Homeಮುಖಪುಟಹಲ್ದ್ವಾನಿ ಹಿಂಸಾಚಾರದ ಬಳಿಕ ಪೊಲೀಸ್‌ ದೌರ್ಜನ್ಯ: ಸ್ಥಳೀಯರ ಆರೋಪ

ಹಲ್ದ್ವಾನಿ ಹಿಂಸಾಚಾರದ ಬಳಿಕ ಪೊಲೀಸ್‌ ದೌರ್ಜನ್ಯ: ಸ್ಥಳೀಯರ ಆರೋಪ

- Advertisement -
- Advertisement -

ಬಿಜೆಪಿ ಆಡಳಿತದ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮಸೀದಿ ಮತ್ತು ಮದರಸಾವನ್ನು ಕೆಡವಿದ ಎರಡು ದಿನಗಳ ನಂತರ ಆ ಪ್ರದೇಶದ ಮುಸ್ಲಿಂ ನಿವಾಸಿಗಳು ಪೊಲೀಸ್ ದೌರ್ಜನ್ಯವು ತಮ್ಮನ್ನು ಭಯಭೀತಗೊಳಿಸಿದೆ ಎಂದು ಹೇಳುತ್ತಿದ್ದು, ಕೆಲವರು ಭಯದಿಂದ ಆ ಪ್ರದೇಶವನ್ನು ತೊರೆದಿದ್ದಾರೆ.

ಫೆಬ್ರವರಿ 8ರಂದು ಮಸೀದಿ ಮತ್ತು ಮದರಸಾವನ್ನು ಧ್ವಂಸಗೊಳಿಸಿದ ನಂತರ ಸ್ಥಳೀಯ ಜನರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಪೊಲೀಸ್ ಅಧಿಕಾರಿಗಳು ತಮ್ಮ ಮನೆಗಳಿಗೆ ನುಗ್ಗಿದರು, ಮಹಿಳೆಯರು ಸೇರಿದಂತೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಮತ್ತು ಮನೆಯಲ್ಲಿದ್ದ ಪುರುಷರನ್ನು ಬಂಧಿಸಿದ್ದಾರೆ ಎಂದು ಬಂಬೂಲ್ಪುರದ ನಿವಾಸಿಗಳು ಆರೋಪಿಸಿದ್ದಾರೆ.

ಸ್ಥಳೀಯ ಶಾಲೆಯೊಂದರಲ್ಲಿ ಅಡುಗೆ ಕೆಲಸ ಮಾಡುವ 38 ವರ್ಷದ ಶಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪೊಲೀಸ್ ಅಧಿಕಾರಿಗಳು ಶನಿವಾರ ಸಂಜೆ 4 ಗಂಟೆ ಸುಮಾರಿಗೆ ನಮ್ಮ ಮನೆಗೆ ನುಗ್ಗಿದರು. ಅವರು ನಮ್ಮ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ, ನಮ್ಮನ್ನು ತಳ್ಳಿದ್ದಾರೆ. ಬಳಿಕ ಪತಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದು, ಅವರು ಈಗ ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ ಎಂದು ಹೇಳಿದ್ದಾರೆ. ಶಮಾ ಅವರ ಪತಿ, ನಯೀಮ್(45) ಹಲ್ದ್ವಾನಿಯಲ್ಲಿ  ಮರಳನ್ನು ಸಾಗಿಸುವ ದೈನಂದಿನ ಕೂಲಿ ಕಾರ್ಮಿಕರಾಗಿದ್ದರು. ನಮಗೆ ಸಣ್ಣ ಸಣ್ಣ ಮಕ್ಕಳಿದ್ದಾರೆ, ನಮ್ಮನ್ನು ಬಿಟ್ಟುಬಿಡಿ ಎಂದು ನಾವು ಮನವಿ ಮಾಡಿದೆವು, ಈ ವೇಳೆ ಪೊಲೀಸರು ನಮಗೂ ಮಕ್ಕಳಿದ್ದಾರೆ ನಮ್ಮ ಮೇಲೆ ಏಕೆ ಕಲ್ಲು ಎಸೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ 22 ವರ್ಷದ ಮೆಹ್ರೀನ್ ಮಾತನಾಡಿದ್ದು, ನನ್ನ ಪತಿ ಆರಿಫ್(25) ಅವರನ್ನು ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ನಾಲ್ಕು ಪೊಲೀಸ್ ಅಧಿಕಾರಿಗಳು ಕರೆದೊಯ್ದರು. ಏಳು ತಿಂಗಳ ಹಿಂದೆಯಷ್ಠೇ ನಮ್ಮ ವಿವಾಹವಾಗಿತ್ತು. ಅವರಿಲ್ಲದೆ ನನಗೆ ಬದುಕಲು ಸಾಧ್ಯವಿಲ್ಲ, ನಾನು ನನ್ನ ಪತಿಯನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಾಕ್ಷ್ಯಾಧಾರಗಳಿಲ್ಲದೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವ ಉದ್ದೇಶ ನಮಗಿಲ್ಲ. ಫೆಬ್ರವರಿ 7ರ ಘಟನೆಗಳು ಮತ್ತು ಅವುಗಳ ನಂತರದ ಬೆಳವಣಿಗೆ ಬಗ್ಗೆ ಈಗ ಸುಳ್ಳು ಹೇಳಲಾಗುತ್ತಿದೆ. ನಾವು ಕಾನೂನಿಗೆ ಅನುಸಾರವಾಗಿ ಯಾವುದೇ ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.

