುವುದು ಸಾಧ್ಯವಾಯಿತು. ದೇಶದ ಜಿಡಿಪಿಯ ಬೆಳವಣಿಗೆ ದರವು ಉನ್ನತಮಟ್ಟಕ್ಕೆ ಏರಿಕೆಯಾಯಿತು. ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಈ ಕಾಲಾವಧಿಯಲ್ಲಿ ಖಾಸಗೀಕರಣ, ಅನಿಯಂತ್ರಣ, ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆತ ಮುಂತಾದವು ’ಅತಿ’ ಎನ್ನುವ ಪ್ರಮಾಣದಲ್ಲಿ ಜಾರಿಗೊಳ್ಳಲಿಲ್ಲ. ’ನಿಯಂತ್ರಣ’ ಕ್ರಮಗಳನ್ನು ಪ್ರಜ್ಞಾಪೂರ್ವಕವಾಗಿ ಪಾಲಿಸುವುದರ ಮೂಲಕ 2008-09ರಲ್ಲಿ ಉಂಟಾಗಿದ್ದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮಗಳನ್ನು ತಡೆಯುವುದು ನಮಗೆ ಸಾಧ್ಯವಾಯಿತು. ಖಾಸಗೀಕರಣ-ಕಾರ್ಪೊರೆಟೀಕರಣವು ಏಕಸ್ವಾಮ್ಯ ಸ್ವರೂಪವನ್ನು ತಳೆಯುವುದಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಈ ಕಾಲಘಟ್ಟದಲ್ಲಿ ಮಹತ್ವದ ಸಾಧನೆಯೆಂದರೆ ಬಡತನರೇಖೆಯಿಂದ ಅಪಾರ ಸಂಖ್ಯೆಯಲ್ಲಿ ಜನರನ್ನು ಮೇಲಕ್ಕೆತ್ತಿದ್ದಾಗಿದೆ. ಉದಾ: 1993-94ರಲ್ಲಿ ಬಡತನದ ರೇಖೆ ಕೆಳಗಿದ್ದ ಬಡವರ ಪ್ರಮಾಣ ಶೇ.45.

ಇದು 2004-05ರಲ್ಲಿ ಶೇ.37.2ಕ್ಕೆ ಮತ್ತು 2011-12ರಲ್ಲಿ ಶೇ.22ಕ್ಕಿಳಿದಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲ ಬಾರಿಗೆ ಒಟ್ಟು ಉಳಿತಾಯ ಪ್ರಮಾಣವು 2010-11ರಲ್ಲಿ ಜಿಡಿಪಿಯ ಶೇ.36ರಷ್ಟಾಯಿತು. ವಿಜ್ಞಾನ-ತಂತ್ರಜ್ಞಾನದ ಮಾನವ ಸಂಪನ್ಮೂಲದಲ್ಲಿ ಜಗತ್ತಿನಲ್ಲಿ ಭಾರತ ಮೂರನೆಯ ಸ್ಥಾನ ಗಳಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಭಾರತವು 1970ರ ದಶಕದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯು ಅನುಕರಣೀಯವಾದುದಾಗಿದೆ.

