ಕತಾರ್ನಲ್ಲಿ ಗೂಢಚರ್ಯೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳನ್ನು ಕತಾರ್ ನ್ಯಾಯಾಲಯವು ಬಿಡುಗಡೆ ಮಾಡಿದ್ದು, ಈ ಪೈಕಿ 7 ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತೀಯ ನೌಕಾಪಡೆಯ ಮಾಜಿ ಸೈನಿಕರನ್ನು ಬಿಡುಗಡೆ ಮಾಡುವ ಕತಾರ್ ನ್ಯಾಯಾಲಯದ ನಿರ್ಧಾರವನ್ನು ವಿದೇಶಾಂಗ ಸಚಿವಾಲಯವು ಸ್ವಾಗತಿಸಿದೆ. ಈ ಕುರಿತು ವಿದೇಶಾಂಗ ಸಚಿವಾಲಯವು ಅಧಿಕೃತ ಹೇಳಿಕೆಯನ್ನು ಹೊರಡಿಸಿದ್ದು, ಈ ಹಿಂದೆ ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಗಳನ್ನು ಬಿಡುಗಡೆ ಮಾಡುವ ಕತಾರ್ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸುತ್ತೇವೆ, ಎಂಟು ಮಂದಿಯಲ್ಲಿ 7 ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆ ಮತ್ತು ಮನೆಗೆ ಕಳುಹಿಸಲು ಕ್ರಮವಹಿಸಿದ ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕತಾರ್ನಲ್ಲಿ ಸೆರೆಯಾಗಿದ್ದ ಒಟ್ಟು ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಪೈಕಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಕೊನೆಯದಾಗಿ ಬಿಡುಗಡೆಯಾದ ಯೋಧನನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಕತಾರ್ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ಗಾಗಿ ಕೆಲಸ ಮಾಡುತ್ತಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಕಳೆದ ವರ್ಷದ ಆಗಸ್ಟ್ನಲ್ಲಿ ಕತಾರ್ ಪೊಲೀಸರು ಬಂಧಿಸಿದ್ದರು.
ಬಂಧಿತರ ಮೇಲೆ ಬೇಹುಗಾರಿಕೆಯ ಆರೋಪವನ್ನು ಹೊರಿಸಲಾಗಿತ್ತು. ಈ 8 ಮಾಜಿ ಅಧಿಕಾರಿಗಳ ಜಾಮೀನು ಅರ್ಜಿಗಳನ್ನು ಹಲವಾರು ಬಾರಿ ತಿರಸ್ಕರಿಸಲಾಗಿದೆ ಮತ್ತು ಅವರ ಬಂಧನವನ್ನು ಕತಾರ್ ಅಧಿಕಾರಿಗಳು ವಿಸ್ತರಿಸಿದ್ದರು. ಬಂಧಿತ ಭಾರತೀಯರಲ್ಲಿ ನಿವೃತ್ತ ಕಮಾಂಡರ್ ಪೂರ್ಣೇಂದು ತಿವಾರಿ ಅವರು ಅಲ್ ದಹ್ರಾ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪ್ರಕರಣದಲ್ಲಿ 8 ಮಂದಿ ಅಧಿಕಾರಿಗಳಿಗೆ ಕತಾರ್ನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ದಹ್ರಾ ಗ್ಲೋಬಲ್ ಪ್ರಕರಣವು 8 ಮಂದಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಆದೇಶದ ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.
ಆ ಬಳಿಕ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳ ಮರಣದಂಡನೆಯನ್ನು ಕತಾರ್ನ ಮೇಲ್ಮನವಿ ನ್ಯಾಯಾಲಯವು ಇಳಿಸಿದ್ದು, ಮರಣದಂಡನೆಯನ್ನು ಜೈಲು ಶಿಕ್ಷೆಗೆ ಪರಿವರ್ತಿಸಿತ್ತು.
ಇದನ್ನು ಓದಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕ್ಷಮಾಪಣೆ ಕೊಟ್ಟಿದ್ದಕ್ಕೆ ಹಂಗೇರಿ ಅಧ್ಯಕ್ಷೆ ರಾಜೀನಾಮೆ: ಭಾರತದಲ್ಲಿ ಹುಟ್ಟು ಹಾಕಿದ ಚರ್ಚೆ..