ಫೆಬ್ರವರಿ 8ರಂದು ಪಟ್ಟಣದ ಮುನ್ಸಿಪಲ್ ಕಾರ್ಪೊರೇಶನ್ ಬಂಭೂಲ್ಪುರದಲ್ಲಿರುವ ಮಸೀದಿ ಮತ್ತು ಮದರಸಾವನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಪುರಸಭೆಯು ನೆಲಸಮಗೊಳಿಸಿತ್ತು. ಮಸೀದಿ ಕುರಿತ ಪ್ರಕರಣ ಉತ್ತರಾಖಂಡ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ದಿಢೀರ್‌ ಎಂಬಂತೆ ಈ ಬೆಳವಣಿಗೆ ನಡೆದಿತ್ತು.

ಈ ವೇಳೆ ನಡೆದ ಹಿಂಸಾಚಾರದಲ್ಲಿ 6 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ನೂರಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದೆ, ಕಾರುಗಳಿಗೆ ಬೆಂಕಿ ಹಚ್ಚಿದೆ ಮತ್ತು ಬಂಭೂಲ್ಪುರ ಪೊಲೀಸ್ ಠಾಣೆಯನ್ನು ಗುಂಪು ಸುತ್ತುವರಿದಿದೆ. ಸ್ಥಳೀಯ ಆಡಳಿತವು ಫೆಬ್ರವರಿ 8ರ ಸಂಜೆ ಕರ್ಫ್ಯೂ, ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮತ್ತು ಕಂಡಲ್ಲಿ ಗುಂಡು ಆದೇಶವನ್ನು ನೀಡಿತ್ತು. ಅಂದಿನಿಂದ ಬಂಭೂಲ್‌ಪುರದ ಹಿಂದೂ ಬಹುಸಂಖ್ಯಾತ ಪ್ರದೇಶದ ಬಳಿ ಪೊಲೀಸ್ ಬ್ಯಾರಿಕೇಡ್‌ಗಳು ಹಾಕಲಾಗಿದೆ ಮತ್ತು ಪತ್ರಕರ್ತರು ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ಫೆಬ್ರವರಿ 10ರಂದು ವರದಿಗಾರರು ಆ ಪ್ರದೇಶಕ್ಕೆ ಭೇಟಿ ನೀಡಿದಾಗ, ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು ಮತ್ತು ಅನೇಕ ಮನೆಗಳ ಬಾಗಿಲುಗಳಿಗೆ ಬೀಗಗಳನ್ನು ನೇತು ಹಾಕಲಾಗಿತ್ತು. ಹತ್ತಾರು ಕಾರುಗಳು ಮತ್ತು ಬೈಕ್‌ಗಳು ಧ್ವಂಸಗೊಂಡಿದ್ದವು. ವಾಹನಗಳ ಕಿಟಕಿಗಳು ಮತ್ತು ಹೆಡ್‌ಲೈಟ್‌ಗಳನ್ನು ಪೊಲೀಸ್ ಅಧಿಕಾರಿಗಳು ಒಡೆದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಪರ್ವೀನ್(30) ಈ ಬಗ್ಗೆ ಮಾತನಾಡಿದ್ದು, ತನ್ನ ಪತಿ ಮುಕೀಮ್ ದಿನಗೂಲಿ ನೌಕರನಾಗಿದ್ದು, ಫೆ.10ರಂದು ಸಂಜೆ ಪೊಲೀಸ್ ಅಧಿಕಾರಿಗಳು ಕರೆದೊಯ್ದರು. ಶಾಹಿದ್ (35) ತರಕಾರಿ ಮಾರಾಟಗಾರನಾಗಿದ್ದು, ಆತನನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದು ಅವರ ತಾಯಿ ಅನಿಸಾ ಹೇಳಿದ್ದಾರೆ. ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುವ ತನ್ನ ಪತಿ ಆರಿಫ್‌ನನ್ನು ಬಂಧಿಸಿದ ನಾಲ್ವರು ಪೊಲೀಸ್ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೆಹ್ರೀನ್ ಎಂಬವರು ಆರೋಪಿಸಿದರು. ಅವಳ ಒಂದು ಕೈ ಮತ್ತು ತೊಡೆಯ ಮೇಲೆ ಹಲ್ಲೆ ನಡೆಸಲಾಗಿದೆ. ಎರಡೂ ಈಗ ಊದಿಕೊಂಡಿವೆ ಎಂದು ಅವರು ಹೇಳಿದ್ದಾರೆ.

55 ವರ್ಷದ ಶಾಹೀನ್ ತನ್ನ ಮನೆಯ ಪ್ರವೇಶದ್ವಾರದಲ್ಲಿ ಅಳುತ್ತಾ, ಜೀವನೋಪಾಯಕ್ಕಾಗಿ ಮಂಚಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದ ಮಗ ಶಾರುಖ್(32)ನನ್ನು ಫೆಬ್ರವರಿ 10ರಂದು ಮಧ್ಯಾಹ್ನ 3ಗಂಟೆಗೆ ಬಂಧಿಸಲಾಗಿದೆ. ಮನೆಯೊಳಗಿದ್ದ ಟಿವಿಯನ್ನು ಧ್ವಂಸಗೊಳಿಸಿ ನಮ್ಮ ಮೇಲೆ ಹಲ್ಲೆ ನಡೆಸಿ ಮಗನನ್ನು ಎಳೆದೊಯ್ದಿದ್ದಾರೆ ಎಂದು ಹೇಳಿದ್ದಾರೆ. ಪೋಲೀಸರ ದೌರ್ಜನ್ಯದಿಂದ  ಹಲ್ದ್ವಾನಿಯಿಂದ ಮುಸ್ಲಿಮರು ವಲಸೆ ಹೋಗುವಂತಾಗಿದೆ. ನೂರಾರು ಜನರು, ಕೈಯಲ್ಲಿ ಸಾಮಾನುಗಳನ್ನು ಹಿಡಿದುಕೊಂಡು ಉತ್ತರಾಖಂಡದ ಇತರ ನಗರಗಳಿಗೆ ಮತ್ತು ಉತ್ತರಪ್ರದೇಶದ ನೆರೆಯ ಪಟ್ಟಣಗಳು ಮತ್ತು ನಗರಗಳಿಗೆ ಬಸ್ಸುಗಳನ್ನು ಹತ್ತಿದ್ದಾರೆ.

ಘಟನೆ ಬಗ್ಗೆ ಸ್ಥಳೀಯ ನಿವಾಸಿ ಪರ್ವೀನ್ ಹೇಳಿಕೆ…..