ಖಾಸಗೀಕರಣದ ಆರಾಧನೆ ಘಟ್ಟ: 2014ರ ನಂತರ

ನಮ್ಮ ಆರ್ಥಿಕತೆಯಲ್ಲಿ ಖಾಸಗಿ ವಲಯವು 1950ರಿಂದಲೂ ಕ್ರಿಯಾಶೀಲವಾಗಿದೆ. ಇದಕ್ಕೆ 1991ರಲ್ಲಿ ದೇಶವು ಜಾರಿಗೊಳಿಸಿದ ಉದಾರವಾದ-ಜಾಗತೀಕರಣಗಳನ್ನು ಒಳಗೊಂಡ ಹೊಸ ಆರ್ಥಿಕ ನೀತಿ ಜಾರಿಗೆ
ಬಂದಮೇಲೆ ತೀವ್ರ ಚಾಲನೆ ದೊರೆಯಿತು. ಆದರೆ 1991ರಿಂದ 2014ರವರೆಗೆ ಅದು ಖಾಸಗೀಕರಣದ ಆರಾಧನೆಯಿರಲಿಲ್ಲ. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ಖುಲ್ಲಂಖುಲ್ಲಾ ಆರ್ಥಿಕತೆಯನ್ನು ಸಂಪೂರ್ಣವಾಗಿ ಖಾಸಗೀಕರಣಕ್ಕೆ-ಕಾರ್ಪೊರೆಟೀಕರಣಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿದೆ. ಉದಾ: ಲಾಗಾಯ್ತಿನಿಂದ ನಮ್ಮಲ್ಲಿ ಕೃಷಿಯು ಖಾಸಗಿ ರೈತರ ವಶದಲ್ಲಿತ್ತು. ಈಗ ಒಕ್ಕೂಟ ಸರ್ಕಾರವು ಕೃಷಿ ಕ್ಷೇತ್ರವನ್ನು ಕಾರ್ಪೋರೆಟೀಕರಣಕ್ಕೆ ಒಳಪಡಿಸಲು ಕರಾಳ ಕೃಷಿ ಕಾಯಿದೆಗಳನ್ನು ತಂದಿದೆ. ಇವುಗಳ ವಿರುದ್ಧ ಕಳೆದ 8-9 ತಿಂಗಳುಗಳಿಂದ ರೈತರು ದೇಶದಾದ್ಯಂತ ಚಳುವಳಿ ನಡೆಸುತ್ತಿದ್ದಾರೆ.

ಈ ಅರಾಧನೆ ಪರ್ವದಲ್ಲಿ ಖಾಸಗಿ ವಲಯವು ಏಕಸ್ವಾಮ್ಯ ರೀತಿಯಲ್ಲಿ ಬೆಳೆಯಲು ಸರ್ಕಾರ ಅನುವು ಮಾಡಿಕೊಡುತ್ತಿದೆ. ಈ ಕಾಲಘಟ್ಟದಲ್ಲಿ ಅಭಿವೃದ್ದಿ, ವಿಜ್ಞಾನ-ತಂತ್ರಜ್ಞಾನ, ಸಮಾನತೆ ಮೌಲ್ಯ, ಬಡತನ ನಿವಾರಣೆ ಕಾರ್ಯಕ್ರಮಗಳು ಹಿಂದೆ ಸರಿದು ಧಾರ್ಮಿಕ-ಕೋಮು ಸಂಗತಿಗಳು ಮುಂಚೂಣಿಗೆ ಬಂದಿವೆ. ಗುಡಿ ನಿರ್ಮಿಸುವುದು ಸರ್ಕಾರದ ಕಾರ್ಯಕ್ರಮವಾಗಿದೆ ಎಂದರೆ ಅಭಿವೃದ್ಧಿ ಮೂಲೆ ಸೇರಿರುವುದನ್ನು ಅಥ ಮಾಡಿಕೊಳ್ಳಬಹುದು. ಉದಾ: ಅಯೋಧ್ಯೆಯಲ್ಲಿ ಪ್ರಧಾನಮಂತ್ರಿಗಳು ಯಜ್ಞ ಕುಂಡದ ಮುಂದೆ ಕುಳಿತು ಬೆಂಕಿಗೆ ಅನ್ನ, ಬಟ್ಟೆ, ತುಪ್ಪ ಮುಂತಾದವುಗಳನ್ನು ಸುರಿಯುತ್ತಾರೆಂದರೆ ಅಲ್ಲಿ ಜಾತ್ಯತೀತತೆಯ ಪ್ರಜಾಪ್ರಭುತ್ವವು ಉಳಿಯುವುದು ಸಾಧ್ಯವೇ? ಈ ಹಿಂದೆ ಸುಧಾರಣಾ-ಪೂರ್ವ (1951-1991) ಮತ್ತು ಸುಧಾರಣೋತ್ತರ ಖಾಸಗೀಕರಣ (1991-2014) ಪರ್ವದಲ್ಲಿ ಭಾರತದ ಯಾವ ಪ್ರಧಾನಮಂತ್ರಿಯೂ ಅಧಿಕೃತವಾಗಿ ಸರ್ಕಾರದಮಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿದರ್ಶನಗಳಿಲ್ಲ. ಅಣೆಕಟ್ಟೆ, ಕಾರ್ಖಾನೆ, ವಿದ್ಯುಚ್ಛಕ್ತಿ ಸ್ಥಾವರ, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಬಾಹ್ಯಾಕಾಶ ಸಂಶೋಧನೆ ಮುಂತಾದ ಆರ್ಥಿಕತೆ ಕಟ್ಟುವ ಕರ್ಮಗಳಿಗೆ 2014ಕ್ಕೆ ಹಿಂದೆ ಹೆಚ್ಚು ಆದ್ಯತೆಯಿತ್ತು. ಈಗ ಬಡತನ ನಿವಾರಣೆ, ಸಮಾನತೆ, ದಲಿತರ-ಆದಿವಾಸಿಗಳ ಅಭಿವೃದ್ಧಿ, ಮಹಿಳಾ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ನೀತಿಗಳನ್ನು, ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಿರಲಿ ಅವುಗಳ ಬಗ್ಗೆ ಮಾತನಾಡುವುದಕ್ಕೂ ಇಂದಿನ ಸರ್ಕಾರ ಸಿದ್ಧವಿಲ್ಲ.

ಖಾಸಗೀಕರಣ ಆರಾಧನೆಗೆ ಅಪ್ಪಟ ನಿದರ್ಶನ: ಆರೋಗ್ಯ ವ್ಯವಸ್ಥೆಯ ಖಾಸಗೀಕರಣ

ಕಳೆದ 75 ವರ್ಷಗಳಲ್ಲಿ ನಾವು ನಿರ್ಮಿಸಿರುವ ಆರೋಗ್ಯ ವ್ಯವಸ್ಥೆಯು ಎಷ್ಟೊಂದು ದುರ್ಬಲವಾಗಿದೆ ಎಂಬುದು ಕೋವಿಡ್ ಪೆಂಡಮಿಕ್ ಸಂದರ್ಭದಲ್ಲಿ ಬಹಿರಂಗವಾಯಿತು. ಇಂತಹ ವ್ಯವಸ್ಥೆಯನ್ನು ಈಗ ಖಾಸಗಿ ವಲಯಕ್ಕೆ ನೀಡಲು ಒಕ್ಕೂಟ ಸರ್ಕಾರ ಸಿದ್ಧವಾಗಿರುವಂತೆ ಕಾಣುತ್ತದೆ. ಈ ಬಗ್ಗೆ 2020-21ರ ಬಜೆಟ್ಟಿನಲ್ಲಿ ಸೂಚನೆ ನೀಡಲಾಗಿದೆ. ನೀತಿ ಆಯೋಗವು ಇದರ ಬಗ್ಗೆ ಒಂದು ಯೋಜನೆಯನ್ನು ಸಿದ್ಧಪಡಿಸಿದೆ. ಈ ನೀತಿಯ ಪ್ರಕಾರ ಜಿಲ್ಲಾಮಟ್ಟದಲ್ಲಿನ ಆಸ್ಪತ್ರೆಗಳ ಒಂದು ಭಾಗದಲ್ಲಿ ಖಾಸಗಿ ಅಸ್ಪತ್ರೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇಲ್ಲಿ ಖಾಸಗಿ ವ್ಯವಸ್ಥೆಗೆ ಬಿಟ್ಟುಕೊಟ್ಟ ಸಾರ್ವಜನಿಕ ಆಸ್ಪತ್ರೆಯ ಭಾಗದಲ್ಲಿ ಮೂಲಭೂತ ವ್ಯವಸ್ಥೆಯನ್ನು ನಿರ್ಮಿಸಲು ರಾಜ್ಯ ಸರ್ಕಾರಗಳು ಹಣ ನೀಡಬೇಕಾಗುತ್ತದೆ. ಇದನ್ನು ವಿತ್ತ ಮಂತ್ರಿಗಳು ’ವೈಯಬಿಲಿಟಿ ಗ್ಯಾಪ್ ಫಂಡಿಂಗ್’ ಎಂದು ಕರೆದಿದ್ದಾರೆ.

ಇದನ್ನು ನಾವು ಆರೋಗ್ಯ ವ್ಯವಸ್ಥೆಯ ಸಂಪೂರ್ಣ ಖಾಸಗೀಕರಣ ಎಂದು ಹೇಳಬಹುದು. ಸುಧಾರಣಾಪೂರ್ವ ಹಾಗೂ ಸುಧಾರಣೋತ್ತರ ಖಾಸಗೀಕರಣ ಪರ್ವದಲ್ಲಿ ಇಂತಹ ಜನ-ವಿರೋಧಿ ಕ್ರಮಗಳ ಬಗ್ಗೆ ಸರ್ಕಾರಗಳು ಪ್ರಯತ್ನ ನಡೆಸಿರಲಿಲ್ಲ. ಆದರೆ ಖಾಸಗೀಕರಣ ಆರಾಧನಾ ಪರ್ವದಲ್ಲಿ ಜನರ ಮೂಲಭೂತ ಅಗತ್ಯವಾದ ಆರೋಗ್ಯ ಸೇವೆಯನ್ನು ಖಾಸಗಿ ವಲಯಕ್ಕೆ ನೀಡಲಾಗುತ್ತಿರುವುದು ಅತ್ಯಂತ ಖಂಡನೀಯ ನೀತಿಗಾಗಿದೆ. ಮೇಲಾಗಿ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ನೀತಿ ರೂಪಿಸುವ ಅಧಿಕಾರವು ಒಕ್ಕೂಟ ಸರ್ಕಾರಕ್ಕೂ ಇಲ್ಲ ಮತ್ತು ನೀತಿ ಆಯೋಗಕ್ಕಂತೂ ಇಲ್ಲವೇ ಇಲ್ಲ. ಈಗ ಸರ್ಕಾರ ಯೋಚಿಸುತ್ತಿರುವ ಕ್ರಮ ಸಂವಿಧಾನ ವಿರೋಧಿ ಕ್ರಮವಾಗಿದೆ. ಇಂತಹ ಖಾಸಗಿ-ಸಾರ್ವಜನಿಕ ಪಾಲುದಾರಿಕೆಯ ಆರೋಗ್ಯ ಸೇವಾ ವ್ಯವಸ್ಥೆಯು ಜಾಗತಿಕಮಟ್ಟದಲ್ಲಿ ಯಶಸ್ವಿಯಾದ ಉದಾಹರಣೆಗಳಿಲ್ಲ. ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದ ಗ್ರೇಟ್ ಬ್ರಿಟನ್ ಇದನ್ನು ರದ್ದುಪಡಿಸಿದೆ.

