Homeಮುಖಪುಟಹಲ್ದ್ವಾನಿ ಹಿಂಸಾಚಾರ: ಮಾಹಿತಿ ಬಿಚ್ಚಿಟ್ಟ ಮೃತರ ಸಂಬಂಧಿಕರು..

ಹಲ್ದ್ವಾನಿ ಹಿಂಸಾಚಾರ: ಮಾಹಿತಿ ಬಿಚ್ಚಿಟ್ಟ ಮೃತರ ಸಂಬಂಧಿಕರು..

- Advertisement -
- Advertisement -

ಬಿಜೆಪಿ ಆಡಳಿತದ ಉತ್ತರಖಂಡದ ಹಲ್ದ್ವಾನಿಯಲ್ಲಿ ಮಸೀದಿ ಮತ್ತು ಮದರಸಾ ಧ್ವಂಸ ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾಚಾರದ ಬಳಿಕ ಬನ್‌ಭೂಲ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಆತಂಕದಿಂದ ದಿನದೂಡುತ್ತಿದ್ದಾರೆ. ಈ ಪ್ರದೇಶದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಪೋಲಿಸರ ಬಗ್ಗೆ ಭಯದಿಂದ ಜನರು ತಮ್ಮ ಮನೆಗಳ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲಾಡಳಿತ ನೀಡಿದ ಮಾಹಿತಿಯ ಪ್ರಕಾರ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರನ್ನು ಹಲ್ದ್ವಾನಿ ನಿವಾಸಿಗಳಾದ ಫಹೀಮ್ ಖುರೇಷಿ (30), ಝಾಹಿದ್ (45), ಮಗ ಮೊಹಮ್ಮದ್ ಅನಸ್ (16), ಮೊಹಮ್ಮದ್ ಶಬಾನ್ (22), ಮತ್ತು ಬಿಹಾರ ನಿವಾಸಿ ಪ್ರಕಾಶ್ ಕುಮಾರ್ ಸಿಂಗ್ (24) ಎಂದು ಗುರುತಿಸಲಾಗಿದೆ.