ಫೆಬ್ರವರಿ 8ರಂದು ಮಧ್ಯಾಹ್ನ 3.30ರ ಸುಮಾರಿಗೆ ನಾನು (ಪರ್ವೀನ್) ತನ್ನ ಟೆರೇಸ್‌ನಲ್ಲಿ ಬಟ್ಟೆಗಳನ್ನು ನೇತು ಹಾಕುತ್ತಿದ್ದಾಗ ಬುಲ್ಡೋಜರ್‌ಗಳು ಬಂದವು, ಡಜನ್‌ಗಟ್ಟಲೆ ಪೊಲೀಸ್ ಅಧಿಕಾರಿಗಳು ಇದ್ದರು. ಇದು ಅನಿರೀಕ್ಷಿತವಾಗಿತ್ತು ಎಂದು ಅವರು ಹೇಳಿದ್ದಾರೆ. ಸ್ಥಳೀಯ ಅಧಿಕಾರಿಗಳು ಕೆಡವಿದ ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಜಕಾರಿಯಾ ಮದರಸಾದಿಂದ ಪರ್ವೀನ್ ಅವರ ಮನೆ ಕೇವಲ 50 ಮೀಟರ್ ದೂರದಲ್ಲಿತ್ತು.

ತೆರವು ಕಾರ್ಯಾಚರಣೆ ತಡೆಯಲು ಜನರು ತಮ್ಮ ಮನೆಗಳಿಂದ ಹೊರಬಂದರು. ಸ್ಥಳೀಯ ಕೌನ್ಸಿಲರ್ ನೇತೃತ್ವದಲ್ಲಿ ಹಿರಿಯರು ಮುಂಭಾಗದಲ್ಲಿದ್ದರು. ಕಟ್ಟಡಗಳನ್ನು ಕೆಡವದಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು. ಧ್ವಂಸ ಮಾಡುವುದನ್ನು ತಡೆಯಲು ಮಹಿಳೆಯರು ಮದರಸಾದ ಪಕ್ಕದ ತೆರೆದ ಪ್ರದೇಶದಲ್ಲಿ ಕುಳಿತುಕೊಂಡರು. ಈ ವೇಳೆ ಪೊಲೀಸರು ಮಹಿಳೆಯರನ್ನು ಲಾಠಿಗಳಿಂದ ಹೊಡೆಯಲು ಪ್ರಾರಂಭಿಸಿದರು. ಇದು ಹಿಂಸೆಗೆ ಪ್ರೇರೇಪಿಸಿದ್ದು, ಆ ಮೇಲೆ ಕಲ್ಲು ತೂರಲು ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

ನೈನಿತಾಲ್‌ನ ಹಿರಿಯ ಪೊಲೀಸ್ ಅಧೀಕ್ಷಕ ಪ್ರಹ್ಲಾದ್ ನಾರಾಯಣ ಮೀನಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ, ಇವರಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ, ಪೊಲೀಸ್ ಠಾಣೆಯ ಹೊರಗೆ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳು ಸೇರಿದ್ದಾರೆ ಎಂದು ಹೇಳಿದ್ದಾರೆ.

ಡಿಜಿಪಿ ಅಭಿನವ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪೊಲೀಸರು ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆಯಲ್ಲಿ ತಮ್ಮ ಆತ್ಮರಕ್ಷಣೆ ಹಕ್ಕನ್ನು ಕಾನೂನುಬದ್ಧವಾಗಿ ಚಲಾಯಿಸಿದ್ದಾರೆ. ಇದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಇದನ್ನು ಮ್ಯಾಜಿಸ್ಟ್ರೇಟ್ ವಿಚಾರಣೆ ಮತ್ತು ಕ್ರಿಮಿನಲ್ ತನಿಖೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಹಲ್ದ್ವಾನಿ ಹಿಂಸಾಚಾರ: ಮಾಹಿತಿ ಬಿಚ್ಚಿಟ್ಟ ಮೃತರ ಸಂಬಂಧಿಕರು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...