ವರಮಾನದ ವ್ಯಸನದ ಪರ್ವ

ನಮ್ಮ ವಿತ್ತಮಂತ್ರಿ, ಪ್ರಧಾನಮಂತ್ರಿ, ಆರ್ಥಿಕ ಸಮಾಲೋಚಕರು – ಹೀಗೆ ಎಲ್ಲರೂ ’ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ’ ಎನ್ನುವುದನ್ನು ತಲೆ ಚಿಟ್ಟುಹಿಡಿಸುವಷ್ಟು ಸಾರಿ ಹೇಳುತ್ತಿದ್ದಾರೆ. ಇವರೆಲ್ಲ ನಮ್ಮದು ’ಜಗತ್ತಿನಲ್ಲಿ ಅತ್ಯಧಿಕ ಸಂಪತ್ತಿನ ಆರ್ಥಿಕತೆ’ ಎಂದೂ ಬೀಗುತ್ತಾರೆ. ನಮ್ಮ ವರಮಾನವನ್ನು 2024ರಲ್ಲಿ 5 ಟ್ರಿಲಿಯನ್ ಡಾಲರ್‌ಗೇರಿಸಲಾಗುವುದು ಎಂದೂ ಹೇಳುತ್ತಾರೆ. ಒಂದು ರೀತಿಯಲ್ಲಿ ಜಿಡಿಪಿ ವ್ಯಸನದಲ್ಲಿ ಇವರೆಲ್ಲರೂ ಬದುಕುತ್ತಿರುವಂತೆ ಕಾಣುತ್ತದೆ. ಇವರಿಗೆ ಅಭಿವೃದ್ಧಿಯೆಂದರೆ ಜಿಡಿಪಿ, ವರಮಾನ, ಸಂಪತ್ತು ಎನ್ನುವುದಾಗಿದೆ. ಆದರೆ ಜಿಡಿಪಿಯು ಅಭಿವೃದ್ಧಿಯ ಸೂಚಿಯಲ್ಲ. ಯುಎನ್‌ಡಿಪಿಯು (ಯುನೈಟೆಡ್ ನೇಶನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್) 1990ರಲ್ಲಿ ಪ್ರಕಟಿಸಿದ ಮಾನವ ಅಭಿವೃದ್ದಿ ವರದಿಯಲ್ಲಿ ಅದರ ಕರ್ತೃ ಮೆಹಬೂಬ್ ಉಲ್ ಹಕ್ ಅವರು ’ವರಮಾನವೇ ಜನರ ಬದುಕಿನ ಒಟ್ಟು ಮೊತ್ತವಲ್ಲ’ ಎಂದು ಹೇಳಿದ್ದಾರೆ. ಅಮರ್ತ್ಯ ಸೆನ್ ಪ್ರಕಾರ ಅಭಿವೃದ್ಧಿಯು ಜನರ ಬದುಕಿನ ಸಮೃದ್ಧತೆಗೆ ಸಂಬಂಧಿಸಿದೆಯೇ ವಿನಾ ಆರ್ಥಿಕ ಸಮೃದ್ಧತೆಗೆ ಸಂಬಂಧಿಸಿದುದಲ್ಲ. ಜನರ ಆಹಾರ, ಅಕ್ಷರ, ಆರೋಗ್ಯ, ಮಹಿಳೆಯರ ಸ್ವಾತಂತ್ರ್ಯ ಮುಂತಾದವು ಅಭಿವೃದ್ಧಿಯ ಸೂಚಿಗಳಾಗಿವೆ. ಇಂದು ಅಭಿವೃದ್ಧಿಯನ್ನು ಸಂಯುಕ್ತ ಮಾಪಕವಾದ ಮಾನವ ಅಭಿವೃದ್ದಿ ಸೂಚ್ಯಂಕದಿಂದ ಅಳೆಯಲಾಗುತ್ತದೆ. ಜಿಡಿಪಿಯು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಮಾನವ ಅಭಿವೃದ್ಧಿ ಸೂಚಿಗಳು ಖಾಸಗೀಕರಣದ ಆರಾಧಣ ಪರ್ವದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಸರ್ಕಾರವು ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲ ಸಂಗ್ರಹದ ಕಾರ್ಯವನ್ನೇ ಪಕಕ್ಕೆ ಬಿಸಾಡಿಬಿಟ್ಟಿದೆ. ಖಾಸಗಿ ವಲಯಕ್ಕೆ ನೆರವು ನೀಡುವ ಉದ್ದೇಶದಿಂದ ನೇರ ತೆರಿಗೆಗಳಲ್ಲಿ ವಿನಾಯತಿಗಳನ್ನು ಸಾಲುಸಾಲಾಗಿ ನೀಡುತ್ತಿದೆ. ಆದರೆ ಖಾಸಗೀಕರಣ ಆರಾಧನೆ ಪರ್ವದಲ್ಲಿ ಅಪ್ರತ್ಯಕ್ಷ ತೆರಿಗೆಯಾದ ಜಿಎಸ್‌ಟಿ ಬಗ್ಗೆ ಸರ್ಕಾರ ಬೆಳಿಗ್ಗೆ-ಸಂಜೆ ಜಪಮಾಡುತ್ತಿದೆ. ಪ್ರತ್ಯಕ್ಷ ತೆರಿಗೆಯು ಸಂಪನ್ಮೂಲ ಸಂಗ್ರಹದ ಮೂಲ ದ್ರವ್ಯ ಹಾಗೂ ಇದು ಆರೋಹಣ ಕ್ರಮದಲ್ಲಿರುವುದರಿಂದ ಇದು ಸಂಪತ್ತಿನ ಕೇಂದ್ರೀಕರಣ ಮತ್ತು ವರಮಾನದಲ್ಲಿನ ಅಸಮಾನತೆಯನ್ನು ತಡೆಯುವ ಸಾಧನವೂ ಆಗಿದೆ. ಇದನ್ನು ಉಪಯೋಗಿಸಲು ಒಕ್ಕೂಟ ಸರ್ಕಾರ ಸಿದ್ಧವಿಲ್ಲ. ಪ್ರತಿಗಾಮಿ, ಅವರೋಹಣ ತೆರಿಗೆಯಾದ ಜಿಎಸ್‌ಟಿ ಮೇಲೆ ಸರ್ಕಾರ ಅವಲಂಬಿತವಾಗಿದೆ. ಇದು ಅಭಿವೃದ್ಧಿ-ಪರ ಆರ್ಥಿಕ ನೀತಿಯೆನಿಸಿಕೊಳ್ಳುವುದಿಲ್ಲ. ತೆರಿಗೆ ಮೂಲಕ ಸಂಪನ್ಮೂಲ ಸಂಗ್ರಹ ಸರ್ಕಾರವೊಂದರ ಮೂಲ ಕರ್ತವ್ಯ. ಆದರೆ ಇಂದಿನ ಒಕ್ಕೂಟ ಸರ್ಕಾರವು ಸಂಪನ್ಮೂಲ ಸಂಗ್ರಹಕ್ಕೆ ಹಿಡಿದಿರುವ ಮಾರ್ಗ ಯಾವುದು? ಇಂದು ಒಕ್ಕೂಟ ಸರ್ಕಾರವು ಸಂಪನ್ಮೂಲಕ್ಕಾಗಿ ದೇಶದ ಭೂಮಿ, ಉದ್ದಿಮೆಗಳು, ಊರೊಟ್ಟಿಗಿನ ಸಂಪನ್ಮೂಲ, ರಸ್ತೆ, ರೈಲು ಮಾರ್ಗ, ವಿಮಾನ-ಹಡುಗು ನಿಲ್ದಾಣಗಳು, ಕ್ರೀಡಾಂಗಣ ಮುಂತಾದವುಗಳನ್ನು ಮಾರಾಟ ಮಾಡುವ ದಿವಾಳಿತನದ ಕೆಲಸಕ್ಕೆ ನಿಂತಿದೆ.