ಅನಾಸ್ ಅವರ ಸಹೋದರ ಮೊಹಮ್ಮದ್ ಅಮನ್ ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.  ಹಿಂಸಾಚಾರಕ್ಕೆ ಮೊದಲು ನಾನು ಮತ್ತು ತಂದೆ ಝಾಹಿದ್ ಹುಸೇನ್ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದೆವು. ಬಳಿಕ ನಾನು ಮನೆಗೆ ಮರಳಿದೆ. ಆದರೆ ತಂದೆ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಹಿಂಸಾಚಾರದ ಸುದ್ದಿ ಗೊತ್ತಾದಾಗ ಹೊರಗಿದ್ದ ಅನಸ್‌ಗೆ ಕರೆಮಾಡಿ ಮನೆಗೆ ಮರಳುವಂತೆ ಸೂಚಿಸಿದ್ದೆ. ನನ್ನ ಸ್ನೇಹಿತೆಯೋರ್ವಳು ಮಾರುಕಟ್ಟೆಯಲ್ಲಿರುವ ಮಾಹಿತಿ ತಿಳಿದು ಆಕೆಯನ್ನು ಹುಡುಕಲು ಹೋಗಿದ್ದೆ. ಬಳಿಕ ನನ್ನ ತಂದೆ ಮನೆಗೆ ಮರಳಿದ್ದರು. ಆದರೆ ಅನಾಸ್ ಇನ್ನೂ ಬಂದಿಲ್ಲ ಎಂದು ತಂದೆ ಆತನನ್ನು ಹುಡಕಲು ಹೋಗಿದ್ದಾರೆ. ನನ್ನ ತಂದೆ ಡೇರಿಯೊಂದರ ಬಳಿ ನಿಂತಿದ್ದಾಗ ಅವರ ಎದೆಗೆ ಗುಂಡು ಬಡಿದಿತ್ತು. ನೆರೆಯಾತ ನೀಡಿದ ಮಾಹಿತಿಯಂತೆ ನಾನು ಅಲ್ಲಿಗೆ ತೆರಳಿದಾಗ ತಂದೆ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇತರ ಇಬ್ಬರ ನೆರವಿನಿಂದ ಅವರನ್ನು ಸ್ಥಳೀಯ ಕ್ಲಿನಿಕ್ ಗೆ ಸಾಗಿಸಿದ್ದೆ. ನೋಡಿದರೆ ಅನಾಸ್ ಸೊಂಟದ ಕೆಳಗೆ ಗುಂಡೇಟಿನಿಂದ ಗಾಯಗೊಂಡು ಅದಾಗಲೇ ಅಲ್ಲಿದ್ದ. ಇಬ್ಬರನ್ನೂ ಬೇರೆ ಕಡೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಅದಕ್ಕೆ ಯಾವುದೇ ವ್ಯವಸ್ಥೆ ಇರಲಿಲ್ಲ, ಇದರಿಂದ ಕೆಲವೇ ಕ್ಷಣದಲ್ಲಿ ತಂದೆ ಮತ್ತು ಸಹೋದರ ಮೃತಪಟ್ಟರು ಎಂದು ಹೇಳಿಕೊಂಡಿದ್ದಾರೆ. ಇಬ್ಬರ ಸಾವಿನ ಬಳಿಕ ಶುಕ್ರವಾರ ರಾತ್ರಿ ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ದಫನ ಕಾರ್ಯ ಮಾಡಿದ್ದೇವೆ, ಈ ವೇಳೆ ನಮ್ಮ ಕುಟುಂಬದ ಕೇವಲ ಐವರಿಗೆ ಹಾಜರಾಗಲು ಅವಕಾಶ ನೀಡಲಾಗಿತ್ತು ಎಂದು ಅಮನ್‌ ಹೇಳಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಮೃತ ಫಹೀಮ್ ಖುರೇಷಿಯ ಸೋದರ ಸಂಬಂಧಿ ಜಾವೇದ್,  ಫಹೀಮ್ ಖುರೇಷಿಯನ್ನು ನೆರೆಹೊರೆಯವರೇ ಗುಂಡಿಕ್ಕಿ ಕೊಂದಿದ್ದಾರೆ. ಅವರು ಮನೆಯಲ್ಲಿದ್ದಾಗ ರಾತ್ರಿ 7.30ರ ಸುಮಾರಿಗೆ ಯಾರೋ ತಮ್ಮ ವಾಹನಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಗಮನಿಸಿದರು. ಅದಕ್ಕೆ ಅವರು ವಿರೋಧಿಸಿದಾಗ ಅವರ ಮೆಲೆ ಗುಂಡಿನ ದಾಳಿ ನಡೆಸಲಾಗಿದೆ. ಬಳಿಕ ಫಹೀಮ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅಲ್ಲಿ ಮೃತಪಟ್ಟಿದ್ದಾರೆ. ಫಹೀಂ ತಾಯಿ, ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ ಎಂದು ಹೇಳಿದ್ದಾರೆ.

ಬನ್‌ಭೂಲ್‌ಪುರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿರುವ ಗೌಹರ್, ಹಿಂಸಾಚಾರದ ಸಮಯದಲ್ಲಿ ತನ್ನ ಮಗ ಆರಿಸ್ (18) ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕುಟುಂಬವು ಅವನನ್ನು ಬರೇಲಿಯ ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಜಿಲ್ಲಾಡಳಿತ ಹಿಂಸಾಚಾರದಲ್ಲಿ ಮೃತರ ಪಟ್ಟಿಯಲ್ಲಿ ಅವರನ್ನು ಸೇರಿಸಿಲ್ಲ ಎಂದು ಹೇಳಿದ್ದಾರೆ. ನನ್ನ ಮಗ ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಗಾರ್ಮೆಂಟ್ಸ್ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ಹಿಂಸಾಚಾರ ಪ್ರಾರಂಭವಾದಾಗ ನಾನು ಸಂಜೆ 5.45ರ ಸುಮಾರಿಗೆ ಅವರಿಗೆ ಕರೆ ಮಾಡಿ ಹಿಂತಿರುಗುವಂತೆ ಹೇಳಿದೆ. ಆದರೆ ಅವನು ಬಂದಿರಲಿಲ್ಲ, ಮತ್ತೆ 6.30ಕ್ಕೆ ಕರೆ ಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ. ನಾನು ಅವನನ್ನು ಹುಡುಕಲು ನಿರ್ಧರಿಸಿದೆ, ಹುಡುಕುತ್ತಿರುವಾಗ, ನನ್ನ ಮಗ ಚೌರಾಹಾದಲ್ಲಿ ಬಿದ್ದುಕೊಂಡಿದ್ದಾನೆ ಎಂದು ಯಾರೋ ಹೇಳಿದ್ದರು. ಇನ್ನಿಬ್ಬರ ಸಹಾಯದಿಂದ ನಾನು ಅವನನ್ನು ಮನೆಗೆ ಕರೆತಂದೆವು. ಹಿಂಸಾಚಾರದ ಹಿನ್ನೆಲೆ ಅವರನ್ನು ಬರೇಲಿಗೆ ಕರೆದೊಯ್ಯುತ್ತಿರುವಾಗ ಅವರು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಅವನು ನನ್ನ ಹಿರಿಯ ಮಗ, ನನ್ನ ಇಡೀ ಜಗತ್ತು ಆತ ಆಗಿದ್ದ ಎಂದು ಗೌಹರ್ ಹೇಳಿದ್ದಾರೆ.

ಏನಿದು ಘಟನೆ?

ಉತ್ತರಖಂಡದ ಹಲ್ದ್ವಾನಿ ಪುರಸಭೆಯು, ಅತಿಕ್ರಮಣ ವಿರೋಧಿ ಅಭಿಯಾನ ಎಂದು ಪಟ್ಟಣದ ಬನ್‌ಭೂಲ್‌ಪುರ ಪ್ರದೇಶದಲ್ಲಿ ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕರಿಯಾ ಮದರಸಾವನ್ನು   ಕೆಡವಿದೆ. ಈ ಕುರಿತ ಪ್ರಕರಣ ಇನ್ನೂ ಕೋರ್ಟ್‌ನಲ್ಲಿ ಬಾಕಿ ಇದೆ. ಆದರೆ ಮಸೀದಿಯನ್ನು ತುರ್ತಾಗಿ ಕೆಡವಲಾಗಿದೆ. ಪುರಸಭೆಯ ಈ ಕೃತ್ಯವು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆಗೆ ಕಾರಣವಾಗಿ ಐವರ ಸಾವಿಗೆ ಕಾರಣವಾಗಿದ್ದು 100 ಪೊಲೀಸ್‌ ಸಿಬ್ಬಂದಿಗಳಿಗೆ ಗಾಯವಾಗಿದೆ.

ಘರ್ಷಣೆಯ ನಂತರ ಕರ್ಫ್ಯೂ ಮತ್ತು ‘ಕಂಡಲ್ಲಿ ಗುಂಡು ಆದೇಶಗಳನ್ನು’ ನೀಡಲಾಗಿತ್ತು. ಮಸೀದಿಯ ಧ್ವಂಸದ ಬಳಿಕ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರದ ಹಿನ್ನೆಲೆ ಅರೆಸೇನಾ ಪಡೆಯ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿತ್ತು. ಹಲ್ದ್ವಾನಿಯಲ್ಲಿ ಜಿಲ್ಲಾಡಳಿತ ಕರ್ಫ್ಯೂ ವಿಧಿಸಿ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿತ್ತು. ಬಂಭೂಲ್ಪುರದಲ್ಲಿ ಹಿಂಸಾಚಾರದ ನಡೆದಿದ್ದರೂ, ಉತ್ತರಾಖಂಡ ಸರ್ಕಾರ ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿತ್ತು.

ಇದನ್ನು ಓದಿ: ಉತ್ತರಖಂಡ: ಕೋರ್ಟ್‌ ಆದೇಶವಿಲ್ಲದೆಯೇ ಮದರಸಾ ಧ್ವಂಸ: ದಾಖಲೆಯಲ್ಲಿ ಬಯಲು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇರ ನಡೆ-ನುಡಿಯ, ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು: ಸಿಎಂ ಸಿದ್ದರಾಮಯ್ಯ

0
ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ...