ಮಹಾರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ಮತ್ತು ರಾಜ್ಯ ಚುನಾವಣೆಗೆ ತಿಂಗಳುಗಳ ಮೊದಲು ಕಾಂಗ್ರೆಸ್ಗೆ ದೊಡ್ಡ ಹೊಡೆತ ಬಿದ್ದಿದೆ. ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಂಸದ ಅಶೋಕ್ ಚವಾಣ್ ಅವರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆಯೆ, ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಹಿರಿಯ ನಾಯಕನಿಗೆ ಬಿಜೆಪಿಯಿಂದ ರಾಜ್ಯಸಭೆಗೆ ಟಿಕೆಟ್ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಭೋಕರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಚವಾಣ್ ಅವರು ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಅವರು ಬಿಜೆಪಿಗೆ ಸೇರಿದರೆ, ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕಳೆದ ತಿಂಗಳು ಪಕ್ಷವನ್ನು ತೊರೆದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ನಂತರ ಮಹಾರಾಷ್ಟ್ರದಲ್ಲಿ ಇದು ಎರಡನೇ ದೊಡ್ಡ ಬೆಳವಣಿಗೆಯಾಗಿದೆ. ಅಲ್ಲದೆ, ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಬಾಬಾ ಸಿದ್ದಿಕ್ ಪಕ್ಷವನ್ನು ತೊರೆದು ಈ ತಿಂಗಳ ಆರಂಭದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗೆ ತೆರಳಿದರು.
ಈ ಹಿಂದೆ, ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಲ್ಲಿ ಚವಾಣ್ ಪಕ್ಷಕ್ಕೆ ಸೇರುವ ಬಗ್ಗೆ ಪ್ರಶ್ನಿಸಲಾಗಿತ್ತು. ‘ಅಶೋಕ್ ಚವಾಣ್ ಕಾಂಗ್ರೆಸ್ ತೊರೆಯುವ ಬಗ್ಗೆ ನಾನು ಮಾಧ್ಯಮಗಳಲ್ಲಿ ಕೇಳಿದ್ದೇನೆ. ಕಾಂಗ್ರೆಸ್ನಿಂದ ಹಲವಾರು ಉತ್ತಮ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ನಾಯಕರು ಕಾಂಗ್ರೆಸ್ನಲ್ಲಿ ಉಸಿರುಗಟ್ಟಿದ್ದಾರೆ. ಕೆಲವು ದೊಡ್ಡ ಮುಖಗಳು ಕಾಂಗ್ರೆಸ್ನಲ್ಲಿ ಉಸಿರುಗಟ್ಟುತ್ತಿವೆ. ಹಲವರು ಕಾಂಗ್ರೆಸ್ ಸೇರುತ್ತೇನೆ ಹೇಳಿದ್ದಾರೆ’ ಎಂದಿದ್ದರು.
ಕಾಂಗ್ರೆಸ್ ಮೂಲಗಳ ಪ್ರಕಾರ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ ಅವರೊಂದಿಗೆ ಚವಾಣ್ ಅವರ ಭಿನ್ನಾಭಿಪ್ರಾಯಗಳು ಅವರು ಪಕ್ಷ ಬದಲಾಯಿಸುವ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎನ್ನಲಾಗುತ್ತಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಂಕರರಾವ್ ಚವಾಣ್ ಅವರ ಪುತ್ರ, ಅಶೋಕ್ ಚವಾಣ್ ನಾಂದೇಡ್ ಪ್ರದೇಶದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆ. ಈ ಬದಲಾವಣೆಯು ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ; ಉಪಮುಖ್ಯಮಂತ್ರಿ ನೇಮಕ ಸಂವಿಧಾನ ಬಾಹಿರವಲ್ಲ: ಸುಪ್ರೀಂ ಕೋರ್ಟ್