ಒಟ್ಟಾರೆ, ನೆಹರು ಮತ್ತು ಮನಮೋಹನಸಿಂಗ್ ಅವರು ಆರ್ಥಿಕತೆಯನ್ನು ಜನಸ್ನೇಹಿಯಾಗಿ, ಸಂವಿಧಾನಬದ್ಧವಾಗಿ ಮತ್ತು ಸಮಾನತೆ ನೆಲೆಯಲ್ಲಿ ಕಟ್ಟಲು ಪ್ರಯತ್ನಿಸಿದರು. ಅದರಲ್ಲಿ ಅವರು ಎಷ್ಟು ಸಾಧಿಸಿದರು, ಎಷ್ಟು ವಿಫಲರಾದರು ಅಥವಾ ಏನೆಲ್ಲ ತಪ್ಪುಗಳನ್ನೆಸಗಿದರು ಎಂಬುದು ಕೂಡ ಚರ್ಚೆಯ ವಿಷಯವೇ. ಆದರೆ ಇಂದಿನ ಸರ್ಕಾರವು ಅಭಿವೃದ್ಧಿಯನ್ನೇ ಮೂಲೆಗೆ ಬಿಸಾಕಿಬಿಟ್ಟಿದೆ. ಇದು ನಮ್ಮ ಮುಂದಿರುವ ಸವಾಲು. ರೈತರು-ಕಾರ್ಮಿಕರು, ಮಹಿಳೆಯರು, ಅಸಂಘಟಿತ ವಲಯದ ಕೂಲಿಕಾರರು, ವಲಸೆ ದುಡಿಮೆಗಾರರು ಇಂದು ಹಸಿವು, ನಿರುದ್ಯೋಗ, ವರಮಾನದಲ್ಲಿ ಕುಸಿತ, ಕೋವಿಡ್ 19, ಹಣದುಬ್ಬರ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರು(ಕರಾಳ ಮೂರು ಕೃಷಿ ಕಾಯಿದೆಗಳು) ಮತ್ತು ಕಾರ್ಮಿಕ ವರ್ಗವನ್ನು(ಕಾರ್ಮಿಕ ಕೋಡುಗಳು)ಇಂದಿನ ಸರ್ಕಾರವು ’ವಿರೋಧಿ’, ’ಶತ್ರು’ಗಳಂತೆ ನೋಡುತ್ತಿದೆ. ಖಾಸಗೀಕರಣ ಬೇಕು. ಆದರೆ ಅದರ ಆರಾಧನೆಯು ಬಡವರ, ಕಾರ್ಮಿಕರ ಹಿತಾಸಕ್ತಿಗೆ ವಿರೋಧವಾದುದಾಗಿದೆ. ಸಾರ್ವಜನಿಕ ಉದ್ದಿಮೆಗಳು 1950ರ ದಶಕದಿಂದಲೂ ಆರ್ಥಿಕತೆಗೆ ಕಾಣಿಕೆ ಸಲ್ಲಿಸುತ್ತಾ ಬಂದಿವೆ. ಅವುಗಳಲ್ಲಿನ ಸಾರ್ವಜನಿಕ ಬಂಡವಾಳವನ್ನು ಹಿಂತೆಗೆದುಕೊಳ್ಳುವುದು ಸರಿಯಲ್ಲ. ಜನರು, ಜನರ ಜೀವನೋಪಾಯ, ದುಡಿಮೆಗಾರರ ಉದ್ಯೋಗ, ಲಿಂಗ ಸಮಾನತೆ, ಆಹಾರ ಭದ್ರತೆ, ಆರೋಗ್ಯ-ಶಿಕ್ಷಣ ಹಕ್ಕು – ಇವುಗಳನ್ನು ಸರ್ಕಾರವೊಂದು ಆದ್ಯತೆಯಾಗಿ ಪರಿಗಣಿಸಬೇಕು.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಆರ್ಥಿಕ ಕುಸಿತದ ದುರಂತ : ಜನರ ಬದುಕು ಅತಂತ್ರ – ಡಾ. ಟಿ. ಆರ್. ಚಂದ್ರಶೇಖರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...